ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕಾನೂನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಮಾತೃಭಾಷೆ ಮತ್ತು ಇಂಗ್ಲಿಷ್ ಭಾಷೆಯ ಮೇಲಿನ ಪ್ರಬುದ್ಧತೆ ಅತಿ ಮುಖ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಅಭಿಪ್ರಾಯಪಟ್ಟರು.ನಗರದ ಸಿ.ಭೀಮಸೇನರಾವ್ ಕಾನೂನು ಮಹಾವಿದ್ಯಾಲಯದ ವತಿಯಿಂದ ಶುಕ್ರವಾರ ಕಾಲೇಜಿನ ಸಭಾಂಗಣದಲ್ಲಿ ನಡೆದ 3 ವರ್ಷ ಹಾಗೂ 5 ವರ್ಷಗಳ ಎಲ್ಎಲ್ಬಿ ಕೋರ್ಸ್ ನೂತನವಾಗಿ ಪ್ರವೇಶಾತಿ ಪಡೆದಿರುವ ಕಾನೂನು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಅಭಿವಿನ್ಯಾಸ (ಓರಿಯಂಟೇಷನ್) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಕನ್ನಡದಲ್ಲಿ ವಾದ ಮಾಡಲು ಹಾಗೂ ಕಾನೂನು ಅಧ್ಯಯನ ನಡೆಸಲು ಅನೇಕ ಅವಕಾಶಗಳು ಲಭ್ಯವಾಗುತ್ತಿರುವುದು ಅಭಿನಂದನಾರ್ಹ. ಅದರೆ ಭಾರತೀಯ ಸಂವಿಧಾನದ ಮೂಲ ಪ್ರತಿಗಳನ್ನು ಅಧ್ಯಯನ ನಡೆಸಿ ಪರಿಪಕ್ವವಾಗಲು ಇಂಗ್ಲಿಷ್ ಭಾಷೆ ಅತ್ಯವಶ್ಯಕ. ಆದ್ದರಿಂದ ಕನ್ನಡ ಮತ್ತು ಇಂಗ್ಲೀಷ್ ಎರಡನ್ನು ಸುಲಲಿತವಾಗಿ ಗ್ರಹಿಸುವ ಮತ್ತು ಗ್ರಹಿಸಿದ ವಿಚಾರಗಳನ್ನು ಬರವಣಿಗೆಯ ರೂಪಕ್ಕೆ ತರುವ ಕೌಶಲ್ಯತೆ ನಿಮ್ಮದಾಗಬೇಕಿದೆ. ವಕೀಲಿ ವೃತ್ತಿಯಲ್ಲಿ ಓದು ಎಂಬುದು ನಿರಂತರವಾಗಿ ನಡೆಯಬೇಕಾದ ಅನಿವಾರ್ಯತೆಯಿದೆ ಎಂದು ಹೇಳಿದರು.ಬರವಣಿಗೆ ಎಂಬುದು ವಕೀಲಿ ವೃತ್ತಿಯಲ್ಲಿ ಪ್ರಾಮುಖ್ಯತೆ ಪಡೆದ ವಿಚಾರ. ಕರಡು ಪ್ರತಿ ತಯಾರಿಸುವಾಗ ಬಳಸುವ ಕೆಲವು ಶಬ್ದಕೋಶಗಳಿಂದ ಇಡೀ ಪ್ರಕರಣವೇ ಏರಿಳಿತವಾಗುವ ಸಾಧ್ಯತೆಯಿರುತ್ತದೆ. ಅನುಭವಾತ್ಮಕ ಕಲಿಕೆಯು ನಿಜವಾದ ಕಲಿಕೆಯಾಗಿದ್ದು, ಅದಕ್ಕಾಗಿ ತರಗತಿಗಳನ್ನು ಚರ್ಚಾ ವೇದಿಕೆಗಳಾಗಿ ಬದಲಾಯಿಸಿಕೊಳ್ಳಬೇಕು.ಹಿಂಜರಿಕೆ ವಿಶ್ವಾಸ ರಹಿತ ನಡವಳಿಕೆಯಿಂದ ಹೊರಬರಲು ಇಂತಹ ಚರ್ಚಾ ವೇದಿಕೆಗಳು ಬಳಸಿಕೊಳ್ಳಿ. ಆಗ ಮಾತ್ರ ನಿಜವಾಗಿಯೂ ಕಾನೂನು ಅಧ್ಯಯನಕ್ಕೆ ತೆರೆದುಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್.ಸಂತೋಷ್ ಮಾತನಾಡಿ, ಕಾಲೇಜು ಜ್ಞಾನ ನೀಡುವ ಪ್ರಯತ್ನ ಮಾಡುತ್ತದೆ. ಅದರೆ ಒಳ್ಳೆಯ ವಿಷಯ ಹಾಗೂ ಜ್ಞಾನವನ್ನು ಗ್ರಹಿಸುವ ಶಕ್ತಿಯನ್ನು ನಿವೆ ಕಲಿಯಬೇಕು ಎಂದರು.ಜಾಗತೀಕರಣದ ನಂತರ ಕಾನೂನು ತಜ್ಞರಿಗೆ ಅನೇಕ ಉದ್ಯೋಗವಕಾಶಗಳು ದೊರೆಯುತ್ತಿದೆ. ಕಾನೂನು ಅಧ್ಯಯನದಲ್ಲಿ ನೀವು ಆಯ್ದುಕೊಳ್ಳುವ ವಿಶೇಷ ವಿಷಯಗಳ ಕುರಿತು ಸ್ಪಷ್ಟತೆ ಪಡೆಯಿರಿ. ಭಾಷಾ ಕಲಿಕೆ ಮತ್ತು ಬರವಣಿಗೆಯ ಕೌಶಲ್ಯತೆಯೇ ವಕೀಲಿ ವೃತ್ತಿಯಲ್ಲಿ ಉನ್ನತಿಗೆ ತೆಗೆದುಕೊಂಡು ಹೋಗಲಿದೆ ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎ.ಅನಲಾ ಅಧ್ಯಕ್ಷತೆ ವಹಿಸಿದ್ದರು. ಸಹ ಪ್ರಾಧ್ಯಾಪಕ ಬಿ.ಸಿ.ಬಸಪ್ಪ, ಐಕ್ಯೂ ಎಸಿ ಸಂಯೋಜಕ ಡಾ.ಕಾಂತರಾಜ್ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕರಾದ ಅನುಪಮ.ಬಿ.ಯು ನಿರೂಪಿಸಿದರು, ಎಚ್.ಎ.ಸೌಮ್ಯ ಸ್ವಾಗತಿಸಿ, ಸಹ ಪ್ರಾಧ್ಯಾಪಕ ಡಾ. ಎನ್.ಆದರ್ಶ್ ವಂದಿಸಿದರು.