ಕನ್ನಡಪ್ರಭ ವಾರ್ತೆ, ಭದ್ರಾವತಿ
ಕ್ಷೇತ್ರದಲ್ಲಿ ಒಸಿ, ಇಸ್ಪೀಟ್ ಜೂಜು ಯಾರಿಂದ ಆರಂಭವಾಯಿತು ಎಂಬುದು ಎಲ್ಲರಿಗೂ ತಿಳಿದಿದೆ. ಇಸ್ಪೀಟ್ ಸ್ಪರ್ಧೆ ನಡೆಸಿದ ಕರಾಳ ಇತಿಹಾಸ ಕೂಡ ಜನತೆಗೆ ತಿಳಿದಿದೆ. ಗೂಂಡಾಗಿರಿ, ಇಸ್ಪೀಟ್ ಸೇರಿದಂತೆ ಯಾವುದೇ ಜೂಜಾಟ ಕಾಂಗ್ರೆಸ್ ಪಕ್ಷ ಬೆಂಬಲಿಸುವುದಿಲ್ಲ. ಇವುಗಳ ವಿರುದ್ಧ ಹೋರಾಟಕ್ಕೆ ನಮ್ಮ ಬೆಂಬಲ ಸಹ ಇದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.ಬಿಜೆಪಿ ಹಾಗೂ ಜೆಡಿಎಸ್ ಮುಖಂಡರ ಗೂಂಡಾ ವರ್ತನೆ, ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ ಹಾಗೂ ಸಂಸತ್ ಭವನದಲ್ಲಿ ನಡೆದ ಭದ್ರತಾ ವೈಫಲ್ಯ ಖಂಡಿಸಿ ಮಂಗಳವಾರ ಕಾಂಗ್ರೆಸ್ ಪಕ್ಷದ ನಗರ ಮತ್ತು ಗ್ರಾಮಾಂತರ ಘಟಕಗಳ ವತಿಯಿಂದ ತಾಲೂಕು ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಅಭಿವೃದ್ಧಿ ಕೆಲಸಗಳಿಗೆ ಬೆಂಬಲ ನೀಡಲಿ, ಇಲ್ಲವಾದರೆ ಸುಮ್ಮನೆ ಇದ್ದುಬಿಡಲಿ. ಗೊಂದಲ ಸೃಷ್ಟಿಸಿ ರಾಜಕಾರಣ ಮಾಡುವುದು ಸರಿಯಲ್ಲ. ಯಾವುದೋ ಸಣ್ಣ ಗಲಾಟೆಯನ್ನು ದೊಡ್ಡ ವಿಷಯವನ್ನಾಗಿಸಿಕೊಂಡು ಪೊಲೀಸರ ವಿರುದ್ಧ ಪ್ರತಿಭಟನೆ ಮಾಡುವುದರಿಂದ ಬಿಜೆಪಿ ಮತ್ತು ಜೆಡಿಎಸ್ ವೈಫಲ್ಯ ಎದ್ದು ಕಾಣುವಂತಾಗಿದೆ. ಪೊಲೀಸರು ತಮ್ಮ ಕರ್ತವ್ಯ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಅವರ ದಿಕ್ಕು ತಪ್ಪಿಸುವ ಕೆಲಸ ಮಾಡದಿರುವುದು ಒಳ್ಳೆಯದು. ಯಾರು ತಪ್ಪು ಮಾಡುತ್ತಾರೋ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂದರು.ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಕ್ಷೇತ್ರದ ಅನೇಕ ಸಮಸ್ಯೆಗಳನ್ನು ಪ್ರಶ್ನಿಸುವ ಬದಲು ಕ್ಷುಲ್ಲಕ ಹಲ್ಲೆ ಪ್ರಕರಣ ಪ್ರಸ್ತಾಪಿಸಿ, ಬಿಜೆಪಿ ತನ್ನ ಜವಾಬ್ದಾರಿ ಮರೆತ್ತಿರುವುದನ್ನು ಸ್ಪಷ್ಟಪಡಿಸಿದೆ. ರಾಜ್ಯದಲ್ಲಿ ಬಿಜೆಪಿ ಪಕ್ಷದ 25 ಲೋಕಸಭಾ ಸದಸ್ಯರಿದ್ದು, ಇವರು ಸಂಸತ್ ಸಭೆಯಲ್ಲಿ ವಿಐಎಸ್ಎಲ್ ಕಾರ್ಖಾನೆ ಅಭಿವೃದ್ಧಿಗೊಳಿಸುವ ವಿಚಾರ, ಕಾವೇರಿ ವಿಚಾರ, ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿ ಕುರಿತು, ಪ್ರವಾಹಪೀಡಿತರಿಗೆ ಪರಿಹಾರ ವಿಚಾರ ಸೇರಿದಂತೆ ಯಾವುದೇ ವಿಚಾರಗಳನ್ನು ಪ್ರಸ್ತಾಪಿಸಿಲ್ಲ. ಆದರೆ, ಕ್ಷೇತ್ರಕ್ಕೆ ಆಗಮಿಸಿದಾಗ ವಿಐಎಸ್ಎಲ್ ಕಾರ್ಖಾನೆ ಅಭಿವೃದ್ಧಿ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಾರೆ. ಬಿಜೆಪಿ ನಾಯಕರ ಈ ನಡೆಗೆ ಮತದಾರರು ಲೋಕಸಭಾ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಎಂದರು.
