ಹರಿದಾಸ ಸಾಹಿತ್ಯಕ್ಕೆ ಕಾಯಕಲ್ಪಕ್ಕೆ ಸರ್ಕಾರ ಮುಂದಾಗಲಿ: ಅಗ್ನಿಹೋತ್ರಿ

KannadaprabhaNewsNetwork | Published : Jul 8, 2024 12:34 AM

ಸಾರಾಂಶ

ಹರಿದಾಸ ಸಾಹಿತ್ಯಕ್ಕೆ ಗಟ್ಟಿಯಾದ ಕಾಯಕಲ್ಪ ಕೊಡಲು ಸರಕಾರದ ವತಿಯಿಂದ ವಿಶೇಷವಾಗಿ ಮಾನ್ವಿ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಬೇಕು ಎಂದು ಹಿರಿಯ ವಿದ್ವಾಂಸರಾದ ಡಾ. ವಾಸುದೇವ ಅಗ್ನಿಹೋತ್ರಿ ಒತ್ತಿ ಹೇಳಿದ್ದಾರೆ.

ಕನ್ನಡಪ್ರಭ ವರ್ತೆ ಕಲಬುರಗಿ

ಹರಿದಾಸ ಸಾಹಿತ್ಯಕ್ಕೆ ಗಟ್ಟಿಯಾದ ಕಾಯಕಲ್ಪ ಕೊಡಲು ಸರಕಾರದ ವತಿಯಿಂದ ವಿಶೇಷವಾಗಿ ಮಾನ್ವಿ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಬೇಕು ಎಂದು ಹಿರಿಯ ವಿದ್ವಾಂಸರಾದ ಡಾ. ವಾಸುದೇವ ಅಗ್ನಿಹೋತ್ರಿ ಒತ್ತಿ ಹೇಳಿದ್ದಾರೆ.

ಕಲಬುರಗಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ವಲಯ ವತಿಯಿಂದ ನಡೆದ ಕಲ್ಬುರ್ಗಿ ವಿಭಾಗ ಮಟ್ಟದ ಎರಡನೇ ದಾಸ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನದಿಂದ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕವು ದಾಸ ಸಾಹಿತ್ಯದ ಆಡಂಬೊಲವಾಗಿದೆ. ಈ ವಿಭಾಗದಲ್ಲಿಯೇ ಅತಿಹೆಚ್ಚು ದಾಸರು ಆಗಿ ಹೋಗಿದ್ದಾರೆ. ಜಾತ್ಯಾತೀತ, ಮಠಾತೀತವಾಗಿ, ಮತಾತೀತವಾಗಿ ಎಲ್ಲರಿಗೂ ದಾಸರ ಹಾಡುಗಳು ಮುದ ನೀಡುತ್ತಿವೆ ಎಂದಿರುವ ಹಿರಿಯ ವಿದ್ವಾಂಸರಾದ ಡಾ. ವಾಸುದೇವ ಅಗ್ನಿಹೋತ್ರಿ ದಾಸ ಸಾಹಿತ್ಯ ಕ್ಷೇತ್ರದಲ್ಲಿ ಇನ್ನೂ ಸಾಕಷ್ಟು ಕೆಲಸಗಳನ್ನು ಮಾಡಬೇಕಾಗಿದೆ. ಮುಖ್ಯವಾಗಿ ತರುಣ ಜನಾಂಗಕ್ಕೆ ಮನುಷ್ಯ ಜನ್ಮದ ಮಹತ್ವದ ಅರಿವು ಮೂಡಿಸಬೇಕಿದೆ. ಇದಕ್ಕಾಗಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರಗಳನ್ನು ತೆಗೆಯಬೇಕಾಗಿದೆ ಎಂದರು.

ಮಾನ್ವಿ ಸುತ್ತುಮುತ್ತಲಿನ ಲಿಂಗಸುಗೂರು, ಮಾನ್ವಿ, ಕಲ್ಲೂರು, ಪಂಚಮುಖಿ, ಮೊಸರಕಲ್ ಉತ್ತನೂರು ಮೊದಲಕಲ್, ಗೊರೆಬಾಳ ಮೊದಲಾದ ಸ್ಥಳಗಳಲ್ಲಿ ದಾಸರು ಮತ್ತು ದಾಸ ಸಾಹಿತ್ಯದ ಮಹತ್ವದ ಅಂಶಗಳಿದ್ದು ಈ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹಾಗೂ ಅಧ್ಯಯನ ಸಂಶೋಧನೆಗೆ ಪೂರಕವಾಗಿ ಮಾನವೀಯ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗುವುದು ಉತ್ತಮ ಎಂದರು.

ರಾಯಚೂರು ವಿಶ್ವವಿದ್ಯಾ ಲಯವೆಂದು ನಾಮಕರಣ ಮಾಡಿ ಬೇರೆಲ್ಲ ಪೀಠಗಳಂತೆ ದಾಸ ಸಾಹಿತ್ಯ ಅಧ್ಯಯನ ಪೀಠವನ್ನು ಅನುದಾನ ನೀಡುವುದರೊಂದಿಗೆ ಆರಂಭಿಸಬೇಕು ಸಿಬಿಎಸ್ಇ, ಐಸಿಎಸ್‌ಸಿಇ ಪಠ್ಯಕ್ರಮಗಳಲ್ಲಿ ಹರಿದಾಸರ ವಿಷಯ ಅಳವಡಿಸಬೇಕು ಕಲ್ಯಾಣ ಕರ್ನಾಟಕ ಭಾಗಕ್ಕೆ ರಾಜ್ಯಮಟ್ಟದಲ್ಲಿ ವಿಜಯದಾಸ ಪ್ರಶಸ್ತಿಯನ್ನು ಪ್ರಾರಂಭಿಸುವಂತೆ ಅಗ್ನಿಹೋತ್ರಿ ಒತ್ತಾಯಿಸಿದರು.

ದಾಸ ಸಾಹಿತ್ಯವು ದೇಸಿ ಸಾಹಿತ್ಯವಾಗಿದ್ದು ಕನ್ನಡ ಸಾಹಿತ್ಯದ ತವನಿಧಿಗಳಲ್ಲೊಂದು. ಭಕ್ತಿ ಜ್ಞಾನ ಸಾಮಾಜಿಕ ಸ್ಪಂದನೆ ಹರಿದಾಸ ಸಾಹಿತ್ಯದ ಮೂಲ ಉದ್ದೇಶವಾಗಿದ್ದು ಕಲ್ಯಾಣ ಕರ್ನಾಟಕ ಭಾಗದಲ್ಲಿ ದಾಸ ಸಾಹಿತ್ಯವು ಹುಲಸಾಗಿ ಬೆಳೆದಿದೆ. ಶರಣ ಸಾಹಿತ್ಯ ಮತ್ತು ದಾಸ ಸಾಹಿತ್ಯವು ಸಾಹಿತ್ಯ ಕ್ಷೇತ್ರದ ಎರಡು ಕಣ್ಣುಗಳಂತಿದ್ದು ಶರಣರ ಕಾಯಕ ದಾಸೋಹ ಸಂಸ್ಕೃತಿಯ ಮುಂದುವರೆದ ರೂಪವೇ ದಾಸ ಸಾಹಿತ್ಯವಾಗಿದೆ ಈ ದೇಶದ ಮೂಲ ಸಂಸ್ಕೃತಿಯನ್ನು ಕನ್ನಡದಲ್ಲಿ ಬಿತ್ತಿದ ನಿಜಾಮರ ಕಾಲದ ನಿಜವಾದ ವಾರಸುದಾರರು ಹರಿದಾಸ ರಾಗಿದ್ದರು ಎಂದರು.

