ಭಾಷೆ ಬರೀ ಸಂವಹನ ವಿಧಾನವಲ್ಲ, ಆಲೋಚನಾ ಪ್ರಕ್ರಿಯೆ: ಡಾ. ದಾದಾಪೀರ್

KannadaprabhaNewsNetwork |  
Published : Feb 23, 2024, 01:45 AM IST
21ಎಚ್‌ಪಿಟಿ4- ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಲೋಕ ತಾಯ್ನುಡಿ ದಿನಾಚರಣೆಯ ಪ್ರಯುಕ್ತ ಬುಧವಾರ ಕೆ.ಎಲ್.ಇ ದತ್ತಿನಿಧಿ ಆಶ್ರಯದಲ್ಲಿ ಕನ್ನಡ ಮತ್ತು ಸಮುದಾಯಗಳು ಎಂಬ ವಿಷಯದ ಕುರಿತು ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಕನ್ನಡ ಭಾಷೆಯ ಮೂಲ ಸ್ವರೂಪದ ಓದು ಮತ್ತು ಅರ್ಥೈಸುವಿಕೆಯಲ್ಲಿ ಯುವ ಸಮೂಹ ತೊಡಗಿಸಿಕೊಳ್ಳುವುದು ತುಂಬಾ ಮುಖ್ಯ.

ಹೊಸಪೇಟೆ: ಭಾಷೆ ಪ್ರತಿಯೊಂದು ಜನಸಮುದಾಯದ ಭಾಗ. ಭಾಷೆ ಕೇವಲ ಸಂವಹನ ವಿಧಾನವಲ್ಲ, ಅದೊಂದು ಆಲೋಚನಾ ಪ್ರಕ್ರಿಯೆ. ಭಾಷೆಯ ಹಿಂದೆ ಮಾನವೀಯ ಸಂಬಂಧಗಳ ಒಂದು ನೈತಿಕ ಹೊಣೆಗಾರಿಕೆ ಇದೆ ಎಂದು ದಾವಣಗೆರೆಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಸಿ. ದಾದಾಪೀರ್ ನವಿಲೆಹಾಳ್ ತಿಳಿಸಿದರು.

ಕನ್ನಡ ವಿಶ್ವವಿದ್ಯಾಲಯದ ಕೇಶಿರಾಜ ಕಟ್ಟಡ, ಕನ್ನಡ ಭಾಷಾಧ್ಯಯನ ವಿಭಾಗದಲ್ಲಿ ಲೋಕ ತಾಯ್ನುಡಿ ದಿನಾಚರಣೆಯ ಪ್ರಯುಕ್ತ ಬುಧವಾರ ಕೆಎಲ್ಇ ದತ್ತಿನಿಧಿ ಆಶ್ರಯದಲ್ಲಿ ಕನ್ನಡ ಮತ್ತು ಸಮುದಾಯಗಳು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಳೆದ 25 ವರ್ಷಗಳಲ್ಲಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳು ಕನ್ನಡವನ್ನು ಸೊರಗಿಸುವ ಕೆಲಸ ಮಾಡಿವೆ. ಇಂದು ಅಚ್ಚ ಕನ್ನಡದ ಬಳಕೆ ಕಡಿಮೆಯಾಗಿದ್ದು, ಹಿಂದಿ, ಇಂಗ್ಲಿಷ್ ಮಿಶ್ರಿತ ಕನ್ನಡದ ಬಳಕೆಯನ್ನು ಕಾಣುತ್ತೇವೆ. ಇದಕ್ಕೆ ಸಾಮಾಜಿಕ ಜಾಲತಾಣಗಳ ಕೊಡುಗೆಯು ಹೇರಳವಾಗಿದೆ. 20 ವರ್ಷಗಳ ಹಿಂದಿನ ಕಾದಂಬರಿಗಳಿಗೂ ಈಗಿನ ಕಾದಂಬರಿಗಳಲ್ಲಿ ಬಳಕೆಯಾಗುತ್ತಿರುವ ಭಾಷೆಗೂ ಬಹಳಷ್ಟು ಭಿನ್ನತೆಯಿದೆ. ಇದರಿಂದಾಗಿ ನೆಲಮೂಲದ ಕಲೆ, ಸಂಸ್ಕೃತಿ, ಜನಪದ, ಪರಂಪರೆಗಳು ಕಣ್ಮರೆಯಾಗುತ್ತಿವೆ. ಕೃಷಿ, ಗುಡಿ ಕೈಗಾರಿಕೆ, ಪರಿಸರ ಮುಂತಾದ ವಿಷಯಗಳ ಕುರಿತು ಅನಕ್ಷರಸ್ಥರಲ್ಲಿರುವಷ್ಟು ಭಾಷಾ ಸಂಪತ್ತು, ವಿದ್ಯಾವಂತರಾದ ನಮ್ಮಲ್ಲಿ ಇಲ್ಲ. ಆದ್ದರಿಂದ ಕನ್ನಡ ಭಾಷೆಯ ಮೂಲ ಸ್ವರೂಪದ ಓದು ಮತ್ತು ಅರ್ಥೈಸುವಿಕೆಯಲ್ಲಿ ಯುವ ಸಮೂಹ ತೊಡಗಿಸಿಕೊಳ್ಳುವುದು ತುಂಬಾ ಮುಖ್ಯ ಎಂದರು.

ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿ, ಮಾತೃ ಭಾಷೆಯಲ್ಲಿನ ಪರಿಣತಿಯು ನಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ. ಭಾಷೆ ಎನ್ನುವುದು ನಮ್ಮ ಅಭಿಪ್ರಾಯಗಳನ್ನು ಮತ್ತೊಬ್ಬರಿಗೆ ತಿಳಿಸಲು ಇರುವ ಸಾಧನ. ಮಾತೃಭಾಷೆಯ ಹೊರತಾಗಿ ಬೇರೆ ಭಾಷೆಗಳನ್ನು ವ್ಯವಹಾರಿಕ ಬದುಕಿನಲ್ಲಿ ಬಳಸುವುದು ಸಹಜ. ತಾಯ್ನುಡಿ ಮೇಲೆ ಪ್ರವಾಹಿಸುವಲ್ಲಿ ಹೆಚ್ಚು ಕಡಿಮೆಯಾದರೂ, ಅಂತರ್ಗಾಮಿಯಾಗಿ ಸದಾ ಹರಿಯುತ್ತಿರುತ್ತದೆ. ಎಲ್ಲ ರೀತಿಯ ಕನ್ನಡವು ಕನ್ನಡಿಗರ ಅಸ್ಮಿತೆಯನ್ನು ಸೂಚಿಸುತ್ತದೆ. ಧರ್ಮವನ್ನು ಮೀರಿದ್ದು ಭಾಷೆ. ಇದರ ಬಗ್ಗೆ ಹೆಚ್ಚು ಹೆಚ್ಚು ಚಿಂತನೆಗಳು ನಡೆಯಬೇಕು ಎಂದರು.

ಕನ್ನಡ ಭಾಷಾಧ್ಯಯನ ವಿಭಾಗದ ಡಾ. ಪಿ. ಮಹಾದೇವಯ್ಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಭಾಗದ ಪ್ರಾಧ್ಯಾಪಕ ಡಾ. ಡಿ. ಪಾಂಡುರಂಗ ಬಾಬು, ಡಾ. ಅಶೋಕಕುಮಾರ ರಂಜೇರೆ ಮತ್ತು ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಅಧ್ಯಾಪಕರು, ಬೋಧಕೇತರ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