ಪೊಲೀಸ್ ಇಲಾಖೆ ದುರ್ಬಳಕೆ:ಹಿರಿಯ ನಗರಸಭಾ ಸದಸ್ಯ ಬಿ.ಕೆ. ಮೋಹನ್ ಮಾತನಾಡಿ, ಕ್ಷೇತ್ರದಲ್ಲಿ ಬಿ.ಕೆ. ಸಂಗಮೇಶ್ವರ್ ಅವರು 4 ಬಾರಿ ಶಾಸಕರಾಗಿದ್ದಾರೆ. ಅವರಾಗಲಿ ಅಥವಾ ಕುಟುಂಬ ವರ್ಗದವರಾಗಲಿ ಎಂದಿಗೂ ಗೂಂಡಾಗಿರಿ, ಒ.ಸಿ, ಇಸ್ಪೀಟ್ ಸೇರಿದಂತೆ ಯಾವುದೇ ಜೂಜಾಟ, ಕಾನೂನುಬಾಹಿರ ಕೃತ್ಯಗಳನ್ನು ಬೆಂಬಲಿಸಿಲ್ಲ. ಶಾಸಕರು ಕೈಗೊಳ್ಳುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸಿಕೊಳ್ಳದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅವರ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಗರ ಅಧ್ಯಕ್ಷ ಎಸ್.ಕುಮಾರ್, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್. ಷಡಾಕ್ಷರಿ, ಮುಖಂಡರಾದ ಎಸ್.ಮಣಿಶೇಖರ್, ಬಿ.ಟಿ. ನಾಗರಾಜ್, ವೈ.ರೇಣುಕಮ್ಮ, ಬಾಲಕೃಷ್ಣ, ಸಿ.ಎಂ.ಖಾದರ್, ವೈ.ಎಚ್. ನಾಗರಾಜ್, ರಮೇಶ್ ಶಂಕರಘಟ್ಟ, ಸುಕನ್ಯಾ, ಶೃತಿ ಸಿ. ವಸಂತಕುಮಾರ್, ಸರ್ವಮಂಗಳ ಭೈರಪ್ಪ, ಕೆ.ಸುದೀಪ್ ಕುಮಾರ್, ಲತಾ ಚಂದ್ರಶೇಖರ್, ಮಣಿ ಎಎನ್ಎಸ್, ಚನ್ನಪ್ಪ, ಜಾರ್ಜ್, ಕಾಂತರಾಜ್, ಗೋಪಿ, ರವಿಕುಮಾರ್, ಬದರಿನಾರಾಯಣ, ಪ್ರಾನ್ಸಿಸ್, ಬಿ. ಗಂಗಾಧರ್, ಸಿ. ಜಯಪ್ಪ, ಅಂತೋಣಿ ವಿಲ್ಸನ್, ಅಂತರಗಂಗೆ ನಾಗೇಶ್, ಗೌರವಪುರ ಶಿವರಾಂ, ವೈ. ನಟರಾಜ್, ವೆಂಕಟಯ್ಯ, ಕೇಸರಿಪಡೆ ಗಿರೀಶ್, ಮಂಜುನಾಥ್(ಕೊಯ್ಲಿ), ಕುಮಾರ್, ಲಕ್ಷ್ಮೀಕಾಂತ್, ರೂಪ ನಾಗರಾಜ್, ವಿಜಯಲಕ್ಷ್ಮೀ, ರೇಷ್ಮಬಾನು, ಶೋಭಾ ರವಿಕುಮಾರ್ ಸೇರಿದಂತೆ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.- - -
ಬಾಕ್ಸ್ ಪೊಲೀಸ್ ಭದ್ರತೆ ಪಡೆದು ಈಶ್ವರಪ್ಪ ಇಲಾಖೆ ದುರ್ಬಳಕೆ ಅಧಿಕಾರ ಇಲ್ಲದಿದ್ದರೂ ಪೊಲೀಸ್ ಭದ್ರತೆ ಪಡೆಯುವ ಮೂಲಕ ಕೆ.ಎಸ್.ಈಶ್ವರಪ್ಪ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾ. ಕೆ.ಎಸ್. ಈಶ್ವರಪ್ಪ ಬಾಯಿಬಿಟ್ಟರೆ ಬೆಂಕಿಯ ಮಾತುಗಳನ್ನಾಡುತ್ತಾರೆ. ಜೊತೆಗೆ ಇವರು ಮಾತುಗಳ ಮೂಲಕವೇ ಬೆಂಕಿಹಚ್ಚಿ ಅಶಾಂತಿ ಸೃಷ್ಟಿಸುತ್ತಾರೆ. ಇಂತಹ ಕಾರಣದಿಂದಾಗಿಯೇ ಮೆದುಳು-ನಾಲಗೆಗೂ ಸಂಬಂಧವಿಲ್ಲದ ಮನುಷ್ಯ ಈಶ್ವರಪ್ಪ ಎಂದು ಸಿದ್ದರಾಮಯ್ಯ ಟೀಕೆ ಮಾಡಿರುವುದು ಸರಿಯಾಗಿದೆ ಎಂದು ಸಮರ್ಥಿಸಿಕೊಂಡರು.- - - -19ಬಿಡಿವಿಟಿ:
ಭದ್ರಾವತಿ ತಾಲೂಕು ಕಚೇರಿ ಆವರಣದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಮಾತನಾಡಿದರು.