ಸಂಸ್ಕೃತಿ ರಕ್ಷಣೆಗೆ ಕೊಡವರ ಪಾದಯಾತ್ರೆ ಶುರು

KannadaprabhaNewsNetwork | Published : Feb 2, 2025 11:46 PM

ಸಾರಾಂಶ

‘ನಮ್ಮ ಸಂಸ್ಕೃತಿ ನಮ್ಮ ಹಕ್ಕು’ ಎಂಬ ಘೋಷವಾಕ್ಯದ ಅಡಿಯಲ್ಲಿ ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಭಾನುವಾರ ದಕ್ಷಿಣ ಕೊಡಗಿನ ಕುಟ್ಟದಿಂದ ಆರಂಭವಾಗಿರುವ ಕೊಡವ ಭಾಷಿಕರ ಕೊಡವಾಮೆ ಬಾಳೋ ಪಾದಯಾತ್ರೆಗೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಹರಿದು ಬಂದರು.

ಕನ್ನಡಪ್ರಭ ವಾರ್ತೆ ಕುಟ್ಟ (ಪೊನ್ನಂಪೇಟೆ ತಾಲೂಕು)

‘ನಮ್ಮ ಸಂಸ್ಕೃತಿ ನಮ್ಮ ಹಕ್ಕು’ ಎಂಬ ಘೋಷವಾಕ್ಯದ ಅಡಿಯಲ್ಲಿ ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಭಾನುವಾರ ದಕ್ಷಿಣ ಕೊಡಗಿನ ಕುಟ್ಟದಿಂದ ಆರಂಭವಾಗಿರುವ ಕೊಡವ ಭಾಷಿಕರ ಕೊಡವಾಮೆ ಬಾಳೋ ಪಾದಯಾತ್ರೆಗೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಹರಿದು ಬಂದರು.

ನಮ್ಮ ಸಂಸ್ಕೃತಿ, ಆಚಾರ, ವಿಚಾರ ಮತ್ತು ಉಡುಗೆ ತೊಡುಗೆಗಳ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದ್ದು, ಅದರ ರಕ್ಷಣೆ ಆಗಬೇಕು ಎಂದು ಆಗ್ರಹಿಸಿ ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಗೆ ಭಾನುವಾರ ಕೊಡಗು-ಕೇರಳ ಗಡಿಭಾಗವಾದ ಕುಟ್ಟದಲ್ಲಿ ಚಾಲನೆ ದೊರೆಯಿತು.

ಕೊಡಗಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೊಡವರು ಹಾಗೂ ಕೊಡವ ಭಾಷಿಕ ಸಮುದಾಯ ಬೃಹತ್ ಪಾದಾಯಾತ್ರೆ ಹಮ್ಮಿಕೊಂಡಿದೆ.

ಕುಟ್ಟದಲ್ಲಿ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಹ್ಮಣಿ ಸೇರಿದಂತೆ ವಿವಿಧ ಕೊಡವ ಸಮಾಜಗಳು ಹಾಗೂ ಕೊಡವ ಭಾಷಿಕ ಸಮುದಾಯಗಳ ಮುಖಂಡರು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.

ಕುಟ್ಟ ಬಸ್ ನಿಲ್ದಾಣದಲ್ಲಿ 10 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಕೊಡವ ಭಾಷಿಕ ಸಮುದಾಯಗಳ ಜನರು, ತಮ್ಮ ಸಾಂಪ್ರದಾಯಿಕ ಉಡುಗೆಯಾದ ಕುಪ್ಯೆಚಾಲೆ ತೊಟ್ಟಿದ್ದರೆ, ಕೊಡವತಿಯರು ತಮ್ಮದೇ ಕೊಡವ ಸೀರೆ ತೊಟ್ಟು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ನಮ್ಮ ಸಂಸ್ಕೃತಿ ನಮ್ಮ ಹಕ್ಕು ಎಂಬ ನಾಮಫಲಕಗಳ ಹಿಡಿದು ಮೌನವಾಗಿ ಪಾದಯಾತ್ರೆಯಲ್ಲಿ ಸಾಗಿದರು.

ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಕೊಡವರು ರಸ್ತೆಯಲ್ಲಿ ಮೂರು ನಾಲ್ಕು ಕಿಲೋ ಮೀಟರ್ ದೂರದ ವರೆಗೆ ರಸ್ತೆ ತುಂಬ ನಡೆದು ತಮ್ಮ ಒಗ್ಗಟ್ಟು ಪ್ರದರ್ಶಿಸಿದರು.

ಮೊದಲ ದಿನವೇ ಕುಟ್ಟದಿಂದ ಟಿ. ಶೆಟ್ಟಿಗೇರಿ ವರೆಗೆ 18 ಕಿಲೋ ಮೀಟರ್ ದೂರವನ್ನು ಉರಿ ಬಿಸಿಲನ್ನೂ ಲೆಕ್ಕಿಸಿದೇ ಕ್ರಮಿಸಿ ತಮ್ಮ ಶಕ್ತಿ ಪ್ರದರ್ಶಿಸಿದರು. ಮಧ್ಯಾಹ್ನದ ಸಮಯಕ್ಕೆ ಪಾದಯಾತ್ರೆ ಕಾಕೂರು ತಲುಪಿ, ಅಲ್ಲಿ ಮಧ್ಯಾಹ್ನದ ಉಪಹಾರ ಸೇವಿಸಿ ಅಲ್ಲಿಂದ ಮತ್ತೆ ತಮ್ಮ ಪಾದಯಾತ್ರೆ ಮುಂದುವರಿಸಿದರು.

ಕೊಡವರು ಸ್ವಯಂ ಪ್ರೇರಿತವಾಗಿ ಐನ್ ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಜಾಥಾದಲ್ಲಿ ಪಾಲ್ಗೊಂಡಿದ್ದರು. ಜಾಥಾದಲ್ಲಿ ಪಾಲ್ಗೊಳ್ಳಲು ಆಗಮಿಸಿದವನ್ನು ಶ್ರೀಮಂಗಲ, ಟಿ. ಶೆಟ್ಟಿಗೇರಿ ಕೊಡವ ಸಮಾಜದವರು ಸ್ವಾಗತಿಸಿದರು. ತಂಪು ಪಾನೀಯ ಹಾಗೂ ವಿವಿಧ ತಿಂಡಿ ತಿನಿಸು, ಹಣ್ಣುಗಳನ್ನು ಸಾವಿರಾರು ಪಾದಯಾತ್ರಿಗಳಿಗೆ ವಿತರಿಸಿದರು.

ಕಾಕೂರು ಜೇಸಿ ವಿದ್ಯಾಸಂಸ್ಥೆಯ ಆವರಣದಲ್ಲಿ ಸಂಘಟಕರು ಜಾಥಾದಲ್ಲಿ ಪಾಲ್ಗೊಂಡವರಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಿದ್ದರು. ಪಾದಯಾತ್ರೆಯೊಂದಿಗೆ ಕೊಡವ ವೀರರ ಭಾವಚಿತ್ರಗಳನ್ನು ಹೊತ್ತ ಸ್ತಬ್ಧಚಿತ್ರಗಳು ಗಮನ ಸೆಳೆದವು. ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ವಿವಿಧ ಕೊಡವ ಸಮಾಜಗಳು, ವಿವಿಧ ಕೊಡವ ಸಂಘ ಸಂಸ್ಥೆಗಳು, ಕೊಡವ ಭಾಷಿಕ ಸಮುದಾಯಗಳ ಕೂಟ ಸೇರಿದಂತೆ ವಿವಿಧ 21 ಕೊಡವ ಭಾಷಿಕ ಜನಾಂಗದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಅಲ್ಲಿಂದ ಟಿ. ಶೆಟ್ಟಿಗೇರಿ ವರೆಗೆ ನಡೆದು ಸಮಾವೇಶಗೊಂಡರು. ಮೊದಲ ದಿನದ ಪಾದಯಾತ್ರೆಯಲ್ಲಿ ಒಟ್ಟು 18 ಕಿಲೋ ಮೀಟರ್ ಕ್ರಮಿಸಿದರು.

