ಬಿರು ಬಿಸಿಲಿಗೆ ನಲುಗಿರುವ ಹೊಗೆಸೊಪ್ಪು ಸಸಿ ಮಡಿ । ಜಮೀನಿನಲ್ಲಿ ನಾಟಿಗೆ ಕಾದಿರುವ ರೈತ । ಸೊರಗು ರೋಗದ ಭೀತಿ
ಶೇಖರ್ ಯಲಗತವಳ್ಳಿಕನ್ನಡಪ್ರಭ ವಾರ್ತೆ ಅರಕಲಗೂಡು
ತಾಲೂಕಿನಲ್ಲಿ ತಂಬಾಕು ಉತ್ಪಾದನೆಗೆ ಹೆಚ್ಚು ಆಸಕ್ತಿ ಹೊಂದಿರುವ ರೈತರಿಗೆ ವರುಣನ ಮುನಿಸು ಹೊಡೆತ ನೀಡಿದ್ದು ನಾಟಿ ಕಾರ್ಯಕ್ಕೆ ಹಿನ್ನಡೆ ಉಂಟು ಮಾಡಿದೆ.ಪ್ರಮುಖ ವಾಣಿಜ್ಯ ಬೆಳೆಯಾದ ಹೊಗೆಸೊಪ್ಪು ಬೆಳೆಯಲು ರೈತರು ಈಗಾಗಲೇ ಸಸಿ ಮಡಿ ಬೆಳೆಸಿಕೊಂಡಿದ್ದಾರೆ. ದುರಾದೃಷ್ಟವಶಾತ್ ಏಪ್ರಿಲ್ ತಿಂಗಳು ಕಳೆಯುತ್ತಾ ಬಂದರೂ ವರುಣ ಕೃಪೆ ತೋರಿಲ್ಲ. ಬದಲಾಗಿ ಬೇಸಿಗೆ ಬಿರು ಬಿಸಿಲಿನ ತಾಪಕ್ಕೆ ನೀರಿನ ಅಭಾವ ತಲೆದೋರಿ ಬೆಳೆಸಿದ್ದ ಸಸಿ ಮಡಿಗಳು ನಲುಗುತ್ತಿದ್ದು ರೈತರನ್ನು ಕಂಗೆಡಿಸಿದೆ.
ಬಿಸಿಲಿನ ತಾಪಮಾನದಿಂದ ಸಸಿ ಮಡಿಗಳನ್ನು ರಕ್ಷಿಸಿಕೊಳ್ಳಲು ರೈತರು ಟ್ರೇ ಸಸಿ ಬಿತ್ತನೆ ಮೊರೆ ಹೋಗಿದ್ದಾರೆ. ಸಸಿ ಮಡಿಗಳನ್ನು ಟ್ರೇನಲ್ಲಿ ಬೆಳೆಸಿದರೆ ಮಳೆ ಬಿದ್ದ ತಕ್ಷಣ ನಾಟಿ ಮಾಡಿದರೆ ಗಿಡಗಳು ತೇವಾಂಶದ ಕೊರತೆ ನೀಗಿ ಬೇಗನೆ ಬೆಳವಣಿಗೆ ಕಾಣಲು ಸಾಧ್ಯವಾಗುತ್ತದೆ ಎಂಬ ಕಾರಣಕ್ಕಾಗಿ ಹೆಚ್ಚಿನ ರೈತರು ಸಸಿ ಮಡಿಗಳನ್ನು ಟ್ರೇನಲ್ಲಿ ಬೆಳೆಸಲು ಮುಂದಾಗಿದ್ದಾರೆ.ಕಳೆದ ಬಾರಿ ಮಾರುಕಟ್ಟೆಯಲ್ಲಿ ತಂಬಾಕಿಗೆ ಉತ್ತಮ ಬೆಲೆ ದೊರೆತ ಖುಷಿಯಲ್ಲಿ ರೈತರು ಈ ಸಲ ಹೊಗೆಸೊಪ್ಪು ಬೆಳೆಯಲು ಹೆಚ್ಚಿನ ಒಲವು ತೋರಿದ್ದಾರೆ. ಎರಡು ತಿಂಗಳ ಹಿಂದೆಯೇ ಸಸಿ ಮಡಿ ಬಿತ್ತನೆ ನಡೆಸಿ ಇದೀಗ ಮಳೆಗಾಗಿ ಮುಗಿಲಿನತ್ತ ದೃಷ್ಟಿ ನೆಟ್ಟಿದ್ದಾರೆ. ಒಂದೆಡೆ ಸಸಿ ಮಡಿಗಳು ಬೆಳೆದು ನಿಂತಿವೆ. ಮತ್ತೊಂದಡೆ ಮಳೆಯನ್ನೇ ನೆಚ್ಚಿಕೊಂಡಿರುವ ರೈತರು ಇನ್ನೂ ಜಮೀನು ಉಳುಮೆ ಕೂಡ ಮಾಡಿಲ್ಲ.
