ಕುವೆಂಪು ಡಾಂಭಿಕತೆ, ಗೊಡ್ಡು ಸಂಪ್ರದಾಯಗಳಿಗೆ ವಿರೋಧವಾಗಿದ್ದರು: ಅಧ್ಯಕ್ಷ ಬಿ.ಎಲ್.ಶಂಕರ್

KannadaprabhaNewsNetwork | Published : Jul 2, 2025 11:49 PM
೨ಕೆಎಲ್‌ಆರ್-೮-೧ಕೋಲಾರದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮಂಗಸಂದ್ರ ಸ್ನಾತಕೋತ್ತರ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ‘ಕುವೆಂಪು ಹೊಸನೋಟ’ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಕಾರ್ಯಕ್ರಮದಲ್ಲಿ ಕುವೆಂಪು ಪ್ರತಿಷ್ಠಾನ ಪ್ರಕಟಿಸಿದ ಕುವೆಂಪು ನಾಡು ನುಡಿ ಮತ್ತು ವೈಚಾರಿಕತೆ ಪುಸ್ತಕವನ್ನು  ಕುಲಪತಿ ಪ್ರೊ.ನಿರಂಜನವಾನಳ್ಳಿ ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

ಕುಪ್ಪಳ್ಳಿ ಕುವೆಂಪು ಪ್ರತಿಷ್ಠಾನ ಬೆಂಗಳೂರು ಉತ್ತರ ವಿವಿ ಆಶ್ರಯದಲ್ಲಿ ಇಲ್ಲಿ ‘ಕುವೆಂಪು ಹೊಸನೋಟ’ವಿಚಾರ ಸಂಕಿರಣ ನಡೆಸಲು ಒಪ್ಪಿಕೊಂಡಿದ್ದು ಸ್ತುತ್ಯಾರ್ಹ ಎಂದು ಧನ್ಯವಾದ ತಿಳಿಸಿ, ಕುವೆಂಪು ಅವರು ಸಾಹಿತ್ಯ ಕ್ಷೇತ್ರದಲ್ಲಿ ಮೇಲ್ಪಂಕ್ತಿಯ ಕವಿಯಾಗಿದ್ದಾರೆ, ಅವರು ಕನ್ನಡಕ್ಕೆ ಸಲ್ಲಿಸಿದ ಸೇವೆ ಸ್ಮರಣೀಯವಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರ

ಕುವೆಂಪು ಅವರು ಡಾಂಭಿಕತೆ, ಗೊಡ್ಡು ಸಂಪ್ರದಾಯಗಳಿಗೆ ವಿರುದ್ಧವಾಗಿದ್ದು, ತಾವು ನಂಬಿದ ತತ್ವಗಳಿಗೆ ಬದ್ಧರಾಗಿರುವ ಮೂಲಕ ನಿಷ್ಠುರ ನಿಲುವು ಹೊಂದಿದ್ದರು ಎಂದು ಕುಪ್ಪಳ್ಳಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಮಾಜಿ ಸಭಾಪತಿ ಬಿ.ಎಲ್.ಶಂಕರ್ ತಿಳಿಸಿದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮಂಗಸಂದ್ರ ಸ್ನಾತಕೋತ್ತರ ಕೇಂದ್ರ ಹಾಗೂ ಕುವೆಂಪು ಪ್ರತಿಷ್ಠಾನ ಕುಪ್ಪಳ್ಳಿ ಇವರ ಜಂಟಿ ಸಹಯೋಗದಲ್ಲಿ ಸ್ನಾತಕೋತ್ತರ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ‘ಕುವೆಂಪು ಹೊಸನೋಟ’ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಕುವೆಂಪು ಅವರ ತತ್ವಗಳು ಬಸವಣ್ಣ, ಅಂಬೇಡ್ಕರ್ ತತ್ವಗಳಂತೆ ಇದ್ದು, ಮಾನವೀಯತೆಗೆ ಒತ್ತು ಕೊಡುತ್ತವೆ. ಮನುಷ್ಯನನ್ನು ಎಲ್ಲಾ ಸಂಕೋಲೆಗಳಿಂದ ಕಳಚಲು ಕರೆ ನೀಡುತ್ತವೆ ಎಂದು ತಿಳಿಸಿದರು.

