ಸಕಲೇಶಪುರದಲ್ಲಿ ಡಯಾಲಿಸಿಸಿ ಘಟಕ ಆರಂಭಕನ್ನಡಪ್ರಭ ವಾರ್ತೆ ಸಕಲೇಶಪುರ
ಪಟ್ಟಣದ ಲಯನ್ಸ್ ಸಂಸ್ಥೆ ತಾಲೂಕಿಗೆ ಒಂದು ಆಸ್ತಿ ಇದ್ದ ಹಾಗೆ ಎಂದು ಶಾಸಕ ಸಿಮೆಂಟ್ ಮಂಜು ಬಣ್ಣಿಸಿದರು.ಪಟ್ಟಣದ ಶೀನಪ್ಪ ಶೆಟ್ಟಿ ಕಲ್ಯಾಣ ಮಂಟಪದ ಆವರಣದಲ್ಲಿ ಹಾಸನ ಜಿಲ್ಲಾ ಬಂಟರ ಸಂಘ ಹಾಗೂ ಲಯನ್ ಸಂಸ್ಥೆ ವತಿಯಿಂದ ನಿರ್ಮಿಸಲಾಗಿರುವ ಡಯಾಲಿಸಿಸ್ ಘಟಕದ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ತಾಲೂಕಿನಲ್ಲಿ ಹಲವಾರು ಸೇವಾ ಸಂಸ್ಥೆಗಳಿವೆ. ಆದರೆ, ಲಯನ್ಸ್ ಸೇವಾ ಸಂಸ್ಥೆ ಇತರ ಸೇವಾ ಸಂಸ್ಥೆಗಳಿಗೆ ಮಾದರಿಯಾಗಿದೆ. ಪಟ್ಟಣದ ಸುಭಾಷ್ ಮೈದಾನದಲ್ಲಿ ಲಯನ್ಸ್ ಸಂಸ್ಥೆ ಅಭಿವೃದ್ಧಿ ಪಡಿಸಿರುವ ರುದ್ರಭೂಮಿ ರಾಜ್ಯದಲ್ಲೆ ಮಾದರಿಯಾಗಿದೆ. ಲಯನ್ಸ್ ಸಂಸ್ಥೆಯು ಪಟ್ಟಣದ ಕ್ರಾರ್ಡ್ ಆಸ್ಪತ್ರೆಗೆ ಐಸಿಯು ವಾರ್ಡ್ನ್ನು ಸಹ ನಿರ್ಮಿಸಿದೆ. ಇದೀಗ ಲಯನ್ಸ್ ಸಂಸ್ಥೆ ಹಾಸನ ಜಿಲ್ಲಾ ಬಂಟರ ಸಂಘದ ಸಹಯೋಗದಲ್ಲಿ ಒಂದು ಕೋಟಿ ರು. ವೆಚ್ಚದಲ್ಲಿ ೩ ಡಯಾಲಿಸಿಸ್ ಯಂತ್ರಗಳನ್ನು ಲೋಕಾರ್ಪಣೆಗೊಳಿಸಿದ್ದು ಡಯಾಲಿಸಿಸ್ಗಾಗಿ ದೂರದೂರದ ಊರುಗಳಿಗೆ ತೆರಳಬೇಕಿದ್ದ ರೋಗಿಗಳಿಗೆ ಇದು ಸಂಜೀವಿನಿಯಾಗಿದೆ ಎಂದು ಹೇಳಿದರು.
ಸಂಜೀವಿನಿ ಸೇವಾ ಟ್ರಸ್ಟ್ ಅಧ್ಯಕ್ಷ ಸಂಜೀತ್ ಶೆಟ್ಟಿ ಮಾತನಾಡಿ, ಲಯನ್ಸ್ ಸಂಸ್ಥೆ ಪದಾಧಿಕಾರಿಗಳು ಹಾಗೂ ಬಂಟರ ಸಂಘದ ಸದಸ್ಯರ ನೆರವಿನಿಂದ ಇಂದು ಡಯಾಲಿಸಿಸ್ ಸೆಂಟರ್ ಅನ್ನು ಲೋಕಾರ್ಪಣೆ ಮಾಡಿದ್ದೇವೆ. ಲಯನ್ಸ್ ರಾಜ್ಯಪಾಲರಾಗಿ ಆಯ್ಕೆಯಾದ ನಂತರ ವೈದ್ಯಕೀಯ, ಸಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಲಾಗಿದೆ. ಜಿಲ್ಲಾಸ್ಪತ್ರೆಗೆ ೧೦ ಐಸಿಯು ಬೆಡ್ಡ್, ಎರಡು ಡಯಾಲಿಸಿಸ್ ಯಂತ್ರಗಳನ್ನು ಕೊಡುಗೆಯಾಗಿ ನೀಡಿದ್ದೇವೆ. ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ೧೦ ಐಸಿಯು ಬೆಡ್ಡುಗಳ ಒಳಗೊಂಡ ಸುಸಜ್ಜಿತ ಐಸಿಯು ವಾರ್ಡ್ ನಿರ್ಮಿಸಲಾಗಿದೆ. ಪಟ್ಟಣದ ಹಿಂದೂ ಮುಕ್ತಿ ಧಾಮವನ್ನು ಸುಮಾರು ನಲವತ್ತು ಲಕ್ಷ ರು. ವೆಚ್ಚದಲ್ಲಿ ಆಧುನಿಕವಾಗಿ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸೇವಾ ಚಟುವಟಿಕೆಗಳನ್ನು ಮಾಡಲಾಗುವುದು ಎಂದು ಹೇಳಿದರು.ಕಾರ್ಯಕ್ರಮದ ವೇದಿಕೆಯಲ್ಲಿ ಉಪವಿಭಾಗಾಧಿಕಾರಿ ಡಾ.ಶೃತಿ, ತಹಸೀಲ್ದಾರ್ ಮೇಘನಾ, ಮಂಗಳೂರಿನ ಎ.ಜೆ.ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ.ಪ್ರಶಾಂತ್ ಮಾರ್ಲ, ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಅಮರ್ನಾಥ್ ಶೆಟ್ಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಿಲ್, ಲಯನ್ಸ್ ಹಾಲಿ ಜಿಲ್ಲಾ ರಾಜ್ಯಪಾಲ ಡಾ.ಮೆಲ್ವಿನ್ ಡಿಸೋಜಾ ಮುಂತಾದವರಿದ್ದರು.
ಸಕಲೇಶಪುರದಲ್ಲಿ ಹಾಸನ ಜಿಲ್ಲಾ ಬಂಟರ ಸಂಘ ಹಾಗೂ ಲಯನ್ಸ್ ಸಂಸ್ಥೆ ವತಿಯಿಂದ ಮಾಡಲಾಗಿರುವ ನೂತನ ಡಯಾಲಿಸಿಸ್ ಘಟಕವನ್ನು ಲೋಕಾರ್ಪಣೆಗೊಳಿಸಲಾಯಿತು.