ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವ ಹಿನ್ನೆಲೆ ಮಂಗಳವಾರ ಸಂಜೆ ನಡೆದ 91ನೇ ವರ್ಷದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾವ್ಯಗಳು ಜನರಿಗೆ ಮುಟ್ಟದಿದ್ದರೆ ಏನು ಪ್ರಯೋಜನ. ಇದನ್ನರಿತ ಗಮಕಿಗಳು ಕಾವ್ಯ ಪುರಾಣಗಳನ್ನು ಜನರಿಗೆ ಹತ್ತಿರವಾಗಿಸಿದರು. ಆಕರ್ಷಣೀಯವಾದ ಗಮಕ ಕಲೆಗೆ ಧರ್ಮಸ್ಥಳದಲ್ಲಿ ಹೆಚ್ಚಿನ ಪ್ರೋತ್ಸಾಹ ಸಿಗಬೇಕು ಎಂದರು.ಗಮಕ ಕಲೆ ಕರ್ನಾಟಕದ ವಿಶಿಷ್ಟವಾದ ಆಕರ್ಷಣೀಯವಾದ ಕಲೆಯಾಗಿದೆ. ಕವಿಗಳು ರಚಿಸಿದ ಸಾಹಿತ್ಯವನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ತಿಳಿಸುವ ಕಲೆಯೇ ಗಮಕ ಕಲೆಯಾಗಿದ್ದು, ಕುಮಾರವ್ಯಾಸ ಗಮಕಿಗಳ ಕಾಮಧೇನು ಎಂದು ಬಣ್ಣಿಸಿದರು.ಇದೇ ರೀತಿ ಲಕ್ಷ್ಮೀಶ, ರಾಘವಾಂಕ, ಹರಿಹರ, ಜೈನಕಾಶಿ ಮೂಡುಬಿದಿರೆಯ ಕವಿ ರತ್ನಾಕರವರ್ಣಿ ಪ್ರಸಿದ್ಧ ಗಮಕಿಗಳಾಗಿದ್ದಾರೆ. ಗಮಕಿಗಳು ರಾಗಬದ್ಧವಾಗಿ ಜನಸಾಮಾನ್ಯರಿಗೆ ಸುಲಭ ರೀತಿಯಲ್ಲಿ ತಿಳಿಯುವಂತೆ ವಾಚನ-ವ್ಯಾಖ್ಯಾನ ಮಾಡುತ್ತಾರೆ. ೨೦೦೦ನೇ ಇಸವಿಯಲ್ಲಿ ಪುತ್ತೂರು ತಾಲೂಕಿನ ಶಾಂತಿಗೋಡು ಎಂಬಲ್ಲಿ ದೊರಕಿದ ತುಳು ಮಹಾಭಾರತೊ ಕೃತಿ ಕುಮಾರವ್ಯಾಸನ ಕಾಲನಿರ್ಣಯದ ಬಗ್ಗೆ ಅಧಿಕೃತ ಪುರಾವೆ ನೀಡಿದೆ ಎಂದು ಅವರು ತಿಳಿಸಿದರು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಇಸ್ರೋದ ವಿಜ್ಞಾನಿ, ನಿರ್ದೇಶಕ ರಾಮಕೃಷ್ಣ ಬಿ.ಎನ್., ಬ್ರಿಟಿಷರು ಬರುವ ಮೊದಲು ನಮ್ಮ ದೇಶ ಎಲ್ಲ ಕ್ಷೇತ್ರಗಳಲ್ಲಿ ಸಂಪದ್ಭರಿತವಾಗಿತ್ತು. ಆದರೆ ಈಗ ಮತ್ತೆ ನಮ್ಮ ದೇಶ ಯಾರಿಗೂ ಕಡಿಮೆಯಿಲ್ಲ ಎಂದು ತೋರಿಸಿಕೊಟ್ಟಿದ್ದೇವೆ. ಪ್ರಪಂಚವೇ ನಮ್ಮತ್ತ ನೋಡುವಂತೆ ಸಾಧನೆ ಮಾಡಿದ್ದೇವೆ. ವೈಜ್ಞಾನಿಕ ಕ್ಷೇತ್ರದಲ್ಲಿ ಚಂದ್ರಯಾನ-4 ಸಹಿತ ಅನೇಕ ಸಾಧನೆಗಳನ್ನು ಮಾಡಲು ಭಾರತ ಸಿದ್ಧವಾಗಿದೆ ಎಂದರು.
ಸಾಹಿತ್ಯ- ಸಂಸ್ಕೃತಿಯ ನೆಲೆ ವಿಷಯದ ಕುರಿತು ನಿವೃತ್ತ ಪ್ರಾಧ್ಯಾಪಕ ಡಾ.ಶ್ರೀಪಾದ ಶೆಟ್ಟಿ, ರಂಗಭೂಮಿ ಮತ್ತು ಕೃತಕ ಬುದ್ಧಿಮತ್ತೆಯ ಬಗ್ಗೆ ರಂಗನಟ ಪ್ರಕಾಶ್ ಬೆಳವಾಡಿ, ಭಾಷೆ ಮತ್ತು ಸಾಹಿತ್ಯ ಪರಸ್ಪರ ಅವಲಂಬನೆ ಕುರಿತು ಉಪನ್ಯಾಸಕ ಡಾ. ಅಜಕ್ಕಳ ಗಿರೀಶ ಭಟ್ಟ ಉಪನ್ಯಾಸ ನೀಡಿದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸಾಹಿತ್ಯಗಳ ಪರಂಪರೆ ಮತ್ತು ಅವುಗಳಲ್ಲಿರುವ ಸತ್ವ, ಸಂದೇಶಗಳನ್ನು ತಿಳಿದುಕೊಂಡು ಧರ್ಮಮಾರ್ಗದಲ್ಲಿ ಸುಖ-ಶಾಂತಿ, ನೆಮ್ಮದಿಯಿಂದ ಜೀವನ ಮಾಡಬೇಕು ಎಂಬುದು ಜಗತ್ತಿನ ಎಲ್ಲಾ ಸಾಹಿತ್ಯಗಳ ಮತ್ತು ಸಾಹಿತ್ಯ ಪ್ರಕಾರಗಳ ಆಶಯವಾಗಿದೆ. ಧರ್ಮ ಮತ್ತು ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳು ಎಂದರು.
ಆದಿಕವಿ ಪಂಪನಿಂದ ಹಿಡಿದು ಕುವೆಂಪು, ಬೇಂದ್ರೆ, ಹಂಪನಾ ಅವರ ಸಾಹಿತ್ಯ ಕೃತಿಗಳಲ್ಲಿರುವ ಮೌಲ್ಯಗಳನ್ನು, ಧಾರ್ಮಿಕ ಚಿಂತನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಧರ್ಮಸ್ಥಳ ಕ್ಷೇತ್ರದಿಂದ ನಿರಂತರ ಪ್ರಯತ್ನ ಮಾಡಲಾಗುತ್ತದೆ. ನಾವು ನಮ್ಮ ಮಕ್ಕಳಿಗೆ ಆಧ್ಯಾತ್ಮಿಕ ಶಿಕ್ಷಣ ಮತ್ತು ಸಾಹಿತ್ಯದ ಶಿಕ್ಷಣ ನೀಡಲು ಆದ್ಯತೆ ಮತ್ತು ಬದ್ಧತೆ ತೋರಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.
ಡಿ. ಸುರೇಂದ್ರ ಕುಮಾರ್ ಮತ್ತು ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.