ಇಂದಿನ ವಿದ್ಯಾರ್ಥಿಗಳಿಗೆ ಕುವೆಂಪು ಅವರ ಮಾನವೀಯ ತತ್ವಗಳು, ವಿಶ್ವಮಾನವ ಸಂದೇಶವನ್ನು ತಲುಪಿಸುವ ಕೆಲಸವಾಗಬೇಕು, ಸಮಾಜದಲ್ಲಿ ಸಮಾನತೆ, ಭಾವೈಕ್ಯತೆ, ಸೌಹಾರ್ದತೆ ನೆಲೆಸಲು ಕುವೆಂಪು ಅವರ ಸಾಹಿತ್ಯ ಓದುವ ಅಗತ್ಯವಿದೆ ಎಂದರು.

ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯವಾಗಬಾರದು, ಅವನ ನೈತಿಕ ವ್ಯಕ್ತಿತ್ವ, ಮಾನವೀಯ ಗುಣದಿಂದ ಮಾತ್ರ ಸಮಾಜದಲ್ಲಿ ಮುಖ್ಯನಾಗಬೇಕು ಎಂದು ಕುವೆಂಪು ನಂಬಿದ್ದರು ಎಂದು ತಿಳಿಸಿದ ಶಂಕರ್, ಒಂದು ಮಗು ಹುಟ್ಟಿದಾಗ ಅವನು ವಿಶ್ವಮಾನವನಾಗಿರುತ್ತಾನೆ. ಆದರೆ ಆ ಮಗುವನ್ನು ಜಾತಿ, ಮತದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು ಎಂದರು.

ಬುದ್ಧ- ಬಸವನ ಹಾಗೆ ವೈಚಾರಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಲು ಹೇಳುತ್ತಿದ್ದ ಕುವೆಂಪುರವರು ಜಾತ್ಯಾತೀತ ಮನೋಭಾವದಿಂದ ಬಂದ ಆಶಯವೇ ವಿಶ್ವಮಾನವ ಸಂದೇಶವಾಗಿದೆ ಎಂದು ತಿಳಿಸಿದರು.

ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಮೂಲಕ ಎಲ್ಲವನ್ನೂ ಒಗ್ಗೂಡಿಸಿ ನೋಡುವುದು ಕುವೆಂಪು ಅವರ ತತ್ವವಾಗಿತ್ತು, ಅವರು ಸರಳ ವಿವಾಹ ಪದ್ಧತಿಯನ್ನು ಪ್ರೋತ್ಸಾಹಿಸಿದವರು, ಅವರ ಸಾಹಿತ್ಯ, ಕಲೆಗಳಲ್ಲಿಯೂ ಈ ತತ್ವಗಳನ್ನು ಕಾಣಬಹುದಾಗಿದೆ ಎಂದು ತಿಳಿಸಿದರು.

ಕುವೆಂಪು ಪ್ರತಿಷ್ಠಾನಕ್ಕೆ ವಿವಿಯಿಂದ ಧನ್ಯವಾದ:

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವಿಯ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಮಾತನಾಡಿ, ಕುಪ್ಪಳ್ಳಿ ಕುವೆಂಪು ಪ್ರತಿಷ್ಠಾನ ಬೆಂಗಳೂರು ಉತ್ತರ ವಿವಿ ಆಶ್ರಯದಲ್ಲಿ ಇಲ್ಲಿ ‘ಕುವೆಂಪು ಹೊಸನೋಟ’ವಿಚಾರ ಸಂಕಿರಣ ನಡೆಸಲು ಒಪ್ಪಿಕೊಂಡಿದ್ದು ಸ್ತುತ್ಯಾರ್ಹ ಎಂದು ಧನ್ಯವಾದ ತಿಳಿಸಿ, ಕುವೆಂಪು ಅವರು ಸಾಹಿತ್ಯ ಕ್ಷೇತ್ರದಲ್ಲಿ ಮೇಲ್ಪಂಕ್ತಿಯ ಕವಿಯಾಗಿದ್ದಾರೆ, ಅವರು ಕನ್ನಡಕ್ಕೆ ಸಲ್ಲಿಸಿದ ಸೇವೆ ಸ್ಮರಣೀಯವಾಗಿದೆ ಎಂದರು.

