ಭದ್ರಾವತಿ: ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರಗಾಮಿಗಳು ಹಿಂದೂ ಪ್ರವಾಸಿಗರನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ ತಾಲೂಕು ವಕೀಲರ ಸಂಘದ ವತಿಯಿಂದ ಪ್ರತಿಭಟನಾ ಮೆರವಣಿಗೆಯೊಂದಿಗೆ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಇದಕ್ಕೂ ಮೊದಲು ಸಂಘದ ಕಚೇರಿಯಲ್ಲಿ ಅಧ್ಯಕ್ಷ ಉಮೇಶ್ ನೇತೃತ್ವದಲ್ಲಿ ಸಂತಾಪ ಸೂಚಕ ಸಭೆ ನಡೆಸಿ ಹತ್ಯೆಯಾದ ಹಿಂದೂ ಪ್ರವಾಸಿಗರಿಗೆ ಸಂತಾಪ ಸೂಚಿಸುವ ಮೂಲಕ ಮೌನಾಚರಣೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಹಿರಿಯ ವಕೀಲ ನಾರಾಯಣರಾವ್, ಮಂಜಪ್ಪ, ಹನುಮಂತರಾವ್, ಮಹಮದ್ ಇಲಿಯಾಸ್, ಉದಯಕುಮಾರ್, ವಿ.ವೆಂಕಟೇಶ್, ತಿರುಮಲೇಶ್, ಕೆ.ಎನ್.ಶ್ರೀಹರ್ಷ, ಕೆ.ಎಸ್.ಸುಧೀಂದ್ರ ಸೇರಿದಂತೆ ಇನ್ನಿತರರು, ಉಗ್ರಗಾಮಿಗಳು ಪ್ರವಾಸಕ್ಕೆ ತೆರಳಿದ್ದ ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಹತ್ಯೆ ನಡೆಸಿರುವುದು ನಿಜಕ್ಕೂ ಹೇಯಕೃತ್ಯ. ಈ ಘಟನೆಯಲ್ಲಿ ಶಿವಮೊಗ್ಗ ನಿವಾಸಿ, ಉದ್ಯಮಿ ಮಂಜುನಾಥ್ ಸಹ ಹತ್ಯೆಯಾಗಿರುವುದು ದುಃಖಕರ ಸಂಗತಿಯಾಗಿದೆ. ಅವರ ಕುಟುಂಬಕ್ಕೆ ವಕೀಲರ ಸಂಘ ಸಾಂತ್ವಾನ ಹೇಳುತ್ತದೆ. ಈ ಘಟನೆಗೆ ಕಾರಣರಾದ ಉಗ್ರರನ್ನು ಸರ್ಕಾರ ತಕ್ಷಣ ಮಟ್ಟ ಹಾಕದೆ ಹೋದರೆ ಅಲ್ಲಿ ನಡೆದ ಘಟನೆ ವಿಕೋಪಕ್ಕೆ ನಾಂದಿಯಾಗಬಲ್ಲದು ಎಂದರು.ಭಾರತ ದೇಶದ ಪ್ರತಿಯೊಬ್ಬ ನಾಗರಿಕರು ಜಾತಿ, ಮತ, ಧರ್ಮ, ವರ್ಗ, ಭಾಷೆ, ಎಲ್ಲವನ್ನೂ ಬದಿಗಿಟ್ಟು ದೇಶಾಭಿಮಾನದಿಂದ ಈ ಘಟನೆಯನ್ನು ಖಂಡಿಸಿ ಉಗ್ರರ ನಿಗ್ರಹಕ್ಕೆ ಒತ್ತಾಯಿಸಬೇಕು. ಕೇಂದ್ರ ಸರ್ಕಾರ ಕೈಗೊಳ್ಳುವ ಕ್ರಮಕ್ಕೆ ಬೆಂಬಲವಾಗಿ ಎಲ್ಲರೂ ನಿಲ್ಲಬೇಕಿದೆ ಎಂದರು.ಭಾರತ ದೇಶ ಹಿಂದೂಗಳ ದೇಶವಾದರೂ ಸಹ ಇಲ್ಲಿ ಎಲ್ಲಾ ಧರ್ಮದವರೂ ಶಾಂತಿಯುತವಾಗಿ ಬಾಳುತ್ತಿದ್ದಾರೆ. ಆದರೆ ಈ ನಮ್ಮ ಐಕ್ಯತೆಯನ್ನು ಇಂತಹ ಘಟನೆಗಳಿಂದ ಮುರಿಯಲು ಉಗ್ರರು ಹತ್ಯೆಗಳನ್ನು ನಡೆಸುತ್ತಿದ್ದಾರೆ ಇದನ್ನು ಪ್ರತಿಯೊಬ್ಬರೂ ಖಂಡಿಸಲೇಬೇಕೆಂದರು.ಪ್ರತಿಭಟನಾ ಮೆರವಣಿಗೆ: ನ್ಯಾಯಾಲಯದ ಆವರಣದಿಂದ ವಕೀಲರು ತ್ರಿವರ್ಣ ಧ್ವಜ ಹಿಡಿದು ಉಗ್ರರ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಪ್ರತಿಭಟನಾ ಮೆರವಣಿಗೆ ಆರಂಭಿಸಿ, ರಂಗಪ್ಪವೃತ್ತ, ಡಾ.ರಾಜ್ಕುಮಾರ್ ರಸ್ತೆ ಮೂಲಕ ಮಾಧವಾಚಾರ್ ವೃತ್ತದವರೆಗೂ ತೆರಳಿದರು. ನಂತರ ಮಾನವಸರಪಳಿ ನಿರ್ಮಿಸಿ ಕೆಲಕಾಲ ರಸ್ತೆ ತಡೆ ನಡೆಸಿದರು. ಕೊನೆಯಲ್ಲಿ ತಾಲೂಕು ಕಚೇರಿ ಆವರಣದಲ್ಲಿ ವಕೀಲರಾದ ಪುಟ್ಟಸ್ವಾಮಿ, ರೂಪಾ ರಾವ್, ಶೋಭಾ, ಶಿವಕುಮಾರ್, ಮಂಗೋಟೆ ರುದ್ರೇಶ್ ಸೇರಿದಂತೆ ಇನ್ನಿತರರು ಉಗ್ರರ ಕೃತ್ಯವನ್ನು ಖಂಡಿಸಿ, ಕಂದಾಯಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.