ನಾಗಲಾಪುರ ಗ್ರಾಪಂ ಮಟ್ಟದಲ್ಲಿ ಸಂಜೀವಿನಿ ಸ್ತ್ರೀ ಶಕ್ತಿ, ಸ್ವಸಹಾಯ ಸಂಘಗಳ ಒಕ್ಕೂಟದ ಪ್ರಥಮ ವಾರ್ಷಿಕೋತ್ಸವ
ಎನ್.ಆರ್.ಎಲ್.ಎಂ. ಸಂಜೀವಿನಿ ಕಾರ್ಯಕ್ರಮದಲ್ಲಿ ಮಹಿಳೆಯರು ಸ್ವಸಹಾಯ ಸಂಘದ ಮೂಲಕ ಜೀವನೋಪಾಯ ಚಟುವಟಿಕೆಗಳಲ್ಲೂ ಭಾಗವಹಿಸಬೇಕು ಎಂದು ಕಾರ್ಯಕ್ರಮ ಜಿಲ್ಲಾ ವ್ಯವಸ್ಥಾಪಕ ರಾಜೇಂದ್ರಕುಮಾರ್ ಕರೆ ನೀಡಿದರು. ಬುಧವಾರ ನಾಗಲಾಪುರ ಗ್ರಾಪಂ ಸಭಾಂಗಣದಲ್ಲಿ ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘಗಳ ಒಕ್ಕೂಟದ 2 ದಿನದ ವಾರ್ಷಿ ಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ 220 ಎನ್.ಆರ್.ಎಂ.ಎಲ್.ಸಂಜೀವಿನಿ ಸ್ವಸಹಾಯ ಸಂಘಗಳಿವೆ. ಇದುವರೆಗೆ ನರಸಿಂಹ ರಾಜಪುರ ತಾಲೂಕಿನಲ್ಲಿ ಮಾತ್ರ 2 ಒಕ್ಕೂಟಗಳ ವಾರ್ಷಿಕೋತ್ಸವ ನಡೆದಿದೆ. ಕಳೆದ 3 ವರ್ಷಗಳ ಹಿಂದೆ ಸಂಜೀವಿನಿ ಸ್ವಸಹಾಯ ಸಂಘಗಳು ಪ್ರಾರಂಭ ವಾಗಿದೆ. ಇದುವರೆಗೆ ಜಿಲ್ಲೆ ವಿವಿಧ ತಾಲೂಕುಗಳಲ್ಲಿ 150ಕ್ಕೂ ಹೆಚ್ಚು ಕಾರ್ಯಕ್ರಮ ನಡೆಸಿದ್ದೇವೆ. ಪ್ರಾರಂಭದಲ್ಲಿ ಉಳಿತಾಯಕ್ಕೆ ಸೀಮಿತವಾಗಿದ್ದ ಸ್ವಸಹಾಯ ಒಕ್ಕೂಟಗಳು ಈಗ ಜೀವನ ನಡೆಸಲು ಅನುಕೂಲ ವಾಗುವಂತೆ ಉದ್ಯಮ ಸ್ಥಾಪಿಸಿ ಆರ್ಥಿಕ ಚಟುವಟಿಕೆಗಳಲ್ಲೂ ಭಾಗಿಯಾಗಿದ್ದಾರೆ. ಮಹಿಳೆಯರು ಸ್ವಾವಲಂಭಿ ಗಳಾಗಿ ಬದುಕಬೇಕು ಎಂದು ಕೇಂದ್ರದಿಂದ ರಾಷ್ಟೀಯ ಗ್ರಾಮೀಣ ಜೀವನೋಪಯೋಗ ಇಲಾಖೆ ಹುಟ್ಟು ಹಾಕಲಾಯಿತು. ಬೇರೆ ರಾಜ್ಯದಲ್ಲಿ ಬೇರೆ, ಬೇರೆ ಹೆಸರಿದ್ದು, ಕರ್ನಾಟಕದಲ್ಲಿ ಸಂಜೀವಿನಿ ಒಕ್ಕೂಟ ಎಂದು ಹೆಸರಿಡಲಾಗಿದೆ ಎಂದರು.ಈಗಾಗಲೇ 65 ತರಬೇತಿ ನೀಡಿದ್ದು, ಈ ಹಿಂದೆ ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿದ್ದ ತರಬೇತಿ, ಈಗ ತಾಲೂಕು ಕೇಂದ್ರ ದಲ್ಲೇ ತರಬೇತಿ ನೀಡಲಾಗುತ್ತಿದೆ. ಪ್ರಸ್ತುತ 15 ಲಕ್ಷ ಅನುದಾನ ನೇರವಾಗಿ ಸಂಜೀವಿನಿ ಒಕ್ಕೂಟದ ಖಾತೆಗೆ ಹಾಕಿದ್ದೇವೆ ಎಂದರು.
ತಾಲೂಕು ವ್ಯವಸ್ಥಾಪಕ ಎಂ.ಸುಬ್ರಮಣ್ಯ ಮಾತನಾಡಿ, ನರಸಿಂಹರಾಜಪುರ ತಾಲೂಕಿನಲ್ಲಿ 14 ಸಂಜೀವಿನಿ ಒಕ್ಕೂಟ ರಚನೆಯಾಗಿದೆ. ಸರ್ಕಾರಿ ಕಾರ್ಯಕ್ರಮಗಳನ್ನು ಈ ಒಕ್ಕೂಟದ ಮೂಲಕ ಅನುಷ್ಟಾನ ಮಾಡಲಾಗುತ್ತಿದೆ. ಈಗಾಗಲೇ 14 ಸ್ವಸಹಾಯ ಸಂಘದ ಸದಸ್ಯರಿಗೆ ವಾಹನ ಚಾಲನೆ ತರಬೇತಿ ನೀಡಲಾಗಿದೆ. ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ವಾಹನಗಳ ತರಬೇತಿ ಪಡೆದ ಮಹಿಳೆಯರೇ ಚಾಲನೆ ಮಾಡಲಿದ್ದಾರೆ. ಸಭೆ ಅಧ್ಯಕ್ಷತೆಯನ್ನು ನಾಗಲಾಪುರ ಸಂಜೀವಿನಿ ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಕಮಲ ಸುಧೀರ್ ವಹಿಸಿದ್ದರು.