ಕನ್ನಡಪ್ರಭ ವಾರ್ತೆ ಕುಂದಾಪುರ
ಉಡುಪಿ ಯಕ್ಷಗಾನ ಕಲಾರಂಗದ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡುವ ವಿದ್ಯಾಪೋಷಕ್ ಯೋಜನೆಯ ಫಲಾನುಭವಿ, ದ್ವಿತೀಯ ಪಿ.ಯು. ವಿದ್ಯಾರ್ಥಿನಿ ನವ್ಯಾ (ಮಮತಾ ಮತ್ತು ದಿ. ನಾಗರಾಜ ಮೊಗವೀರ ದಂಪತಿ ಪುತ್ರಿ) ಇವಳಿಗೆ ಕುಂದಾಪುರ ತಾಲೂಕಿನ ಕುಂಭಾಶಿಯ ಕೊರವಡಿಯಲ್ಲಿ, ಕಮಲಾಕ್ಷಿ ಮತ್ತು ಬೈಕಾಡಿ ಶಂಕರನಾರಾಯಣ ರಾಯರ ಸ್ಮರಣೆಯಲ್ಲಿ ಅವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳ ಪ್ರಾಯೋಜಕತ್ವದಲ್ಲಿ ನಿರ್ಮಿಸಿಕೊಟ್ಟ ‘ಕಮಲ ಶಂಕರ ನಿಲಯ’ ಮನೆಯನ್ನು ಬೈಕಾಡಿ ಶ್ರೀನಿವಾಸ ರಾವ್ ದಂಪತಿ ಉದ್ಘಾಟಿಸಿ, ತನ್ನ ಮಾತಾ ಪಿತೃಗಳ ನೆನಪಿನ ಈ ಮನೆಯಲ್ಲಿ ಸುಖ ಸಮೃದ್ಧಿ ನೆಲೆಸಲೆಂದು ಹಾರೈಸಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಯಕ್ಷಗಾನ ಕಲಾರಂಗ ತನ್ನ ರಚನಾತ್ಮಕ ಕೆಲಸಗಳಿಂದಲೇ ಸಮಾಜಕ್ಕೆ ದೊಡ್ಡ ಸಂದೇಶ ಕೊಡುತ್ತಿದೆ ಎಂದರು.ಹಿರಿಯ ನ್ಯಾಯವಾದಿ ಎ.ಎಸ್.ಎನ್. ಹೆಬ್ಬಾರ್, ಕಲಾರಂಗದಂತಹ ಸಂಸ್ಥೆ ಸಮಾಜಕ್ಕೆ ಮಾದರಿ. ಅದರ ಸದಸ್ಯನಾಗಿ ಹೆಮ್ಮೆ ಪಡುತ್ತೇನೆ ಎಂದು ಅಭಿಪ್ರಾಯಪಟ್ಟರು.
ಶಿಕ್ಷಣತಜ್ಞ ಡಾ. ಮಹಾಬಲೇಶ್ವರ ರಾವ್, ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಮೂಲಕ ಉನ್ನತ ವಿದ್ಯೆಯಿಂದ ವಂಚಿತರಾಗಬಹುದಾದ ಪ್ರತಿಭಾವಂತ ಬಡವಿದ್ಯಾರ್ಥಿಗಳು ಶಿಕ್ಷಣ ಪಡೆದು ಸಮಾಜದಲ್ಲಿ ದೊಡ್ಡ ಪರಿವರ್ತನೆಗೆ ಕಾರಣರಾಗುತ್ತಿದ್ದಾರೆ ಎಂದರು.ರವಿಶಂಕರ ರಾವ್ ಬೈಕಾಡಿ ಮಾತನಾಡಿ, ಬಡ ಪ್ರತಿಭಾವಂತ ವಿದ್ಯಾರ್ಥಿನಿಗೆ ಅವಶ್ಯಕವಾಗಿದ್ದ ಮನೆ ನಿರ್ಮಿಸಿ ಕೊಡಲು ಅವಕಾಶ ಕಲ್ಪಿಸಿದ ಯಕ್ಷಗಾನ ಕಲಾರಂಗದ ಇಡೀ ತಂಡಕ್ಕೆ ನಮ್ಮ ಕುಟುಂಬ ಸದಾ ಋಣಿಯಾಗಿದೆ ಎಂದು ಧನ್ಯತೆ ವ್ಯಕ್ತಪಡಿಸಿದರು.ಈ ಸಂದರ್ಭ ನಿರ್ಮಲಾ ಬೈಕಾಡಿ, ಡಾ. ವತ್ಸಲಾ ಬೈಕಾಡಿ, ಸಾಲಿಗ್ರಾಮ ವಾಸುದೇವ ಕಾರಂತ, ಡಾ. ಮನೋಹರ ಉಪಾಧ್ಯ, ಕಾಶೀಪತಿ ಅಲ್ಸೆ, ಮಹಾಬಲೇಶ್ವರ ಹೇರ್ಳೆ, ಸತೀಶ ಉಡುಪ, ತಮ್ಮಯ್ಯ ಹೇರ್ಳೆ ಯಕ್ಷಗಾನ ಕಲಾರಂಗದ ಎಸ್. ವಿ. ಭಟ್, ಪ್ರೊ. ಕೆ. ಸದಾಶಿವ ರಾವ್, ಯು. ವಿಶ್ವನಾಥ ಶೆಣೈ, ಯು.ಎಸ್. ರಾಜಗೋಪಾಲ ಆಚಾರ್ಯ, ವಿಜಯ ಕುಮಾರ್ ಮುದ್ರಾಡಿ, ಕಿಶೋರ್ ಸಿ. ಉದ್ಯಾವರ, ಕೃಷ್ಣಮೂರ್ತಿ ಭಟ್, ಡಾ. ರಾಜೇಶ್ ನಾವುಡ, ಗಣೇಶ ಬ್ರಹ್ಮಾವರ, ಎಚ್.ಎನ್. ವೆಂಕಟೇಶ್, ಗಣಪತಿ ಭಟ್, ಜಯರಾಮ ಪಡಿಯಾರ್, ನರಸಿಂಹ ಮೂರ್ತಿ, ನರಸಿಂಹ ಮಧ್ಯಸ್ಥ, ವಿದ್ವಾನ್ ಶಾನಾಡಿ ಗೋವಿಂದ ಭಟ್ ಹಾಗೂ ಶಿಕ್ಷಕರಾದ ಗಣೇಶ್ ಕಾಂಚನ್ ಭಾಗವಹಿಸಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.