ಇಂತಹ ಕವಿಯ ಆದರ್ಶ ನಮಗೆಲ್ಲಾ ಅನುಕರಣೀಯವಾಗಿದೆ, ವಿದ್ಯಾರ್ಥಿ ಸಮುದಾಯ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕುವೆಂಪು ಅವರ ವಿಶ್ವಮಾನವ ಸಂದೇಶ ಜಾತಿ, ಧರ್ಮದ ಎಲ್ಲೆ ಮೀರಿ ಮಾನವೀಯತೆಯನ್ನು ಎತ್ತಿ ಹಿಡಿಯುತ್ತದೆ. ಅವರ ತತ್ವಗಳಲ್ಲಿ ಪ್ರಮುಖವಾದವುಗಳೆಂದರೆ ಜಾತಿ ಬೇಡ, ಮತ ಬೇಡ, ಎಲ್ಲ ದೇವರಿಗೂ ಬೇಡ ಮನುಜಮತ, ವಿಶ್ವಪಥದ ಮಾತುಗಳು ಸರ್ವಕಾಲಕ್ಕೂ ಪ್ರಸ್ತುತ ಎಂದರು.

ಕಾರ್ಯಕ್ರಮದಲ್ಲಿ ಆಡಳಿತ ವಿಭಾಗದ ವಿವಿಯ ಕುಲಸಚಿವ ಸಿ.ಎನ್.ಶ್ರೀಧರ್, ಮೌಲ್ಯಮಾಪನ ಕುಲಸಚಿವ ಪ್ರೊ.ಎನ್.ಲೋಕನಾಥ್, ವಿವಿಯ ವಿತ್ತಾಧಿಕಾರಿ ಬಿ.ವಿ.ವಸಂತಕುಮಾರ್, ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಪ್ರೊ.ಡಿ.ಕುಮುದಾ ಮತ್ತಿತರರು ಉಪಸ್ಥಿತರಿದ್ದರು.

ವಿಚಾರ ಸಂಕಿರಣ, ಎರಡು ಗೋಷ್ಠಿಗಳು:

ವಿಚಾರ ಸಂಕಿರಣದ ಅಂಗವಾಗಿ ನಡೆದ ಗೋಷ್ಠಿ-೧ರಲ್ಲಿ ಕುವೆಂಪು ನಾಟಕಗಳ ಕುರಿತು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್ ಪುಷ್ಪಾ ಮಾತನಾಡಿದರು. ಕುವೆಂಪು ಕಾವ್ಯಗಳ ಕುರಿತು ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ರವಿಕುಮಾರ್ ಬಾಗಿ ಮಾತನಾಡಿದ್ದು, ಗೋಷ್ಠಿಯ ಅಧ್ಯಕ್ಷತೆಯನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ಜಿ.ಸಿದ್ದರಾಮಯ್ಯ ವಹಿಸಿದ್ದರು.

ಗೋಷ್ಠಿ- ೨ರಲ್ಲಿ ವಿಚಾರ ಸಾಹಿತ್ಯದ ಕುರಿತು ಸಾಹಿತಿ ಹಾಗೂ ಹಿರಿಯ ಸಾಫ್ಟ್‌ವೇರ್ ಇಂಜಿನಿಯರ್ ಎಸ್.ಆರ್.ವಿಜಯಶಂಕರ್ ಹಾಗೂ ಶ್ರೀರಾಮಾಯಣದರ್ಶನಂ ಮಹಾಕಾವ್ಯದ ಕುರಿತು ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಕೆ.ವೈ.ನಾರಾಯಣಸ್ವಾಮಿ ಮಾತನಾಡಿದರು. ಬೆಂಗಳೂರು ವಿವಿ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಪ್ರೊ.ಡಿ.ಡೊಮಿನಿಕ್ ಅಧ್ಯಕ್ಷತೆ ವಹಿಸಿದ್ದು, ಉತ್ತರ ವಿವಿ ಕುಲಪತಿಗಳಾದ ಪ್ರೊ.ನಿರಂಜನ ವಾನಳ್ಳಿ ಸಮಾರೋಪ ಭಾಷಣ ಮಾಡಿದರು.

ಇದೇ ಸಂದರ್ಭದಲ್ಲಿ ಕುವೆಂಪು ಪ್ರತಿಷ್ಠಾನ ಪ್ರಕಟಿಸಿದ ಕುವೆಂಪು ನಾಡು- ನುಡಿ ಮತ್ತು ವೈಚಾರಿಕತೆ ಪುಸ್ತಕವನ್ನು ಕುಲಪತಿ ಪ್ರೊ.ನಿರಂಜನ ವಾನಳ್ಳಿ ಬಿಡುಗಡೆ ಮಾಡಿದರು. ಪ್ರತಿಷ್ಠಾನವು ಈ ಪುಸ್ತಕವನ್ನು ಉಚಿತವಾಗಿ ಎಲ್ಲ ವಿದ್ಯಾರ್ಥಿಗಳಿಗೆ ವಿತರಿಸಿತು.

PREV