ಹೊಸಪೇಟೆ: ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಗುರಿಯೊಂದಿಗೆ ಸಾಧನೆಯತ್ತ ಹೆಜ್ಜೆ ಹಾಕಬೇಕು ಎಂದು ನಗರದ ಥಿಯೋಸಾಫಿಕಲ್ ಪಿಯು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಜಿ. ಭರಮಲಿಂಗನಗೌಡರು ಹೇಳಿದರು.ನಗರದ ಥಿಯೋಸಾಫಿಕಲ್ ಪಿಯು ಕಾಲೇಜಿನಲ್ಲಿ ಸೋಮವಾರ ನಡೆದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಗ ಮಾತ್ರ ನಾವೆಲ್ಲರೂ ಯಶಸ್ಸು ಸಾಧಿಸಲು ಸಾಧ್ಯ. ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದೀರಿ, ಸರ್ಕಾರಿ ಉದ್ಯೋಗ ಪಡೆಯುವುದರತ್ತ ಗುರಿ ಹೊಂದಬೇಕು ಎಂದರು.
ಥಿಯೋಸಾಫಿಕಲ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಪೂರ್ಣಿಮಾ ಎಸ್. ವಾಣಿಜ್ಯ ವಿಭಾಗದಲ್ಲಿ 592 ಅಂಕಗಳೊಂದಿಗೆ ಶೇ.98.66ರಷ್ಟು ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗೆ ಪ್ರಥಮ ಮತ್ತು ರಾಜ್ಯಕ್ಕೆ 6ನೇ ರ್ಯಾಂಕ್ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇಂತಹ ಸಾಧಕರನ್ನು ನಾವು ಗೌರವಿಸಬೇಕು ಎಂದರು.ಅನು ಭೀಮರೆಡ್ಡಿ, ಸ್ಫೂರ್ತಿ ಬಾದಾಮಿ ತಲಾ 569 ಅಂಕಗಳೊಂದಿಗೆ ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಸೀಮಾ 564 ಅಂಕಗಳೊಂದಿಗೆ ಕಾಲೇಜಿಗೆ ತೃತೀಯ ಸ್ಥಾನ ಗಳಿಸಿದ್ದಾರೆ. ಈ ಬಾರಿ ಕಾಲೇಜಿನ 30 ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್ಸ್, 97 ವಿದ್ಯಾರ್ಧಿನಿಯರು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಈ ಬಾರಿ ಕಾಲೇಜ್ ಒಟ್ಟಾರೆ ಶೇ.92.55ರಷ್ಟು ಫಲಿತಾಂಶವನ್ನು ಪಡೆದಿದೆ ಎಂದರು.
ಕಾಲೇಜಿನ ಕಾರ್ಯದರ್ಶಿ ಅಶೋಕ ಜೀರೆ ಮಾತನಾಡಿ, ಪಿಯು ಕಾಲೇಜಿನ ವಿದ್ಯಾರ್ಥಿನಿ ಪೂರ್ಣಿಮಾಗೆ ಥಿಯೋಸಾಫಿಕಲ್ ಕಾಲೇಜ್ನಲ್ಲಿ ಉನ್ನತ ಶಿಕ್ಷಣ ಪಡೆಯಲು ಉಚಿತ ಪ್ರವೇಶ ನೀಡಲಾಗುವುದು ಎಂದರು.ಮಂಡಳಿಯ ಉಪಾಧ್ಯಕ್ಷ ಭೂಪಾಳ ರಾಘವೇಂದ್ರ ಶೆಟ್ಟಿ, ಸಹಕಾರ್ಯದರ್ಶಿ ಡಾ.ಹನಮಂತರಾವ್, ಖಜಾಂಚಿ ಭೂಪಾಳ್ ಪ್ರಹ್ಲಾದ್, ಸದಸ್ಯರಾದ ಜಂಬಾನಳ್ಳಿ ಸತ್ಯನಾರಾಯಣ, ಗುರುರಾಜ ದೇಶಪಾಂಡೆ, ಪ್ರಾಚಾರ್ಯರಾದ ಜಗದೀಶ್ ಪಿ.ಎಂ., ಸಂಗೀತಾ ಗಾಂವಕರ್, ಪೂಜಾ ಪಿ. ಇದ್ದರು. ಥಿಯೋಸಾಫಿಕಲ್ ಪಿಯು ಕಾಲೇಜಿನಿಂದ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.