ತೋಟಗಾರಿಕೆಯ ಕಾಳು ಮೆಣಸು, ಅಡಿಕೆ ಕುರಿತ ತರಬೇತಿ
ಉತ್ತಮ ಬೆಳೆಗೆ ಮಣ್ಣಿನ ಮಹತ್ವದ ಅರಿವಿರಬೇಕು ಎಂದು ಕೃಷಿ ವಿಜ್ಞಾನ ಕೇಂದ್ರ ಮೂಡಿಗೆರೆಯ ಪ್ರಾಧ್ಯಾಪಕ ಡಾ. ಸುರೇಶ್ ಹೇಳಿದರು.
ತಾಲೂಕಿನ ಅರೇಹಳ್ಳಿಯಲ್ಲಿ ಕರ್ನಾಟಕ ಕಾಫಿ ಬೆಳೆಗಾರರ ಸಂಘದ ಆವರಣದಲ್ಲಿ ಮಂಗಳವಾರ ಬಿ.ಪಿ. ಬಸವರಾಜ್ ಅಧ್ಯಕ್ಷತೆಯಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಕಾಳು ಮೆಣಸು ಮತ್ತು ಅಡಿಕೆ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಅವರು, ‘ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಸ್ಯವರ್ಗವನ್ನು ಹೆಚ್ಚಿಸುತ್ತ ಮಣ್ಣಿನ ಸವಕಳಿ ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಭೂಸವಕಳಿಯಿಂದ ಮಣ್ಣಿನ ಪೋಷಕಾಂಶಗಳು ನಶಿಸಿ ಹೋಗುತ್ತವೆ. ಮಣ್ಣಿನ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಕಳೆನಾಶಕ ಸೇರಿದಂತೆ ಇನ್ನಿತರ ರಾಸಾಯನಿಕ ವಸ್ತುಗಳ ಬಳಕೆ ಕಡಿಮೆ ಮಾಡಬೇಕು. ಆರೋಗ್ಯಕರ ಬೆಳೆಯ ಇಳುವರಿಯನ್ನು ಹೆಚ್ಚಿಸಲು ಮತ್ತು ಮಣ್ಣಿನ ಆರೋಗ್ಯವನ್ನು ಸುಧಾರಿಸಲು ಮಣ್ಣಿನ ಪರೀಕ್ಷೆ ಅಗತ್ಯವಾಗಿದೆ. ಮಣ್ಣಿನ ಪರೀಕ್ಷೆಯ ಆಧಾರದ ಮೇಲೆ ಆಗತ್ಯ ರಾಸಾಯನಿಕ ಗೊಬ್ಬರಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.
ಉಪಾಧ್ಯಕ್ಷ ಶಾರಿಬ್ ಫರ್ಹಾನ್, ಕಾರ್ಯದರ್ಶಿ ಕೆ. ಬಿ ಪುಟ್ಟರಾಜು, ಜಂಟಿ ಕಾರ್ಯದರ್ಶಿ ಬಿ. ಸಿ ಮೋಹನ್, ಮಾಜಿ ಅಧ್ಯಕ್ಷ ಮಂಜುನಾಥ್ ಶೆಟ್ಟಿ, ಜಿಲ್ಲಾ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ನಾಗರಾಜ್, ತೋಟಗಾರಿಕೆ ಇಲಾಖೆಯ ಅಮೋಘ ಸಿದ್ರಾಮ, ಹೋಬಳಿಯ ಬೆಳೆಗಾರರ ಸಂಘದ ಪದಾಧಿಕಾರಿಗಳು, ಬೆಳೆಗಾರರು ಹಾಜರಿದ್ದರು.