ಭಾರತೀಯ ಪರಂಪರೆಯಲ್ಲಿ ದೇಸಿ ಭಾಷೆಯಲ್ಲಿ ಕೀರ್ತನೆಗಳನ್ನು ರಚಿಸಿ ಹಾಡಿ ಜನರನ್ನು ಕುಣಿಸಿದ ಕೀರ್ತಿ ಕನ್ನಡದ್ದು. ವ್ಯಾಸರಾಯರು ಶ್ರೀಪಾದರಾಜರು, ವಿಜಯದಾಸರುಶ್ರೀ ವಾದಿರಾಜರು, ಜಗನ್ನಾಥದಾಸರು, ಕನಕ, ಪುರಂದರ ಸೇರಿದಂತೆ ಅನೇಕ ದಾಸವರೇಣ್ಯರು ಕೀರ್ತನೆ ಸುಳಾದಿ, ಉಗಾಭೋಗ ರೂಪಗಳಲ್ಲಿ ಕಟ್ಟಿಕೊಟ್ಟ ಹಾಡುಗಳು ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಹಾದಿ ಮಾಡಿತು. ಜನರಲ್ಲಿ ವೈಜ್ಞಾನಿಕತೆ ವೈಚಾರಿಕತೆ ಮತ್ತು ವ್ಯವಹಾರಿಕತೆಯ ಮನೋಧರ್ಮವನ್ನು ರೂಢಿಸಿದ ದಾಸರ ಹಾಡುಗಳು ಅತ್ಯಂತ ಮಹತ್ವಪೂರ್ಣವಾದದ್ದು ಸಂಕಟ ಬಂದರೆ ವೆಂಕಟರಮಣ, ಈಸಬೇಕು ಇದ್ದು ಜೈಸಬೇಕು, ಚಾಡಿ ಹೇಳಲು ಬೇಡ, ನಾಲಿಗೆ ರೊಕ್ಕ ಎರಡಕ್ಕೂ ದುಃಖ, ತಲ್ಲಣಿಸದಿರು, ಕಂಡ್ಯ ತಾಳು ಮನವೇ, ತಾಳುವಿಕೆಗಿಂತ ಅನ್ಯ ತಪವಿಲ್ಲ, ಪವಮಾನ ಜಗದಾ ಪ್ರಾಣ ಹೀಗೆ ಹರಿದಾಸ ಸಾಹಿತ್ಯ ಜನರಿಂದ ಜನರಿಗಾಗಿ ಎನ್ನುವ ಮಾತು ನಿಜವಾಗುತ್ತಿದೆ. ಇಂತಹ ಅಪೂರ್ವ ಮತ್ತು ಗಟ್ಟಿ ಸಾಹಿತ್ಯವನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯಲು ಸಮ್ಮೇಳನಗಳು ಹೆಚ್ಚು ಸಹಕಾರಿಯಾಗಲಿದೆ ಎಂದು ಅಗ್ನಿ ಹೋತ್ರಿ ಹೇಳಿದರು.

ವ್ಯಕ್ತಿತ್ವ ನಿರ್ಮಾಣ ದಾಸ ಸಾಹಿತ್ಯದ ಧ್ಯೇಯ: ಕನ್ನಡ ಸಾಹಿತ್ಯದ ತವನಿಧಿಗಳಲ್ಲೊಂದಾದ ದಾಸ ಸಾಹಿತ್ಯವು ವ್ಯಕ್ತಿತ್ವ ನಿರ್ಮಾಣದ ಧ್ಯೇಯವನ್ನು ಹೊಂದಿದೆ. ದಾಸ ಸಾಹಿತ್ಯವು ಭಕ್ತಿ ಸಾಹಿತ್ಯದ ಪ್ರಾತಿನಿಧಿಕವಾಗಿವೆ. ಜೈನರ ಕಾಲದಲ್ಲಿ ಜಿನ ಭಕ್ತಿಯಾಗಿ, ಶರಣರ ಕಾಲದಲ್ಲಿ ಶಿವಭಕ್ತಿಯಾಗಿ, ದಾಸರ ಕಾಲದಲ್ಲಿ ವಿಷ್ಣು ಭಕ್ತಿಯಾಗಿ ಹೊರಹೊಮ್ಮಿತು. ದೈವಭಕ್ತಿ ಕೇಂದ್ರಿತ ಚಿಂತನೆಗಳ ಕೀರ್ತನೆಗಳನ್ನು ದಾಸರು ರಚಿಸಿದರೂ ಮಾನವ ಘನತೆಯನ್ನು ಎತ್ತಿ ಹಿಡಿದು, ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಯಾವುದೇ ನಿರ್ದಿಷ್ಟ ಸಮಾಜದ ಪರವಾಗಿ ದಾಸರ ಕೀರ್ತನೆಗಳು ಇರದೇ ಸರ್ವ ಸಮಾಜದ ಜನರನ್ನು ಉದ್ದೇಶಿಸಿ ಬರೆದವುಗಳಾಗಿವೆ. ಸರ್ವ ಜನಾಂಗದ ಶ್ರೇಯಸ್ಸು ಬಯಸುವುದೇ ದಾಸ ಸಾಹಿತ್ಯದ ಉದ್ದೇಶವಾಗಿದೆ ಎಂದು ದಾಸ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ವಾಸುದೇವ ಅಗ್ನಿಹೋತ್ರಿ ಹೇಳಿದರು.

Share this article