ಗದಗ: ಗದಗ ಜಿಲ್ಲೆಯ ಎಲ್ಲ ರೈತರು ತಾವು ಬಿತ್ತನೆ ಮಾಡಿದ ಬೆಳೆಗೆ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಬೇಕು. ಈ ನಿಟ್ಟಿನಲ್ಲಿ ರೈತರಿಗೆ ಕೃಷಿ ಇಲಾಖೆಯ ಅಧಿಕಾರಿಗಳು ಅರಿವು ಮೂಡಿಸುವ ಮೂಲಕ ಸೂಕ್ತ ಮಾರ್ಗದರ್ಶನ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಿ.ಶಿಖಾ ಹೇಳಿದರು.
ಅವರು ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ವಿಡಿಯೋ ಸಂವಾದದ ಮೂಲಕ ಮಾತನಾಡಿ, ಪ್ರಕೃತಿ ವಿಕೋಪ, ಅತಿವೃಷ್ಟಿ ಸಂಭವಿಸಿದಲ್ಲಿ ಆರ್ಥಿಕ ನಷ್ಟ ಸರಿದೂಗಿಸಲು ವಿಮಾ ಪರಿಹಾರ ಸಹಕಾರಿಯಾಗಿದೆ. ತಪ್ಪದೇ ರೈತರು ವಿಮಾ ಮಾಡಿಸಲು, ಅಧಿಸೂಚಿತ ಬೆಳೆಗಳಿಗೆ ವಿಮಾ ಕಂತು ಪಾವತಿಸಲು ಜಾಗೃತಿ ಮೂಡಿಸಲು ಕೃಷಿ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಸೂಚಿಸಿದರು.ಮುಂಗಾರು ಬಿತ್ತನೆ ಕಾರ್ಯ ಈಗಾಗಲೇ ಆರಂಭವಾಗಿರುವುದರಿಂದ ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ ಸಮರ್ಪಕ ಸರಬರಾಜು ಮಾಡಬೇಕು. ಸಮಸ್ಯೆ ಉದ್ಭವಿಸದಂತೆ ಮುಂಜಾಗ್ರತೆಯಿಂದ ಇಲಾಖಾಧಿಕಾರಿಗಳು ಕಾರ್ಯನಿರ್ವಹಿಸಬೇಕು. ತಪ್ಪಿದಲ್ಲಿ ಇಲಾಖಾಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದು ಎಚ್ಚರಿಸಿದರು.
ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಮಾತನಾಡಿ, 2023ರ ಮುಂಗಾರು ಹಂಗಾಮಿನಲ್ಲಿ 1,11,695 ರೈತರು ವಿಮಾ ಕಂತು ಪಾವತಿ ಮಾಡುವ ಮೂಲಕ ₹252 ಕೋಟಿ ವಿಮಾ ಮೊತ್ತ ಪಾವತಿಯಾಗಿದೆ. ರಾಜ್ಯದಲ್ಲಿಯೇ ವಿಮಾ ಕಂತು ಪಾವತಿಯಲ್ಲಿ ಗದಗ 2ನೇ ಸ್ಥಾನದಲ್ಲಿದೆ. 2023ರ ಹಿಂಗಾರು ಬೆಳೆಗಳಿಗೆ 1,00,211 ರೈತರು ವಿಮಾ ಕಂತು ಪಾವತಿಸಿದ್ದಾರೆ. ಪ್ರಸಕ್ತ ಸಾಲಿನ ಬಿತ್ತನೆಗೆ ಅಗತ್ಯದ ಗೊಬ್ಬರ, ಕೀಟನಾಶಕ , ಬಿತ್ತನೆ ಬೀಜ ಸರಬರಾಜು ಸಮರ್ಪಕವಾಗಿ ಮಾಡಲಾಗುತ್ತಿದೆ ಎಂದರು.ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗಿದ್ದು ಸಾರ್ವಜನಿಕರಿಗೆ ಕುಡಿಯಲು ಸರಬರಾಜು ಮಾಡುವ ನೀರಿನ ಪರೀಕ್ಷೆ ಕಡ್ಡಾಯವಾಗಿ ಮಾಡಬೇಕು. ಕುಡಿಯಲು ಸೂಕ್ತವೆಂದೆನಿಸಿದಲ್ಲಿ ಮಾತ್ರವೇ ಸರಬರಾಜು ಮಾಡಬೇಕು. ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳ ಕುರಿತು ಜಾಗೃತಿ ಮೂಡಿಸುವ ಮೂಲಕ ಜನಸಾಮಾನ್ಯರ ಆರೋಗ್ಯ ಸಂರಕ್ಷಣೆ ಮಾಡುವಂತೆ ಆರೋಗ್ಯ ಇಲಾಖೆ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳಿಗೆ ಸಿ. ಶಿಖಾ ಸೂಚಿಸಿದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಕಾಂತ ಕೋಟೆಮನಿ ಮಾತನಾಡಿ, ಜಿಲ್ಲೆಯಲ್ಲಿ ಶೇ. 20ರಷ್ಟು ಬಿತ್ತನೆಯಾಗಿದೆ. 35 ಸಾವಿರಕ್ಕೂ ಅಧಿಕ ರೈತರು ತೋಟಗಾರಿಕಾ ಬೆಳೆಗಳನ್ನು ಬೆಳೆಯುತ್ತಿದ್ದಾರೆ ಎಂದು ತಿಳಿಸಿದರು.ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ರವಿ ಗುಂಜೀಕರ ಮಾತನಾಡಿ, ಇಲಾಖೆ ವ್ಯಾಪ್ತಿಯಲ್ಲಿ 62 ವಸತಿ ನಿಲಯಗಳಿವೆ. ಇದರಲ್ಲಿ 38 ಸ್ವಂತ ಕಟ್ಟಡ ಹಾಗೂ 24 ನಿವೇಶನ ಹೊಂದಿವೆ. ಈ ವರ್ಷ ಎರಡು ವಸತಿ ನಿಲಯಗಳು ಮಂಜೂರಾಗಿದ್ದು, ಈ ವಾರ ಆರಂಭವಾಗಲಿವೆ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ ಮಾತನಾಡಿ, 26 ಮೆಟ್ರಿಕ್ ಪೂರ್ವ ಹಾಗೂ 15 ಮೆಟ್ರಿಕ್ ಆನಂತರದ ವಸತಿ ನಿಲಯಗಳಿವೆ. ನಿಯಮಾನುಸಾರ ವಿದ್ಯಾರ್ಥಿಗಳಿಗೆ ಆಹಾರ ಸೌಲಭ್ಯ ನೀಡಲಾಗುತ್ತಿದೆ ಎಂದರು.ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿ ಅಮಿತ ಬಿದರಿ ಮಾತನಾಡಿ, ಜಿಲ್ಲೆಯಲ್ಲಿ ಇಲಾಖಾ ವ್ಯಾಪ್ತಿಯಿಂದ 6 ವಸತಿ ನಿಲಯಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ ಮಾತನಾಡಿ, ಜಿಲ್ಲೆಯಲ್ಲಿ 1248 ಅಂಗನವಾಡಿ ಕೇಂದ್ರಗಳಿವೆ. ಇದರಲ್ಲಿ 173 ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. 75 ಕಟ್ಟಡ ಕಾಮಗಾರಿಗಳು ವಿವಿಧ ಹಂತದಲ್ಲಿವೆ. ಜಿಲ್ಲೆಯಲ್ಲಿ ಪೌಷ್ಟಿಕಾಂಶದ ಕೊರತೆಯಿದ್ದ 63 ಮಕ್ಕಳಿದ್ದು, ಅವರನ್ನು ಎನ್ಆರ್ಸಿಗೆ ದಾಖಲಿಸುವ ಮೂಲಕ ಆರೋಗ್ಯ ಸುಧಾರಣೆಗೆ ಕ್ರಮ ವಹಿಸಲಾಗುತ್ತಿದೆ ಎಂದರು.ಜಿಪಂ ಸಿಇಒ ಭರತ್ ಎಸ್. ಮಾತನಾಡಿ, ರಾಷ್ಟ್ರೀಯ ತೋಟಗಾರಿಕಾ ಮಿಷನ್ ಬಳಸಿಕೊಂಡು ಶಾಶ್ವತ ತೋಟಗಾರಿಕೆ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕು. ಜಿಲ್ಲೆಯ ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ, ಗಜೇಂದ್ರಗಡ ತಾಲೂಕಿನ ಪ್ರದೇಶಗಳು ತೋಟಗಾರಿಕೆಗೆ ಉತ್ತಮ ವಾತಾವರಣ ಹಾಗೂ ನೀರಿನ ಲಭ್ಯತೆ ಇರುವುದರಿಂದ ಸದುಪಯೋಗ ರೈತರಿಗೆ ದೊರಕಿಸಿ ಎಂದರು.
ಡಿಎಚ್ಒ ಡಾ. ಎಸ್.ಎಸ್. ನೀಲಗುಂದ, ಜಿಪಂ ಮುಖ್ಯ ಯೋಜನಾಧಿಕಾರಿ ನಿರ್ಮಲಾ, ಲೆಕ್ಕಾಧಿಕಾರಿ ಪ್ರಶಾಂತ, ಡಿಡಿಪಿಐ ಎಂ.ಎ. ರಡ್ಡೇರ, ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಹುಲಗಣ್ಣವರ, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಗಂಗಾಧರ ಶಿರೋಳ, ಪಿಆರ್ಇಡಿ ಕಾರ್ಯಪಾಲಕ ಅಭಿಯಂತರ ವಿಜಯಕುಮಾರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.