ಶಿವಾನಂದ ಮಲ್ಲನಗೌಡ್ರ ಕನ್ನಡಪ್ರಭ ವಾರ್ತೆ ಬ್ಯಾಡಗಿ
ಅನ್ಯಭಾಷೆ ಆಕ್ರಮಣದ ವಿರುದ್ಧದ ಹೋರಾಟದಲ್ಲಿ ಒಂದು ಭಾಷೆ ತನ್ನ ಸ್ಥಾನ ಕಳೆದುಕೊಂಡಾಗ ಭವಿಷ್ಯದಲ್ಲಿ ಅದಕ್ಕೆ ಸಾವು ಖಚಿತ. ಕನ್ನಡ ಭಾಷೆಗೆ ನಗರಗಳಿಗೆ ಹೋಲಿಸಿದರೆ ಹಳ್ಳಿಗಳಲ್ಲಿ ಅಷ್ಟೊಂದು ಬೆದರಿಕೆ ಇಲ್ಲ, ಗ್ರಾಮೀಣ ಪ್ರದೇಶದ ನಿವಾಸಿಗಳಂತೆ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಸಂಪ್ರದಾಯಗಳ ಉಳಿಸಿಕೊಳ್ಳುವ ಕುರಿತು ನಗರದಲ್ಲಿರುವ ಕನ್ನಡಿಗರು ಜಾಗೃತರಾಗಬೇಕು ಎಂದು ಏಳನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಜೀವರಾಜ ಛತ್ರದ ತಿಳಿಸಿದರು.ಕನ್ನಡಪ್ರಭ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಕರ್ನಾಟಕ ಚರಿತ್ರೆ ಪೂರ್ವ ಶಿಲಾಯುಗದಷ್ಟು ಹಳೆಯದಾಗಿದೆ. ಸಂಶೋಧನೆಯಿಂದ ದೊರೆತಿರುವ ಕೈಕೊಡಲಿಗಳು ಮತ್ತು ಕಡುಗತ್ತಿಗಳು ಸಂಸ್ಕೃತಿಯ ಇರುವಿಕೆಯನ್ನು ಸಾಕ್ಷಿಯಾಗಿಸುತ್ತಿವೆ. ಕಿತ್ತೂರುರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಸ್ವಾತಂತ್ರ್ಯ ಸಂಗ್ರಾಮಕ್ಕಿಂತ ಮೊದಲೇ ಬ್ರಿಟಿಷರ ವಿರುದ್ಧ ಮುಗಿಬಿದ್ದ ಕನ್ನಡದ ವೀರಕಲಿಗಳಾಗಿದ್ದಾರೆ. ಅಂತಹವರು ಜನಿಸಿದ ಕಿತ್ತೂರು ಕರ್ನಾಟಕದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸ್ವಾಗತಾರ್ಹ.ಕನ್ನಡ ಪಸರಿಸಿಕೊಳ್ಳಬೇಕಾದ ಜಾಗಗಳು ಇನ್ನೂ ಬಹಳಷ್ಟಿವೆ. ನ್ಯಾಯಾಲಯದ ತೀರ್ಪುಗಳು ಕನ್ನಡದಲ್ಲಿರಬೇಕು ಎಂಬುದು ಸಾಹಿತ್ಯ ಪರಿಷತನ ಹಕ್ಕೊತ್ತಾಯಗಳಲ್ಲಿ ಒಂದಾಗಿದೆ ಎಂದರು.ಕನ್ನಡಿಗರಿಗೆ ಏನು ಬಂತು..?:
ಸಮ್ಮೇಳನದಲ್ಲಿನ ಚರ್ಚೆಗಳು ಮತ್ತು ನಿರ್ಣಯಗಳು ‘ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರವೆಂಬ ಬಹುದೊಡ್ಡ ಸೇತುವೆ ಮೂಲಕವೇ ದಾಟಿಸಬೇಕಾಗಿದೆ. ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಸಿಗದಿದ್ದರೆ ಬಹುಶಃ ಬರುವ ದಿನಗಳಲ್ಲಿ ನಾವೆಲ್ಲರೂ ಕಂಗ್ಲೀಷ್ ಶಾಲೆಗಳ ಕುಡಿಗಳಾಗುವುದರಲ್ಲಿ ಸಂಶಯವಿಲ್ಲ.ವ್ಯಾಪಕವಾಗಿ ಕನ್ನಡ ಬಳಸಿ:ಸಂಪರ್ಕ ಭಾಷೆಯಾಗಿ ನಾವು ಕನ್ನಡದೊಂದಿಗೆ ಇನ್ನೊಂದನ್ನು ಕಲಿತರೆ ತಪ್ಪೇನಿಲ್ಲ ಆದರೆ ಕನ್ನಡ ಸಂಸ್ಕೃತಿಯ ಅಭಿವೃದ್ಧಿ ಮತ್ತು ರಕ್ಷಣೆಗಾಗಿ ಭಾಷೆಯನ್ನು ವ್ಯಾಪಕವಾಗಿ ಬಳಸಬೇಕಾಗಿದೆ. ಸರ್ಕಾರವೂ ಕೂಡ ಇದನ್ನು ಬಲವಾಗಿ ಸೂಚಿಸಬೇಕು, ಅಂದಾಗ ಪ್ರತಿಯೊಬ್ಬರ ಜೀವನೋಪಾಯದ ಭಾಷೆ ಕನ್ನಡವಾಗಲಿದೆ. ಕನ್ನಡ ನಾಡುನುಡಿ ಬೆಳೆಯಬೇಕು, ಕನ್ನಡ ಸಾಹಿತ್ಯ ಬೆಳೆಯಬೇಕು, ಕನ್ನಡ ನಾಡು ಒಂದಾಗಬೇಕು, ಕನ್ನಡ ಭಾಷಿಕರು ಮುಂದುವರಿಯಬೇಕು ಅಂದಾಗ ಮಾತ್ರ ಸಾಹಿತ್ಯ ಸಮ್ಮೇಳನದ ಮೂಲ ಉದ್ದೇಶ ಈಡೇರಲಿದೆ ಎಂದರು.ಸಮ್ಮೇಳನಗಳನ್ನು ಹತ್ತಿರದಿಂದ ನೋಡಿದ್ದೇನೆ, ಸಾಹಿತ್ಯ ಪರಿಷತ್ತಿಗೆ ಚಿರಪರಿಚಿತ ಕನ್ನಡ ನನಗೆ ಮುಕ್ತವಾದ ಜ್ಞಾನ ವನ್ನು ನೀಡಿ ಬೆಳೆಸಿದೆ. ಭಾಷೆಗಾಗಿ ಸವೆದಿದ್ದೇನೆ, ಸವೆಯುತ್ತಿದ್ದೇನೆ. ಭಾಷೆಯೂ ನನ್ನನ್ನು ಗುರ್ತಿಸಿದೆ. ಹೀಗಾಗಿ ಕನ್ನಡವೇ ನನ್ನ ಸರ್ವಸ್ವ. ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಆವರಣದಲ್ಲಿ ನಡೆಯುತ್ತಿರುವ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದ.