ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರು ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಇಲ್ಲಿನ ಪತ್ರಿಕಾಭವನ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ, ಕನ್ನಡ ಭಾಷೆಗೆ ಸಾಹಿತ್ಯವೇ ತಾಯಿ ಬೇರಿದ್ದಂತೆ. ಭಾಷೆ ಉಳಿಯಬೇಕಿದ್ದರೆ ಸಾಹಿತ್ಯದ ಬೆಳವಣಿಗೆಯಾಗಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮುನ್ನಡೆಯಲಿ ಎಂದು ಕರೆ ನೀಡಿದರು.
ರಾಜಧಾನಿ ಬೆಂಗಳೂರಿನ ಹೊಟೇಲ್, ಅಂಗಡಿ ಮುಂಗಟ್ಟು ಸೇರಿದಂತೆ ಕಟ್ಟಡದ ಕೆಲಸಗಳಲ್ಲಿ ಕನ್ನಡೇತರರೇ ಹೆಚ್ಚಿದ್ದಾರೆ. ಪಟ್ಟಣ ಪ್ರದೇಶಗಳಲ್ಲಿ ಕನ್ನಡ ಅಪಾಯದ ಅಂಚಿನಲ್ಲಿರುವಂತೆ ಭಾಸವಾಗುತ್ತಿದೆ. ಕನ್ನಡ ಭಾಷೆ, ಗಡಿ ರಕ್ಷಣೆಯ ಅಗತ್ಯವಿದೆ. ಕನ್ನಡ ಉಳಿಯಬೇಕು ಬೆಳೆಯಬೇಕು. ಆ ಕಾರ್ಯದಲ್ಲಿ ಕನ್ನಡಿಗರೆಲ್ಲರೂ ಕೈಜೋಡಿಸಲಿ ಎಂದು ಹಾರೈಸಿದರು.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ, ಸಂಘಟನೆಯ ಉದ್ದೇಶ ಒಳ್ಳೆಯದಿದ್ದರೆ ಮಾತ್ರ ಸಂಘಟನೆ ಬೆಳೆಯುತ್ತದೆ. ಗಡಿ ವ್ಯಾಪ್ತಿಯಲ್ಲಿ ಕನ್ನಡಿಗರ ಬದುಕು ಶೋಚನೀಯವಾಗಿದೆ. ಸರ್ಕಾರಗಳೂ ಸಹ ಗಡಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿವೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಕೆ.ಎನ್. ದೀಪಕ್, ಕಳೆದ ಎರಡೂವರೆ ದಶಕದಿಂದ ಕ.ರ.ವೇ. ನಿರಂತರ ಜಾಗೃತಿ ಮೂಡಿಸುವುದರೊಂದಿಗೆ ನೆಲ, ಜಲ, ಗಡಿ, ಭಾಷೆಯ ರಕ್ಷಣೆ ಮಾಡುತ್ತಾ ಬಂದಿದೆ. ಕನ್ನಡದ ಹೋರಾಟದಲ್ಲಿ ಕಾರ್ಯಕರ್ತರು ಹಲವಷ್ಟು ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಆದರೂ ಕನ್ನಡದ ಕೆಲಸವನ್ನು ನಿಲ್ಲಿಸುವುದಿಲ್ಲ ಎಂದರು.ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷರನ್ನಾಗಿ ಕೆ.ಆರ್. ರೋಹಿತ್, ಕುಶಾಲನಗರ ತಾಲೂಕು ಅಧ್ಯಕ್ಷರಾಗಿ ಬಿ.ಜೆ. ಅಣ್ಣಯ್ಯ ಅವರನ್ನು ಆಯ್ಕೆ ಮಾಡಲಾಯಿತು. ಕೊಡಗು ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ ಕೆ.ಆರ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಪಿ. ಸುದರ್ಶನ್, ಉಪಾಧ್ಯಕ್ಷರಾಗಿ ಚಂದ್ರು, ಸಂಚಾಲಕರಾಗಿ ಬಿ.ವಿ.ರವಿ, ಉಪ ಸಂಚಾಲಕರಾಗಿ ತಾಕೇರಿ ಶೇಖರ್, ಯುವ ಘಟಕದ ಅಧ್ಯಕ್ಷರಾಗಿ ನಿತಿನ್ ಮಿಟ್ಟು, ಕಾರ್ಮಿಕ ಘಟಕದ ಸಂಚಾಲಕರಾಗಿ ಹೆಚ್. ಮಂಜುನಾಥ್, ಸಹ ಸಂಚಾಲಕರಾಗಿ ಮಧುಸೂದನ್, ಕೋಶಾಧಿಕಾರಿಯಾಗಿ ಜಗನ್ನಾಥ್, ತಾಲೂಕು ಕಾರ್ಮಿಕ ಘಟಕದ ಸಂಚಾಲಕರಾಗಿ ಬಿ.ಜಿ.ರವಿ, ಆಟೋ ಘಟಕದ ಸಂಚಾಲಕರಾಗಿ ಕಲ್ಕಂದೂರು ರಮೇಶ್ ಸೇರಿದಂತೆ ಗ್ರಾಮ ಸಮಿತಿಗಳಿಗೆ ಸಂಚಾಲಕರನ್ನು ನೇಮಿಸಲಾಯಿತು.
ಶರಣ ಸಾಹಿತ್ಯ ಪರಿಷತ್ ನ ಎಸ್.ಮಹೇಶ್, ದೊಡ್ಡಮಳ್ತೆ ಗ್ರಾ.ಪಂ. ಸದಸ್ಯ ರುದ್ರಪ್ಪ, ಕೆಟಿಡಿಒ ತಾಲೂಕು ಅಧ್ಯಕ್ಷ ಬಿ.ವಿ. ರವಿ ಇದ್ದರು.