ಕೆಆರ್‌ಎಸ್‌ ಪಕ್ಷದ ಪ್ರತಿಭಟನೆ ವೈಖರಿ ಸರಿಯಲ್ಲ

KannadaprabhaNewsNetwork | Published : May 26, 2025 1:33 AM
ಕೊಳ್ಳೇಗಾಲ ನಗರಸಭೆಯಲ್ಲಿ ಕೆಆರ್‌ಎಸ್‌ ಪಕ್ಷದ ಮುಖಂಡರು ಪ್ರತಿಭಟಿಸಿದ ಹಿನ್ನೆಲೆ ಸುದ್ದಿಗಾರರಿಗೆ ನಗರಸಭೆ ಆಯುಕ್ತ ರಮೇಶ್ ಮಾಹಿತಿ ನೀಡಿದರು. ರೇಖಾ ರಮೇಶ್. ಸುಮ ಸುಬ್ಬಣ್ಣ ಇನ್ನಿತರರಿದ್ದರು.
Follow Us

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ ಕೆಆರ್‌ಎಸ್ ಪಕ್ಷದವರೇ ತಪ್ಪು ಮಾಹಿತಿ ನೀಡಿ, ನಮ್ಮ ವಿರುದ್ಧ ಆರೋಪ ಮಾಡಿ ಪ್ರತಿಭಟನೆ ನಡೆಸಿರುವುದು ಸರಿಯಲ್ಲ, ಅಧಿಕಾರಿಗಳ ಫೋಟೊ ಹಾಕಿಕೊಂಡು ಧಿಕ್ಕಾರ ಕೂಗುವ ಮೂಲಕ ಅನಾವಶ್ಯಕವಾಗಿ ಅಧಿಕಾರಿಗಳಿಗೆ ತೊಂದರೆ ನೀಡುತ್ತಿದ್ದು ಇಂತಹ ಬೆಳವಣಿಗೆ ಸರಿಯಲ್ಲ ಎಂದು ಪೌರಾಯುಕ್ತ ರಮೇಶ್, ನಗರಸಭೆ ಅಧ್ಯಕ್ಷೆ ರೇಖಾ ರಮೇಶ್ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಆರ್‌ಎಸ್ ಪಕ್ಷದ ಗಣೇಶ್ ಅವರು, ತಮ್ಮ ತಾಯಿ ಹೆಸರಿನಲ್ಲಿರುವ ನಿವೇಶವನ್ನು ತಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ಸ್ಥಳ ಪರಿಶೀಲಿಸಿದ ವೇಳೆ ಅದು ನಿವೇಶನವಲ್ಲ, ಮನೆ ಎಂದು ಗೊತ್ತಾಯಿತು. ಮನೆಗೆ ಕಂದಾಯ ಪಾವತಿಸಿ ಎಂದು ಸೂಚಿಸಿದ ಹಿನ್ನೆಲೆ ಶುಕ್ರವಾರವೇ ಕಂದಾಯ ಕಟ್ಟಿದರು. ಬಳಿಕ ಅಂದೇ ಖಾತೆ ಮಾಡಿಕೊಡಲಾಯಿತು. ಆದರೆ ಅವರೇ ತಪ್ಪು ಮಾಹಿತಿ ನೀಡಿ, ಅಧಿಕಾರಿಗಳ ಪೋಟೊ ಹಾಕಿಕೊಂಡು ಧಿಕ್ಕಾರ ಕೂಗುವುದು, ನಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ನಗರಸಭೆಯಲ್ಲಿ ಮೊದಲೆ ನೌಕರರ ಕೊರತೆ ಇದೆ. ಈ ನಡುವೆಯೂ ರಾತ್ರಿ 7ರಿಂದ 8ಗಂಟೆ ತನಕ ಇರುವ ನೌಕರರನ್ನೆ ಬಳಸಿಕೊಂಡು ಸಾಕಷ್ಟು ಸಾರ್ವಜನಿಕ ಕೆಲಸ ಮಾಡಲಾಗುತ್ತಿದ್ದು ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು, ಸಮಸ್ಯೆ ಗಮನಕ್ಕೆ ತಂದು ಅಧಿಕಾರಿಗಳು ಸ್ಪಂದಿಸದ ಪಕ್ಷದಲ್ಲಿ ಅವರು ಬೇರೆ ನಿರ್ಣಯ ತೆಗೆದುಕೊಳ್ಳಲಿ ಅದನ್ನು ಬಿಟ್ಟು ನಿವೇಶನ ಎಂದು ತಪ್ಪು ಮಾಹಿತಿ ನೀಡಿ ಸಕಾಲದಲ್ಲಿ ಇ-ಸ್ವತ್ತು ನೀಡುತ್ತಿಲ್ಲ ಎಂಬ ಆರೋಪ ಸರಿಯಲ್ಲ, ಇನ್ನಾದರೂ ಕೆಆರ್ ಎಸ್‌ ಪಕ್ಷದವರು ವಾಸ್ತವ ಮರೆಮಾಚಬಾರದು, ಅನಾವಶ್ಯಕವಾಗಿ ಅಧಿಕಾರಿಗಳಿಗೆ ತೊಂದರೆ ನೀಡದೆ ಸಾರ್ವಜನಿಕ ಕೆಲಸಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.