ದಬ್ಬಾಳಿಕೆ ಮಾಡಿದರೆ ಸುಮ್ಮನಿರಲ್ಲ:

ಟಿ.ಶೆಟ್ಟಿಗೇರಿಯಲ್ಲಿ ಮಾತನಾಡಿದ ಅಖಿಲ ಕೊಡವ ಸಮಾಜದ ಯೂತ್ ವಿಂಗ್ ಅಧ್ಯಕ್ಷ ಚಮ್ಮಟ್ಟೀರ ಪ್ರವೀಣ್, ಇತ್ತೀಚಿನ ಕೆಲವು ವರ್ಷಗಳಿಂದ ಕೊಡವ ಭಾಷಿಗರ ಸಂಸ್ಕೃತಿ, ಆಚಾರ ವಿಚಾರ, ಉಡುಗೆ ತೊಡುಗೆಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಇದನ್ನು ಖಂಡಿಸಿ ಕೊಡವ ಭಾಷಿಗರು ಪಾದಯಾತ್ರೆ ಆರಂಭಿಸಿದ್ದೇವೆ ಎಂದರು.

ಕುಟ್ಟದಿಂದ ಜಿಲ್ಲಾ ಕೇಂದ್ರ ಮಡಿಕೇರಿ ವರೆಗೆ ಒಟ್ಟು 80 ಕಿಲೋ ಮೀಟರ್ ಪಾದಯಾತ್ರೆ ನಡೆಸಲಿದ್ದೇವೆ. ಟಿ.ಶೆಟ್ಟಿಗೇರಿ, ಪೊನ್ನಂಪೇಟೆ, ಬಿಟ್ಟಂಗಾಲ, ಮೂರ್ನಾಡು ನಂತರ ಮೇಕೇರಿಗೆ ತಲುಪಿ ಅಲ್ಲಿಂದ ಮಡಿಕೇರಿ ತಲುಪಲಿದೆ. ಫೆ.7ರಂದು ಮಡಿಕೇರಿಯಲ್ಲಿ ಕನಿಷ್ಠ 25 ಸಾವಿರ ಜನರು ಸೇರಲಿದ್ದೇವೆ. ನಮ್ಮ ಸಂಸ್ಕೃತಿ, ಆಚಾರ ವಿಚಾರಗಳ ಮೇಲೆ ದಬ್ಬಾಳಿಕೆ ಮಾಡಲು ಬಂದರೆ ಸುಮ್ಮನಿರಲ್ಲ ಎನ್ನುವುದರ ಎಚ್ಚರಿಕೆ ಇದು ಎಂದು ಹೇಳಿದ್ದಾರೆ.

ಇದು ಯಾರ ವಿರುದ್ಧವೂ ನಮ್ಮ ಪ್ರತಿಭಟನೆಯಲ್ಲ. ಇದು ನಮ್ಮ ಸಂಸ್ಕೃತಿ, ಆಚಾರ, ವಿಚಾರ ಉಡುಗೆ ತೊಡುಗೆಗಳ ರಕ್ಷಣೆಗಾಗಿ ಎನ್ನುತ್ತಲೇ ಅಖಿಲ ಕೊಡವ ಸಮಾಜದ ತಮ್ಮ ಬೃಹತ್ ಪ್ರತಿಭಟನೆಗೆ ಚಾಲನೆ ನೀಡಿದೆ ಎಂದು ಹೇಳಿದರು.ರಸ್ತೆಯುದ್ದಕ್ಕೂ ಕಸ ರಾಶಿ ಬೀಳದಂತೆ ಸ್ವಯಂ ಪ್ರೇರಿತವಾಗಿ ವಾಹನ ವ್ಯವಸ್ಥೆ ಮಾಡಲಾಗಿತ್ತು. ಎರಡು ಮೊಬೈಲ್ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ವೃದ್ಧರಿಗಾಗಿ ಟೆಂಪೋ ಟ್ರಾವೆಲ್ ವ್ಯವಸ್ಥೆ ಕೂಡ ಮಾಡಲಾಗಿತ್ತು.

