ಯೋಧರಿಗೆ ಪ್ರತಿಯೊಬ್ಬರು ಗೌರವ ನೀಡಲಿ: ಶಾಂತಲಿಂಗ ಶ್ರೀ

KannadaprabhaNewsNetwork | Published : Aug 22, 2024 12:55 AM

ಭೈರನಹಟ್ಟಿ ಗ್ರಾಮದ ಸುಮಾರು ಜನ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಶಾಂತಲಿಂಗ ಶ್ರೀಗಳು ಹೇಳಿದರು.

ನರಗುಂದ: ತಮ್ಮ ಪ್ರಾಣದ ಹಂಗನ್ನು ತೊರೆದು ದೇಶ ರಕ್ಷಣೆಗಾಗಿ ಶ್ರಮಿಸುತ್ತಿರುವ ಪ್ರತಿಯೊಬ್ಬ ಯೋಧರಿಗ ಅಭಿಮಾನ ಮತ್ತು ಗೌರವ ಸೂಚಿಸುವುದು ಸಮಸ್ತ ಭಾರತೀಯರ ಆದ್ಯ ಕರ್ತವ್ಯವಾಗಿದೆ. ಭಾರತೀಯ ವೀರ ಯೋಧರ ಶಕ್ತಿಗೆ ಮೀಗಿಲಾದದ್ದು, ಅವರ ನಿಶ್ವಾರ್ಥ ಸೇವೆಗೆ ನಮ್ಮದೊಂದು ಸಲಾಂ ಎಂದು ಶಾಂತಲಿಂಗ ಶ್ರೀಗಳು ಹೇಳಿದರು.

ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಇತ್ತೀಚಿಗೆ ಹಮ್ಮಿಕೊಂಡಿದ್ದ ಭಾರತೀಯ ಅರೆ ಸೇನಾ ಪಡೆಯಲ್ಲಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಗ್ರಾಮದ ರವಿ ಈರಪ್ಪ ಬಡಿಗೇರ ಅವರ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.ಭೈರನಹಟ್ಟಿ ಗ್ರಾಮದ ಸುಮಾರು ಜನ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯ. ಆ ನಿಟ್ಟಿನಲ್ಲಿ ಈರಪ್ಪ ಬಡಿಗೇರ ಅವರು 21ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಗೊಂಡು ಇದೀಗ ಗ್ರಾಮಕ್ಕೆ ಆಗಮಿಸುತ್ತಿರುವುದು ಸಂತಸದ ಸಂಗತಿ. ಪ್ರತಿಯೊಬ್ಬರಲ್ಲಿಯೂ ದೇಶ ಭಕ್ತಿ, ರಾಷ್ಟ್ರಾಭಿಮಾನ ಮೂಡಬೇಕಾಗಿದೆ. ದೇಶ ನಮಗೇನು ಮಾಡಿದೆ ಎನ್ನುವ ಬದಲು ದೇಶಕ್ಕೆ ನಾವೇನು ಕೊಡುಗೆ ನೀಡಿದ್ದೇವೆ ಎಂಬುದನ್ನು ಅರಿತುಕೊಂಡು ದೇಶ ರಕ್ಷಣೆಗೆ ಪಣ ತೊಡಬೇಕಿದೆ ಎಂದು ಯುವಕರಿಗೆ ಕೆರೆ ನೀಡಿದರು.

ನಿವೃತ್ತ ಶಿಕ್ಷಕ ಎಸ್.ಬಿ. ಪಾಟೀಲ ಮಾತನಾಡಿ, 21 ವರ್ಷಗಳ ಕಾಲ ತಾಯಿ ಭಾರತಾಂಭೆ ಸೇವೆ ಸಲ್ಲಿಸಿ ಗ್ರಾಮಕ್ಕೆ ಮರಳಿದ ರವಿ ಬಡಿಗೇರ ಅವರು ಗ್ರಾಮದ ಯುವಕರಿಗೆ ಸ್ಫೂರ್ತಿ. ಅವರಂತೆ ಎಲ್ಲರೂ ದೇಶ ಸೇವೆಗೆ ಅಣಿಯಾಗಬೇಕು. ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬ ಯೋಧರೂ ನಾನು, ನನ್ನದು ಎನ್ನುವುದನ್ನು ಬಿಟ್ಟು ನಾವು ನಮ್ಮದು ಎನ್ನುವುದನ್ನು ರೂಢಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಶಿವಯ್ಯ ಹಿರೇಮಠ, ಉಮೇಶಗೌಡ ಪಾಟೀಲ, ಚಂದ್ರು ದಂಡಿನ, ಹನುಮಂತ ಸಂಗಟಿ, ಬಸನಗೌಡ ಪಾಟೀಲ, ಜ್ಞಾನದೇವ ಮನೇನಕೊಪ್ಪ, ಅರೆಸೇನಾ ಪಡೆ ಸಂಘದ ತಾಲೂಕಾಧ್ಯಕ್ಷ ಪತ್ರಯ್ಯ ಹಿರೇಮಠ, ಮಾಜಿ ಸೈನಿಕರಾದ ನಿಂಗಪ್ಪ ಮನೇನಕೊಪ್ಪ, ಭೀಮಣ್ಣ ಕುರಿ, ಉಮೇಶ ಮೊರಬದ ಹಾಗೂ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.