ಕನ್ನಡಪ್ರಭ ವಾರ್ತೆ ಹಾನಗಲ್ಲ
ವಚನಕಾರರು ಜೀವನ ಬಿಟ್ಟು ಓಡಿ ಹೋದವರಲ್ಲ, ಅನುಭಾವಿಗಳಾಗಿ ಸಮಾಜೋದ್ಧಾರಕ್ಕೆ ತಮ್ಮನ್ನು ಅರ್ಪಿಸಿಕೊಂಡ ಅಪರೂಪದ ವ್ಯಕ್ತಿತ್ವದ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದವರು ಎಂದು ಗಡಿನಾಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಸಿ. ಸೋಮಶೇಖರ ಹೇಳಿದರು.ತಾಲೂಕಿನ ಬೆಳಗಾಲಪೇಟೆಯಲ್ಲಿ ಶ್ರೀ ಶಿವಲಿಂಗೇಶ್ವರ ಮತ್ತು ಶ್ರೀ ವೀರಭದ್ರೇಶ್ವರರ ಪ್ರತಿಷ್ಠಾಪನೆಯ ರಜತ ಮಹೋತ್ಸವದ ಅಂಗವಾಗಿ ಆಯೋಜಸಿದ್ದ ಧರ್ಮಸಭೆಯಲ್ಲಿ ಮಾತನಾಡಿದ ಅವರು, ಮೃದುವಚನ ಸದುವಿನಯಗಳ ಮೂಲಕ ನಮ್ಮ ಬದುಕು ಹಬ್ಬವಾಗಬೇಕು. ಧರ್ಮ ಸಂಸ್ಕಾರಗಳನ್ನು ಪುನರುತ್ಥಾನಗೊಳಿಸುವ ಮಂದಿರ, ಮಠಗಳು ನಿಜವಾದ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುವ ಕೇಂದ್ರಗಳಾಗಬೇಕು. ಶರಣರ ತತ್ವ, ಚಿಂತನೆಗಳು ನಮ್ಮ ನಿತ್ಯದ ಬದುಕಿನ ಆಚರಣೆಯಾಗಬೇಕು. ಕಲ್ಯಾಣ ರಾಜ್ಯದ ಕನಸು ನನಸಾಗಬೇಕು ಎಂದರು.
ಹಿರಿಯ ಕೆಎಎಸ್ ಅಧಿಕಾರಿ ವಿಶ್ವನಾಥ ಹಿರೇಮಠ ಮಾತನಾಡಿ, ಸದಾಕಾಲಕ್ಕೂ ಒಳ್ಳೆಯದನ್ನೇ ಬಯಸೋಣ. ನಮ್ಮಿಂದಾದ ಒಳ್ಳೆಯ ಕೆಲಸಗಳನ್ನು ಮಾಡೋಣ. ಇಂಥ ಧರ್ಮ ಕೇಂದ್ರಗಳ ಮೂಲಕ ನಮ್ಮ ಮನಸ್ಸು ಬುದ್ಧಿ ವಿವೇಕಗಳನ್ನು ಶುಚಿಯಾಗಿಟ್ಟುಕೊಳ್ಳೋಣ ಎಂದರು.ಶಿವಮೊಗ್ಗ ಜಿಲ್ಲೆಯ ಹಿರೇಮಾಗಡಿ ಸಂಸ್ಥಾನ ಮಠದ ಶಿವಮೂರ್ತಿ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿ, ಧರ್ಮ ಕೇಂದ್ರಗಳ ಹೆಸರಿನಲ್ಲಿ ಇಡೀ ಊರಿನ ಜನ ಒಟ್ಟಾಗಿ ಧಾರ್ಮಿಕ ಕಾರ್ಯ ಮಾಡಿ, ಸಂಭ್ರಮಿಸುವುದು ಹಾಗೂ ಭಗವಂತನ ನಾಮಸ್ಮರಣೆ ಮಾಡುವುದು ಸದಾಚಾರಕ್ಕೆ ಸಾಕ್ಷಿ. ನಮ್ಮ ಬದುಕು ಸಾರ್ಥಕವಾಗುವಂತೆ ದಾನ ಧರ್ಮದ ದಾರಿಯಲ್ಲಿ ನಡೆಯೋಣ ಎಂದರು.
ಅತಿಥಿಗಳಾಗಿ ಸಿರಸಿಯ ವಾಣಿಜ್ಯ ತೆರಿಗೆ ಅಧಿಕಾರಿ ಭುವನೇಶ್ವರಿ ಪಾಟೀಲ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ. ಮಾರುತಿ ಶಿಡ್ಲಾಪೂರ, ಸಿಪಿಐ ವೀರೇಶ, ಸಿದ್ದಲಿಂಗಪ್ಪ ಕಮಡೊಳ್ಳಿ, ಎ.ಎಸ್. ಸುಂಕದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರಿಯಾ ಹಾವಣಗಿ, ಅನ್ನಪೂರ್ಣ ಕುಕನೂರ, ಪ್ರಾರ್ಥನಾ ಹಿರೇಮಠ, ಅತೀಕಾಬಿ ಬಾವಾಖಾನವರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.