ಕನ್ನಡಪ್ರಭ ವಾರ್ತೆ ಮಂಡ್ಯ
ಹವಾಮಾನ ಬದಲಾಗಿದೆ, ಕಾವೇರಿ ಕಣಿವೆ ಪ್ರದೇಶದಲ್ಲಿ ಮಳೆಯ ಪ್ರಮಾಣವೂ ಕಡಿಮೆಯಾಗಿದೆ. ನೂರು ವರ್ಷಗಳ ಹಿಂದೆ ಆಗಿದ್ದ ಒಪ್ಪಂದದಂತೆ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ. ಮಳೆ ಕೊರತೆ ಎದುರಾಗಿ ನೀರಿಗೆ ಸಂಕಷ್ಟ ಪರಿಸ್ಥಿತಿ ಉದ್ಭವಿಸಿದಾಗ ಎಷ್ಟು ನೀರು ಹರಿಸಬೇಕೆಂಬ ಸಂಕಷ್ಟ ಸೂತ್ರ ಇದುವರೆಗೂ ರಚನೆಯಾಗಿಲ್ಲ. ಸಂಕಷ್ಟ ಸೂತ್ರ ರಚನೆಯಾಗದೆ ಕಾವೇರಿ ನೀರು ಹಂಚಿಕೆಯಲ್ಲಿ ನಿರಂತರವಾಗಿ ಅನ್ಯಾಯವಾಗುತ್ತಿದ್ದು, ಇದಕ್ಕೊಂದು ತಾರ್ಕಿಕ ಅಂತ್ಯ ಬೀಳಬೇಕಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಸುಮಾರು ಐದು ದಶಕಗಳಿಂದ ಕಾವೇರಿ ನೀರಿಗಾಗಿ ಬೀದಿಗಿಳಿದು ಹೋರಾಟ ನಡೆಸಿದ್ದರೂ ಅನ್ಯಾಯ ಮುಂದುವರೆದೇ ಇದೆ. ಸುಪ್ರೀಂ ಕೋರ್ಟ್ ಇನ್ನು ಪ್ರಕರಣವನ್ನು ನಮ್ಮ ಬಳಿಗೆ ಬರದಂತೆ ನ್ಯಾಯ ಮಂಡಳಿ ರಚಿಸಿ ಕೈಬಿಟ್ಟಿದೆ. ಈಗ ಮತ್ತೆ ಕಾನೂನಾತ್ಮಕವಾಗಿಯೇ ಹೋರಾಟವನ್ನು ನಡೆಸಿ ಅನ್ಯಾಯ ಸರಿಪಡಿಸಬೇಕಿದೆ ಎಂದರು.ಇದಕ್ಕಾಗಿ ಸ್ವಾಮೀಜಿಗಳು, ನ್ಯಾಯಾಧೀಶರು, ರೈತ ಮುಖಂಡರು, ನೀರಾವರಿ ತಜ್ಞರು ಹಾಗೂ ವಿವಿಧ ಪಕ್ಷಗಳ ರಾಜಕೀಯ ನಾಯಕರೆಲ್ಲರೂ ಪಕ್ಷಬೇಧ ಮರೆದು ಒಗ್ಗೂಡಲಾಗುತ್ತಿದೆ. ಏ.೫ರಂದು ಬೆಂಗಳೂರಿನ ಕುವೆಂಪು ಕಲಾಕ್ಷೇತ್ರದಲ್ಲಿ ನ್ಯಾಯಯುತ ನೀರಿನ ಹಕ್ಕಿಗಾಗಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ ಎಂದರು.
ಪ್ರಸ್ತುತ ಪರಿಸ್ಥಿತಿಯಲ್ಲಿ ಸಂಕಷ್ಟ ಸೂತ್ರ ರಚಿಸಲೇಬೇಕಾದ ಸನ್ನಿವೇಶದಲ್ಲಿ ನಾವಿದ್ದೇವೆ. ನ್ಯಾಯಮಂಡಳಿ ನಿಗದಿ ಪಡಿಸಿರುವಷ್ಟು ಪ್ರಮಾಣದ ನೀರನ್ನು ನಾವು ಯಾವುದೇ ಕಾರಣಕ್ಕೂ ಬಿಡಲಾಗುವುದಿಲ್ಲ. ಮೇಕೆದಾಟು ಅಣೆಕಟ್ಟು ನಿರ್ಮಿಸಿ ನೀರನ್ನು ಸಂಗ್ರಹಿಸಿಟ್ಟುಕೊಂಡು ನೀಡೋಣವೆಂದರೆ ಅದಕ್ಕೂ ಒಪ್ಪಿಗೆ ಕೊಡುತ್ತಿಲ್ಲ. ನಮಗೆ ಒಂದು ಬೆಳೆಗೂ ನೀರಿಲ್ಲದೆ ಆತಂಕ ಪರಿಸ್ಥಿತಿ ಎದುರಿಸುವಾಗ ತಮಿಳುನಾಡಿನ ಮೂರು ಬೆಳೆಗೆ ಎಲ್ಲಿಂದ ನೀರು ಹರಿಸಲು ಸಾಧ್ಯ ಎಂದು ಪ್ರಶ್ನಿಸಿದರು.
ಕಾವೇರಿ ನೀರು ಹಂಚಿಕೆಯಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಸುಪ್ರೀಂಕೋರ್ಟ್ನ ಗಮನಸೆಳೆಯಬೇಕಿದೆ. ಅದಕ್ಕಾಗಿ ಒಂದು ವೇದಿಕೆ ಸೃಷ್ಟಿಸಿಕೊಂಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿ ಹೋರಾಟವನ್ನು ಕೈಗೆತ್ತಿಕೊಳ್ಳುವುದಕ್ಕೆ ಕಾವೇರಿ ನದಿ ರಕ್ಷಣಾ ಸಮಿತಿ ಮುಂದಾಗಿದೆ ಎಂದರು.ಗೋಷ್ಠಿಯಲ್ಲಿ ಸಿದ್ದರಾಮೇಗೌಡ, ಸಾತನೂರು ವೇಣುಗೋಪಾಲ್, ಎಂ.ಎಸ್.ಚಿದಂಬರ್, ಅಶೋಕ್ ಜಯರಾಂ, ಪದ್ಮಾವತಿ ಇತರರಿದ್ದರು.