ಸಕಾಲದಲ್ಲಿ ನಾಟಿ ಕಾರ್ಯಕ್ಕೆ ಹಿನ್ನಡೆಯಾದರೆ ಸಸಿ ಮಡಿಗಳಿಗೆ ಕುತ್ತು ಬರಲಿದೆ. ಕೆಲವು ಕಡೆ ಸಸಿ ಮಡಿಗಳಲ್ಲಿ ಸೊರಗು ಕಾಣಿಸಿಕೊಳ್ಳಲಾರಂಭಿಸಿದೆ. ಅಲ್ಲದೇ ಕರಿಕಡ್ಡಿ ರೋಗ ಬಾಧಿಸುತ್ತಿದೆ.ತಂಬಾಕು ಗಿಡಗಳಲ್ಲಿ ಕಾಣಿಸಿಕೊಳ್ಳುವ ಸೊರಗು ರೋಗವನ್ನು ಪರಿಸರ ಸ್ನೇಹಿಯಾಗಿ ಮತ್ತು ಪರಿಣಾಮಕಾರಿಯಾಗಿ ನಿಯಂತ್ರಿಸಲು ಟ್ರೈಕೋಡರ್ಮಾ ಬಳಕೆ ಅತ್ಯವಶ್ಯಕ. ಟ್ರೇ ಮಾಡುವಾಗ ಕೋಕೋಪಿತ್ ಜತೆ ಬೆಳೆಸಿದ ಟ್ರೈಕೋಡರ್ಮಾ ಮಿಶ್ರಣದಲ್ಲಿ ತಂಬಾಕು ಸಸಿ ಬೆಳೆಸಿದರೆ ಸೊರಗು ರೋಗವನ್ನು ಟ್ರೇ ಮತ್ತು ಜಮಿನಿನಲ್ಲಿ ಹತೋಟಿಗೆ ತರಬಹುದು.
ಟ್ರೈಕೋಡರ್ಮಾವನ್ನು ಒಂದು ಚೀಲ ಕೋಕೋಪಿತ್ಗೆ ಒಂದು ಬಾಣಲಿಯಷ್ಟು ಬೆರೆಸಿ ಟ್ರೇ ತಯಾರು ಮಾಡಿಕೊಳ್ಳಬೇಕು. ಇದರಿಂದ ಸೊರಗು ರೋಗ ನಿಯಂತ್ರಣಕ್ಕೆ ಔಷಧಿ ಸಿಂಪಡಿಸುವ ಅವಶ್ಯಕತೆ ಇರುವುದಿಲ್ಲ. ಇದರಿಂದ ರೋಗದ ನಿಯಂತ್ರಣ ಮತ್ತು ಹಣದ ಉಳಿತಾಯಕ್ಕೆ ನೆರವಾಗಲಿದೆ ಎನ್ನುತ್ತಾರೆ ತಂಬಾಕು ಮಾರುಕಟ್ಟೆ ಅಧಿಕಾರಿಗಳು.ಜಮೀನಿನಲ್ಲಿ ಸೊರಗು ರೋಗ, ಕಪ್ಪು ಕಾಂಡ ರೋಗ ನಿಯಂತ್ರಿಸಲು ಮುನ್ನೆಚ್ಚರಿಕಾ ಕ್ರಮವಾಗಿ ಸಸಿ ಮಡಿಗಳಿಗೆ ಜಮೀನಿಗೆ ನಾಟಿ ಮಾಡುವ ಮೂರ್ನಾಲ್ಕು ದಿನ ಮುಂಚಿತವಾಗಿ 20 ಗ್ರಾಂ ರಿಡೋಮಿಲ್ ಗೋಲ್ಡ್ , 10 ಗ್ರಾಂ ಗ್ಲೋಇಟ್ ಮತ್ತು 100 ಗ್ರಾಂ ಪೊಟಾಶಿಯಂ ನೈಟ್ರೇಟ್ 15 ಲೀಟರ್ ಸ್ಪ್ರೇ ಕ್ಯಾನಿಗೆ ಹಾಕಿ ಟ್ರೇ ಸಸಿಗಳಿಗೆ ಸಿಂಪಡಿಸಿದ ನಂತರ ಜಮೀನಿಗೆ ನಾಟಿ ಮಾಡುವುದು ಸೂಕ್ತ.
ಬಿರು ಬೇಸಿಗೆಯನ್ನು ಎದುರಿಸಿ ಹೊಗೆಸೊಪ್ಪು ಸಸಿ ಮಡಿ ಬೆಳೆಸಿದ್ದು ನಾಟಿ ಕಾರ್ಯಕ್ಕೆ ಮಳೆ ಕೈಕೊಟ್ಟಿದೆ. ಇನ್ನೂ ಜಮೀನು ಉತ್ತು ಹದಗೊಳಿಸಿಕೊಂಡಿಲ್ಲ. ಈಗಾಗಲೇ ಸಸಿ ಮಡಿಗಳು ಮಾತ್ರ ಬೆಳೆದಿವೆ. ಸಕಾಲದಲ್ಲಿ ನಾಟಿ ಮಾಡಲು ಸಾಧ್ಯವಾಗದೆ ಮಳೆಗಾಗಿ ಕಾಯುವಂತಾಗಿದೆ.ಕುಮಾರ, ರೈತ.
2024-25ನೇ ಬೆಳೆ ಸಾಲಿಗೆ ಗೊಬ್ಬರದ ಮುಂಗಡ ಹಣ ಕಡ್ಡಿತವಾಗಿರುವ ರೈತರು ಮಂಡಳಿಯ ಕಚೇರಿಯ ಬಳಿ ಬಂದು ಸೂಕ್ತ ದಾಖಲಾತಿಗಳನ್ನು ಒದಗಿಸಿ ತಂಬಾಕು ಪರವಾನಗಿ ನವೀಕರಿಸಿಕೊಳ್ಳಬೇಕು. ಪರವಾನಗಿ ನವೀಕರಿಸಿದರಿಗೆ ಮೊದಲ ಆದ್ಯತೆ ನೀಡಲಾಗುವುದು.ಬ್ರಿಜ್ ಭೂಷಣ್, ತಂಬಾಕು ಮಾರುಕಟ್ಟೆ ಹರಾಜು ಅಧೀಕ್ಷಕ, ರಾಮನಾಥಪುರ.