ಕಂಪನಿಗಳು ಸ್ಥಳೀಯರಿಗೆ ಹೆಚ್ಚಿನ ಉದ್ಯೋಗವಕಾಶ ನೀಡಲಿ: ಶಾಸಕ ರಾಘವೇಂದ್ರ ಹಿಟ್ನಾಳ

KannadaprabhaNewsNetwork | Published : Aug 15, 2024 1:48 AM

ಸಾರಾಂಶ

ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಅವರ ವಿದ್ಯಾರ್ಹತೆ ಮೇಲೆ ಉದ್ಯೋಗವಕಾಶವನ್ನು ಕಲ್ಪಿಸಿಕೊಡುವಂತೆ ಕಂಪನಿಯ ಮುಖ್ಯಸ್ಥರಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಕೊಪ್ಪಳ

ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಗ್ರಾಪಂ ಮೇಲ್ಮಹಡಿ ಕಟ್ಟಡವನ್ನು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಉದ್ಘಾಟಿಸಿದರು.

ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕ, ಬೇವಿನಹಳ್ಳಿ ಗ್ರಾಪಂ ನಿರ್ಮಾಣಕ್ಕೆ ಸಹಕಾರ ನೀಡಿರುವ ಕಿರ್ಲೊಸ್ಕರ್ ಫರಸ್ ಕಂಪನಿಯ ಕಾರ್ಯ ಶ್ಲಾಘನೀಯವಾದುದು. ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ಹಿಂದೆ ಭೂಮಿಯನ್ನು ಕೂಡ ಕೊಡಿಸಿದ್ದರು, ಇಂದು ಪಂಚಾಯಿತಿಯ ಮೇಲ್ಮಹಡಿ ಕಟ್ಟಡ ನಿರ್ಮಿಸಿಕೊಟ್ಟಿದ್ದಾರೆ. ಗ್ರಾಪಂ ವ್ಯಾಪ್ತಿಯ ಎಲ್ಲರ ಪರವಾಗಿ ಕಿರ್ಲೊಸ್ಕರ್ ಕಂಪನಿಯವರಿಗೆ ಧನ್ಯವಾದ ತಿಳಿಸುತ್ತೇನೆ. ಕಂಪನಿ ಸದಾ ಸಮಾಜಮುಖಿ ಕೆಲಸ ಮಾಡುತ್ತಿದೆ. ಸ್ಥಳೀಯರಿಗೆ ಕೆಲಸದ ಅವಕಾಶ ನೀಡಿದ್ದಾರೆ, ಇನ್ನೂ ಸ್ವಲ್ಪ ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಅವರ ವಿದ್ಯಾರ್ಹತೆ ಮೇಲೆ ಉದ್ಯೋಗವಕಾಶವನ್ನು ಕಲ್ಪಿಸಿಕೊಡುವಂತೆ ಕಂಪನಿಯ ಮುಖ್ಯಸ್ಥರಲ್ಲಿ ಮನವಿ ಮಾಡಿದರು.

ಕಂಪನಿಗಳು ಸ್ಥಳೀಯರಿಗೆ ಹೆಚ್ಚಿನ ಉದ್ಯೋಗವಕಾಶ ನೀಡಿದಾಗ ಮಾತ್ರ ಸ್ಥಳೀಯರು ಉದ್ಯೋಗದಲ್ಲಿ ಉತ್ತಮ ಬೆಳವಣಿಗೆ ಹೊಂದಲು ಸಾಧ್ಯ. ಆದ್ದರಿಂದ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಶಾಲಾ ಕೊಠಡಿ ನಿರ್ಮಾಣಕ್ಕೆ ಅಡಿಗಲ್ಲು:ಕೊಪ್ಪಳ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ₹12 ಲಕ್ಷ ಮೊತ್ತದ ನೂತನ ಶಾಲಾ ಕೊಠಡಿ ನಿರ್ಮಾಣಕ್ಕೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅಡಿಗಲ್ಲು ನೆರವೇರಿಸಿದರು. ಶಹಾಪುರ ಗ್ರಾಮದಲ್ಲಿ ಜನಸಂಪರ್ಕ ಸಭೆ ಹಮ್ಮಿಕೊಂಡು ಗ್ರಾಮದ ಜನರ ಅಹವಾಲು ಆಲಿಸಿ, ಗ್ರಾಮಕ್ಕೆ ಆಗಬೇಕಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಗ್ರಾಮದ ಮುಖಂಡರುಗಳ ಜೊತೆ ಚರ್ಚೆ ನಡೆಸಿದರು.

ಈ ಸಂದರ್ಭದಲಿ ಸಂಸದ ಕೆ. ರಾಜಶೇಖರ್ ಹಿಟ್ನಾಳ, ಕಿರ್ಲೊಸ್ಕರ್ ಕಂಪನಿಯ ಮುಖ್ಯ ವ್ಯವಸ್ಥಾಪಕ ಆರ್.ವಿ. ಗುಮಾಸ್ತೆ, ಮ್ಯಾನೇಜರ್ ನಾರಾಯಣ, ಗ್ರಾಪಂ ಅಧ್ಯಕ್ಷೆ ತಿಪ್ಪವ್ವ ನಾಯಕ್, ಗ್ಯಾರಂಟಿ ಸಮಿತಿಯ ಅಧ್ಯಕ್ಷ ಬಾಲಚಂದ್ರನ್, ತಹಸೀಲ್ದಾರ್ ವಿಠ್ಠಲ್ ಚೌಗಲೇ, ತಾಪಂ ಇಒ ದುಂಡೇಶ ತುರಾದಿ, ಭೀಮಣ್ಣ ಮೂಲಿಮನಿ, ಮುದ್ದಪ್ಪ ಗೊಂದಿಹೊಸಳ್ಳಿ, ಬಸವರಾಜ್ ಸೌಕಾರ್, ನಿಂಗಜ್ಜ ಶಹಾಪುರ, ಗಿರೀಶ್ ಹಿರೇಮಠ್, ಮುರುಳಿ ಲಿಂಗದಹಳ್ಳಿ, ನಾಗರಾಜ್ ಬಹದ್ದೂರ್ ಬಂಡಿ, ಶಿವಮೂರ್ತಿ ಮೂಲಿಮನಿ, ನಾಗರಾಜ್ ಮಡ್ಡಿ, ಪಿಡಿಒ ಗೀತಾ ಕುಮಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share this article