ಹೊಸಪೇಟೆ: ಸಿರಿಧಾನ್ಯಗಳೇ ಸೂಪರ್ ಫುಡ್ ಗಳಾಗಿವೆ. ಕೇವಲ ನಮ್ಮ ದೇಶ ಮಾತ್ರವಲ್ಲ ಇಡೀ ಜಗತ್ತಿನಲ್ಲಿ ಇವುಗಳಿಗೆ ಭಾರೀ ಬೇಡಿಕೆ ಇದೆ. ನಾವು ಮೊದಲು ಇದನ್ನು ಬಳಕೆ ಮಾಡುವುದನ್ನು ಕಲಿಯಬೇಕು. ಕೃಷಿ ಇಲಾಖೆ ಅಧಿಕಾರಿಗಳು ಸೇರಿದಂತೆ ರೈತರು ಕೂಡ ಸಿರಿಧಾನ್ಯಗಳನ್ನು ಬಳಕೆ ಮಾಡಬೇಕು. ಆಗ ಮಾತ್ರ ಎಲ್ಲರೂ ಬಳಕೆ ಮಾಡುತ್ತಾರೆ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.
ನಾವು ಪ್ರತಿದಿನ ಸೇವಿಸುವ ಆಹಾರ ಪದಾರ್ಥಗಳಿಗೆ ಹೋಲಿಸಿದರೆ ಸಿರಿಧಾನ್ಯಗಳಲ್ಲಿ ಸಿಗುವ ಪೌಷ್ಠಿಕಾಂಶಗಳ ಲಾಭವೇ ಹೆಚ್ಚಾಗಿದೆ. ಇತರ ಬೆಳೆಗಳಿಗೆ ಹೋಲಿಸಿದರೆ ಸಿರಿಧಾನ್ಯ ಬೆಳೆಗಳಿಗೆ ಕಡಿಮೆ ನೀರು ಸಾಕು. ಕೀಟ ಬಾಧೆ ಮತ್ತು ಹವಾಮಾನ ವೈಪರೀತ್ಯದ ಸವಾಲನ್ನೂ ಎದುರಿಸುವ ಸಾಮರ್ಥ್ಯವನ್ನು ಈ ಧಾನ್ಯಗಳ ಸಸಿಗಳು ಹೊಂದಿವೆ. ಇವು ಇತರ ಬೆಳೆಗಳಿಗಿಂತ ಹೆಚ್ಚು ಪರಿಸರಸ್ನೇಹಿಯಾಗಿವೆ. ಇತ್ತೀಚೆಗೆ ರೈತರು ಕೂಡ ಬರಿ ಅನ್ನ ಊಟ ಮಾಡಿ ಸಿರಿ ಧಾನ್ಯ ಆಹಾರ ಸೇವಿಸುತ್ತಿಲ್ಲ. ನಮ್ಮ ಬೆಳೆಗಳನ್ನು ಊಟ ಮಾಡಿ, ಉಳಿದ ಧಾನ್ಯಗಳನ್ನು ಮಾರಾಟ ಮಾಡಬೇಕು. ಆಗ ಈ ಸಿರಿಧಾನ್ಯಗಳಿಗೆ ಹೆಚ್ಚಿನ ಆದ್ಯತೆ ಸಿಗಲಿದೆ ಎಂದರು.
ಸ್ಪರ್ಧೆಯಲ್ಲಿ ಇಬ್ಬರು ಪುರುಷರು ಸೇರಿದಂತೆ 47 ಮಹಿಳೆಯರು ಭಾಗಿಯಾಗಿದ್ದರು. ರಾಗಿ ಕೇಲ್ಸ್, ಸಜ್ಜೆ ಮಿದಿಕೆ, ರಾಗಿ ರೊಟ್ಟಿ, ನವಣಕ್ಕಿ ಬಿರಿಯಾನಿ, ನವಣಕ್ಕಿ ಬುತ್ತಿ , ಅಗಸೆ ಹಿಂಡೆ, ನವಣೆ ಹಾಲುಬಾಯಿ, ಖಿರ್, ನವಣೆ ಪೊಂಗಲ್, ಲಾಡು, ರೊಟ್ಟಿ, ಪಡ್ಡು, ನವಣೆ ಮೈಸೂರು ಪಾಕ್, ತೋಗೆ, ಹುಗ್ಗಿ, ಉಪ್ಪಿಟ್ಟು, ರಾಗಿ ಹಲ್ವ, ಚಕ್ಲಿ, ಮಾಲ್ದಿ, ರಾಗಿ ತಾಲಿಪೆಟ್ಟೆ, ಬಿಸಿ ಬೆಳೆಬಾತ್, ರಾಗಿ ಮೊಮೊಸು, ಕಿಲ್ಸಾ, ಪಲಾವ್, ರಾಗಿ ಗಾರ್ಗಿ, ಕರದೆಂಟು, ಸಾಮೆ ಬಿಸಿ ಬೆಳೆಬಾತ್, ನವಣೆ ಹೊಳಿಗೆ, ಸಜ್ಜಿ ಕಡಬು, ಜೋಳದ ಅನ್ನ, ರಾಗಿ ಹಪ್ಪಳ, ಜೋಳದ ಅಮ್ಲಿ, ಸುರಳಿ ಹೊಳಗಿ, ಬರಗು ಎಗ್ ರೈಸ್, ಜೋಳದ ಖಾರ ಮುದ್ದೆ, ಅಲಸಂದೆ ಬೆಳೆ ಪಾಯಸ ಸೇರಿದಂತೆ ವಿವಿಧ ಖಾದ್ಯಗಳನ್ನು ಸಿದ್ಧಪಡಿಸಿದ್ದರು.ಜಿಪಂ ಸಿಇಒ ಅಲಿ ಅಕ್ರಮ್ ಶಾ, ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದುಗಲ್, ಹೂವಿನ ಹಡಗಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಆಹಾರ ತಜ್ಞೆ ರಾಜೇಶ್ವರಿ, ಹಗರಿಯ ಕೃಷಿ ವಿಜ್ಞಾನ ಕೇಂದ್ರದ ಆಹಾರ ತಜ್ಞೆ ಸುನೀತಾ ಮತ್ತಿತರರಿದ್ದರು.
ಹೊಸಪೇಟೆಯಲ್ಲಿ ಶುಕ್ರವಾರ ನಡೆದ ವಿಜಯನಗರ ಜಿಲ್ಲಾಮಟ್ಟದ ಸಿರಿಧಾನ್ಯ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರು ಖಾದ್ಯಗಳನ್ನು ಸವಿದರು.