ಹಗರಿಬೊಮ್ಮನಹಳ್ಳಿ: ಶಿಕ್ಷಕರು ತಮ್ಮ ಪಾಲಿನ ಪವಿತ್ರ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸಬೇಕಿದೆ ಎಂದು ಶಾಸಕ ಕೆ. ನೇಮರಾಜನಾಯ್ಕ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರ್ ಮಾತನಾಡಿ, ಎಸ್ಸೆಸ್ಸೆಲ್ಸಿಯಲ್ಲಿ ಫೇಲಾದ ವಿದ್ಯಾರ್ಥಿಗಳು ಬಾಲಕಾರ್ಮಿಕರಾಗುವ ಅಪಾಯದ ಹಿನ್ನೆಲೆ ಪ್ರತಿಶತ ಫಲಿತಾಂಶ ಹೆಚ್ಚಿಸಲು ಈ ಬಾರಿ ಅಗತ್ಯ ಸಿದ್ಧತೆ ನಡೆಸಲಾಗಿದೆ. ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶದ ಗುಣಮಟ್ಟ ಹೆಚ್ಚಿಸಲು ೬ ವಿಷಯಗಳನ್ನು ಒಳಗೊಂಡ ಕಲಿಕಾ ಕಿರಣ ಪುಸ್ತಕ ಸಿದ್ಧಪಡಿಸಲಾಗಿದೆ. ತಾಲೂಕಿನ ಪ್ರತಿ ಶಾಲೆಯಲ್ಲಿ ವಿಶೇಷ ತರಗತಿಗಳ ಮೂಲಕ, ರಸಪ್ರಶ್ನೆ, ಗುಂಪು ಚಟುವಟಿಕೆ, ಮಕ್ಕಳ ಮನೆ ಭೇಟಿ, ಪೋಷಕರ ಸಭೆಯ ಮೂಲಕ ಫಲಿತಾಂಶ ಸುಧಾರಿಸಲು ಶ್ರಮ ಹಾಕಲಾಗುತ್ತಿದೆ. ನುರಿತ ವಿಷಯ ಸಂಪನ್ಮೂಲ ಶಿಕ್ಷಕರ ಮೂಲಕ ಪಾಸಿಂಗ್ ಪ್ಯಾಕೇಜ್ ಪುಸ್ತಕ ಹೊರತರಲಾಗಿದೆ. ಹೊಸ ಪ್ರಯತ್ನದಲ್ಲಿ ೧೦೦ರಷ್ಟು ಯಶಸ್ವಿಯಾಗುತ್ತೇವೆ ಎಂದರು. ಇದೇವೇಳೆ ಆದರ್ಶಶಾಲೆ ಸಂತೋಷ ಕೊಟಿಗಿ, ಕಿತ್ತೂರು ರಾಣಿ ಚನ್ನಮ್ಮ ಶಾಲೆಯ ಕೆ.ಎಂ. ಗಂಗಾಧರ, ಗದ್ದಿಕೇರಿ ಶಾಲೆಯ ನಾಗೇಂದ್ರ ಬಿ. ಮೇವುಂಡಿ ಅವರು ಪಿಪಿಟಿ ಪ್ರದರ್ಶನದ ಮೂಲಕ ಫಲಿತಾಂಶ ಸುಧಾರಣೆಗೆ ಶಾಲಾ ಕ್ರಮ ವಿವರಿಸಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರವಿನಾಯ್ಕ, ನರೇಗಾ ಸಹಾಯಕ ನಿರ್ದೇಶಕ ರಮೇಶ್ ಮಹಾಲಿಂಗಪುರ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಪಿ.ಎಂ. ಮಂಜುನಾಥ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ರವಿಚಂದ್ರನಾಯ್ಕ, ತಾಲೂಕಿನ ಎಲ್ಲ ಪ್ರೌಢಶಾಲೆಗಳ ಮುಖ್ಯಗುರುಗಳು ಇದ್ದರು. ಕಾರ್ಯಕ್ರಮವನ್ನು ದೈಹಿಕ ವಿಷಯ ಪರಿವೀಕ್ಷಕ ಕೊಟ್ರೇಶ್, ಶಿಕ್ಷಣ ಸಂಯೋಜಕರಾದ ಬಿ. ಮುಸ್ತಾಕ್ ಅಹಮದ್, ಎಸ್ಸೆಸ್ಸೆಲ್ಸಿ ನೋಡೆಲ್ ಅಧಿಕಾರಿ ಎನ್.ವಿ. ಶಿವಲಿಂಗಸ್ವಾಮಿ ನಿರ್ವಹಿಸಿದರು.