ಸಾಗರ ಪಟ್ಟಣದ ರಾಮನಗರದಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮಕ್ಕೆ ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಸಾಗರ
ಈ ಭಾಗದ ಸಮಾಜ ಸುಧಾರಣೆಯಲ್ಲಿ ಭೂಮಿಗಾಗಿ ನಡೆದ ಸುದೀರ್ಘ ಹೋರಾಟ ಹಾಗೂ ಭಾವೈಕ್ಯತೆಯ ಸಾಹಿತ್ಯದ ಕೊಡುಗೆ ಅಪಾರ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ ಅಭಿಪ್ರಾಯಪಟ್ಟರು.
ಪಟ್ಟಣದ ರಾಮನಗರದಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ದತ್ತಿ ಕಾರ್ಯಕ್ರಮದಲ್ಲಿ ಕಾಗೋಡು ಹೋರಾಟ ಒಂದು ಚಿಂತನೆ ದತ್ತಿ ಹಾಗೂ ಅಬ್ಬಾಸ ಅಬ್ಬಲಗೆರೆ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ನಂತರ ಭೂಮಿಗಾಗಿ ನಡೆದ ಕಾಗೋಡು ಹೋರಾಟದಲ್ಲಿ ಹಿರಿಯರ ಪರಿಶ್ರಮ ಎಷ್ಟಿತ್ತೆಂದು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ೫ ದಶಕದ ಬಳಿಕವೂ ಅಂದಿನ ಸುದೀರ್ಘ ಹೋರಾಟ ಈ ಭಾಗವರಿಗೆ ಸ್ಪೂರ್ತಿಯಾಗಿದೆ. ಗಣಪತಿಯಪ್ಪನವರು ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಿದ್ದನ್ನು ಈಗಲೂ ಜನ ಮರೆತಿಲ್ಲ. ಜೊತೆಯಲ್ಲಿ ಸಾಮಾಜಿಕ ಬದಲಾವಣೆಗೆ ನಾಂದಿ ಹಾಡಿದ ಅಬ್ಬಾಸ್ಅಬ್ಬಲಗೆರೆಯವರ ಸಾಹಿತ್ಯವೂ ಇಂದಿನವರ ಓದಿನ ಮತ್ತು ಬದುಕಿನ ಭಾಗವಾಗಬೇಕು. ಮುಖ್ಯವಾಗಿ ಅವುಗಳನ್ನು ವಿಶ್ಲೇಷಿಸುವ ಸಾಂಸ್ಕೃತಿಕ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಭೂಮಿ-ಈ ಹೊತ್ತಿನ ಆತಂಕ ಕುರಿತು ಸಾಮಾಜಿಕ ಚಿಂತಕ ಶಿವಾನಂದ ಕುಗ್ವೆ, ಭಾವೈಕ್ಯತೆಗೆ ಸಾಹಿತ್ಯದ ಕೊಡುಗೆ ಬಗ್ಗೆ ಸಾಹಿತಿ ಡಿ.ಹೆಚ್.ಸೂರ್ಯಪ್ರಕಾಶ್ ಉಪನ್ಯಾಸ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಬಿ.ಟಿ.ಶೇಖರಪ್ಪ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ, ಸಂಸ್ಥೆ ಆಡಳಿತಾಧಿಕಾರಿ ವಿ.ಎಂ.ರಘು, ಕಜಾಪ ಪ್ರಧಾನ ಕಾರ್ಯದರ್ಶಿ ಉಮೇಶ್ ಹಿರೇನೆಲ್ಲೂರು, ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಕಸ್ತೂರಿ ಸಾಗರ, ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಅಣ್ಣಪ್ಪ, ಪ್ರಭಾರ ತರಬೇತಿ ಅಧಿಕಾರಿ ರಮೇಶ್ ಮಣ್ಣೂರು, ಡಾ.ಪ್ರಸನ್ನ ಮೊದಲಾದವರಿದ್ದರು.ಶಶಿಧರ ಸ್ವಾಗತಿಸಿ, ಎಲ್.ಬಿ.ರಮೇಶ್ ವಂದಿಸಿದರು. ಎನ್.ಎಂ. ಭಾಗೀರಥಿ ನಿರೂಪಿಸಿದರು. ವಸಂತ ಕುಗ್ವೆ ಹಾಗೂ ಲಕ್ಷ್ಮಣ್ ಕುಗ್ವೆ ಹೋರಾಟ ಗೀತೆಗಳನ್ನು ಹಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.