ಫೆ.7ರ ವರೆಗೂ ನಡೆಯುವ ಪಾದಯಾತ್ರೆಯಲ್ಲಿ ಪ್ರಮುಖರಾದ ಅಜ್ಜಿಕುಟ್ಟಿರ ಪೃಥ್ವಿ ಸುಬ್ಬಯ್ಯ, ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ, ಮುಲ್ಲೆಂಗಡ ಮಧೂಶ್ ಪೂವಯ್ಯ ಅವರು ವಾಸ್ತವ್ಯ ಹೂಡಿ ಜಾಥಾದ ನೇತೃತ್ವವನ್ನು ವಹಿಸಿಕೊಂಡಿದ್ದಾರೆ.

........................

ಪಾಯಿಂಟ್ಸ್‌*ಕುಟ್ಟದಿಂದ ಕೊಡವಾಮೆ ಬಾಳೊ ಪಾದಯಾತ್ರೆ ಆರಂಭ

*ಹರಿದು ಬಂದ ಜನ ಸಾಗರ, ಪಾದಯಾತ್ರೆಗೆ ನಿರೀಕ್ಷೆಗೂ ಮೀರಿ ಜನ ಬೆಂಬಲ

*ಕುಟ್ಟ ಬಸ್ ನಿಲ್ದಾಣದಲ್ಲಿ ಆರಂಭವಾದ ಪಾದಯಾತ್ರೆ

*2.5 ಕಿ.ಮೀ. ಉದ್ದದ ಪಾದಯಾತ್ರೆ ವ್ಯಾಪ್ತಿ

*ಫೆ.7ರವರೆಗೆ ಕುಟ್ಟದಿಂದ ಮಡಿಕೇರಿಯವರೆಗೆ 82 ಕಿಲೋಮೀಟರ್ ನಡೆಯಲಿರುವ ಪಾದಯಾತ್ರೆ

*ಸಾಂಪ್ರದಾಯಿಕ ಉಡುಪಿನಲ್ಲಿ ಪಾಲ್ಗೊಂಡಿರುವ ಕೊಡವರು ಹಾಗೂ ಕೊಡವ ಭಾಷಿಕರು.ಮಹಿಳೆ, ಮಕ್ಕಳು ಭಾಗಿ, ಕೊಡಗಿನದ್ಯಾಂತ ಆಗಮಿಸಿರುವ ಜನರು........................ಕುಟ್ಟದಿಂದ ಜಿಲ್ಲಾಕೇಂದ್ರ ಮಡಿಕೇರಿವರೆಗೆ ಒಟ್ಟು 80 ಕಿಲೋ ಮೀಟರ್ ಪಾದಯಾತ್ರೆ ನಡೆಸಲಿದ್ದೇವೆ. ಟಿ.ಶೆಟ್ಟಿಗೇರಿ, ಪೊನ್ನಂಪೇಟೆ, ಬಿಟ್ಟಂಗಾಲ, ಮೂರ್ನಾಡು ನಂತರ ಮೇಕೇರಿಗೆ ತಲುಪಿ ಅಲ್ಲಿಂದ ಮಡಿಕೇರಿ ತಲುಪಲಿದೆ. ಫೆ.7ರಂದು ಮಡಿಕೇರಿಯಲ್ಲಿ ಕನಿಷ್ಠ 25 ಸಾವಿರ ಜನರು ಸೇರಲಿದ್ದೇವೆ.। ಪರದಂಡ ಸುಬ್ರಹ್ಮಣಿ, ಅಧ್ಯಕ್ಷ ಅಖಿಲ ಕೊಡವ ಸಮಾಜ

Share this article