- ಜಾತಿ ಗಣತಿ ಸಮೀಕ್ಷೆ ವರದಿಗೆ ಬಿಜೆಪಿ, ಜೆಡಿಎಸ್ ವಿರೋಧವಿದೆ- ಮೌಖಿಕವಾಗಿ ಸಿಎಂ ಸಿದ್ದರಾಮಯ್ಯ ಜತೆ ನಾವೂ ಚರ್ಚಿಸಿದ್ದೇವೆ- ‘ನೋಡೋಣ ತಡಿಯಪ್ಪ’ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ- ಒಕ್ಕಲಿಗರ ರೀತಿಯೇ ನಾವೂ ಮಾಡಿ ವಿರೋಧ ವ್ಯಕ್ತಪಡಿಸುತ್ತೇವೆ- ಜಾತಿ ಗಣತಿ ವರದಿ ಲೋಪದಿಂದ ಕೂಡಿದೆ ಎಂದು ಹೇಳುತ್ತಲೇ ಇದ್ದೇವೆ- ಸಮೀಕ್ಷೆಯಲ್ಲಿ ಲಿಂಗಾಯತ- ವೀರಶೈವ ಎಂದು ಬರೆದುಕೊಂಡೇ ಇಲ್ಲ- ವರದಿ ಸಲ್ಲಿಕೆ ಬಳಿಕ ಸರ್ಕಾರ ಏನು ಮಾಡುತ್ತದೆ ಎಂಬುದನ್ನು ನೋಡುತ್ತೇವೆ
--
ಪ್ರತ್ಯೇಕ ಧರ್ಮ ವಿಚಾರದಲ್ಲಾದಂತೆಈಗಲೂ ಕಾಂಗ್ರೆಸ್ಸಿಗೆ ತೊಂದರೆ
- ಶಾಮನೂರು ಶಿವಶಂಕರಪ್ಪ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ
ಒಕ್ಕಲಿಗ ಸಮುದಾಯ ಹಾಗೂ ಅದರ ನಾಯಕರಂತೆಯೇ, ಜಾತಿ ಗಣತಿ ವರದಿ ಅಂಗೀಕರಿಸದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲಿಂಗಾಯತ ಸಮಾಜವು ಕೂಡ ಮನವಿ ಸಲ್ಲಿಸಲಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ತಿಳಿಸಿದರು.
ಜಾತಿ ಜನಗಣತಿ ವರದಿ ಲೋಪದಿಂದ ಕೂಡಿದೆ ಎಂದು ನಾವು ಮೊದಲಿನಿಂದಲೂ ವಿರೋಧ ಮಾಡುತ್ತಿದ್ದೇವೆ. ವರದಿಯಲ್ಲಿ ಏನಿದೆ ಎಂಬುದು ಸಹ ಸೋರಿಕೆಯಾಗಿದೆ. ಸಮೀಕ್ಷೆಯಲ್ಲಿ ಲಿಂಗಾಯತ-ವೀರಶೈವ ಎಂದು ಬರೆದುಕೊಂಡೇ ಇಲ್ಲ. ಅನೇಕ ಲೋಪದೋಷಗಳು ಎದ್ದು ಕಾಣುತ್ತಿವೆ. ಸರ್ಕಾರ ವರದಿ ಬಂದ ಬಳಿಕ ಏನು ಮಾಡುತ್ತದೆಂಬುದನ್ನು ನೋಡಿಕೊಂಡು ನಾವೇನು ಮಾಡಬೇಕು ಎಂಬುದನ್ನು ನಿರ್ಧರಿಸುತ್ತೇವೆ ಎಂದರು. ಆಯೋಗದ ಅಧ್ಯಕ್ಷರ ಅವಧಿ ವಿಸ್ತರಣೆ ಆಗಿದೆ. ಗಣತಿ ಮಾಡುವುದಾದರೆ ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡಲಿ. ಎಲ್ಲೋ ಕುಳಿತು ಸಮೀಕ್ಷೆ ಮಾಡುವುದಲ್ಲ. ವೈಜ್ಞಾನಿವಾಗಿ ಸಮೀಕ್ಷೆ ಮಾಡಲಿ. ಪ್ರತ್ಯೇಕ ಲಿಂಗಾಯತ ಧರ್ಮ ಎಂದು ಹೋದವರೆಲ್ಲ ಸೋತರು, ಬರೀ ಲಿಂಗಾಯತ ಎಂದು ಹೋದವರೆಲ್ಲ ಮಣ್ಣು ಕಚ್ಚಿದರು. ಒಟ್ಟಾರೆ ಸರಿಯಾದ ರೀತಿಯಲ್ಲಿ ಜಾತಿ ಗಣತಿ ನಡೆದಿಲ್ಲ ಎಂದು ಆರೋಪಿಸಿದರು.
ಮೂಲ ವರದಿ ನಾಪತ್ತೆ ಆಗಿದೆ ಎಂದು ಹೇಳುತ್ತಿದ್ದಾರೆ. ಮತ್ತೊಂದು ಕಡೆ ನಾನು ವರದಿ ಕೊಟ್ಟಿದ್ದೇನೆ ಎಂದು ಕಾಂತರಾಜ ಹೇಳುತ್ತಿದ್ದಾರೆ. ಒಂದು ರೀತಿ ಇದು ನೋಡೋಕೆ ಮಜಾ ಇದೆ ಎಂದು ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯಿಸಿದರು.