ಯಲ್ಲಾಪುರ: ಸಂವಿಧಾನದ ಮೌಲ್ಯಗಳಡಿ ಜಾತ್ಯತೀತತೆ, ಸಾಮಾಜಿಕ ನ್ಯಾಯದ ಮಾರ್ಗದಲ್ಲೇ ನಾವು ಸಾಗಬೇಕಾಗಿದೆ ಎಂದು ತಹಸೀಲ್ದಾರ್ ಅಶೋಕ ಭಟ್ಟ ಹೇಳಿದರು.
ಇಲ್ಲಿಯ ಕಾಳಮ್ಮನಗರದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ತಾಪಂ, ಪಪಂ, ವಿವಿಧ ಇಲಾಖೆಗಳು, ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ೭೮ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ನಾವು ಕೃಷಿ, ಶಿಕ್ಷಣ, ಆರೋಗ್ಯ, ಸೈನ್ಯ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ ಅಗಾಧ ಸಾಧನೆ ಮಾಡುತ್ತಿದ್ದೇವೆ. ಆದರೂ ಬಡತನ, ಅನಕ್ಷರತೆ, ಲಿಂಗ ಅಸಮಾನತೆ, ಪರಿಸರ ವಾಯುಮಾಲಿನ್ಯ, ಮುಂತಾದವುಗಳ ಸವಾಲುಗಳನ್ನು ಎದುರಿಸಬೇಕಾಗಿದೆ. ರಾಜ್ಯ-ಕೇಂದ್ರ ಸರ್ಕಾರಗಳು ದೀನ-ದಲಿತರ ಕಲ್ಯಾಣ, ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ಇವುಗಳಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿ, ಜಾರಿಗೆ ತರಲಾಗಿದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಸಾವಿರಾರು ಪುಣ್ಯಾತ್ಮರ ಬಲಿದಾನವನ್ನು ಸ್ಮರಿಸಿ, ನಾವು ೭೮ನೇ ಸ್ವಾತಂತ್ರ್ಯೋತ್ಸವನ್ನು ಸಂಭ್ರಮಿಸುತ್ತಿದ್ದೇವೆ. ಅಹಿಂಸಾತ್ಮಕ ಹೋರಾಟದ ಫಲದಿಂದ ಸ್ವಾತಂತ್ರ್ಯ ದೊರಕಿದೆ. ಆದರೆ ಇನ್ನೂ ಈ ದೇಶದಲ್ಲಿ ಸವಾಲುಗಳಿವೆ. ದೇಶದ ಅಭಿವೃದ್ಧಿಗೆ ಸರ್ಕಾರದ ಜತೆ ನಾವೆಲ್ಲ ಕೈಜೋಡಿಸಬೇಕು ಎಂದರು.
ಪೋಲೀಸ್ ಇಲಾಖೆ, ಗೃಹರಕ್ಷಕ ದಳ, ಅಗ್ನಿಶಾಮಕ ದಳ, ಪಟ್ಟಣ ವ್ಯಾಪ್ತಿಯ ಎಲ್ಲ ಶಾಲಾ-ಕಾಲೇಜಿನ ಸ್ಕೌಟ್ಸ್ ಮತ್ತು ಗೈಡ್ಸ್, ಎನ್ಸಿಸಿ, ಎನ್ಎಸ್ಎಸ್ ಮತ್ತು ಶಿಕ್ಷಕರು, ನೌಕರ ವರ್ಗ, ವಿದ್ಯಾರ್ಥಿಗಳು ರಾಷ್ಟ್ರಧ್ವಜಕ್ಕೆ ನಮನ ಸಲ್ಲಿಸಿ, ಕಾರ್ಯಕ್ರಮಕ್ಕೆ ಗೌರವ ಸಲ್ಲಿಸಿದರು.ಪಂಚಾಯತ್ ರಾಜ್ ವಿಕೇಂದ್ರೀಕರಣ ಮತ್ತು ಗ್ರಾಮಾಭಿವೃದ್ಧಿ ಸಮಿತಿಯ ರಾಜ್ಯ ಉಪಾಧ್ಯಕ್ಷ ಪ್ರಮೋದ ಹೆಗಡೆ, ಗ್ರೇಡ್-೨ ತಹಸೀಲ್ದಾರ್ ಸಿ.ಜಿ. ನಾಯ್ಕ, ಆರಕ್ಷಕ ನಿರೀಕ್ಷಕ ರಮೇಶ ಹಾನಾಪುರ, ತಾಪಂ ಕಾರ್ಯನಿರ್ವಾಹಕ ರಾಜೇಶ ಧನವಾಡಕರ, ಲೋಕೋಪಯೋಗಿ ಎಇಇ ಸಂಜಯ, ಭಾರತ ಸೇವಾದಳದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರೀಗುಡ್ಡೆ, ಪಪಂ ಸಿಇಒ ಸುನೀಲ ಗಾವಡೆ, ಪಪಂ ಸದಸ್ಯೆ ಸುನಂದಾ ದಾಸ್ ಇದ್ದರು. ಆರಕ್ಷಕ ಉಪನಿರೀಕ್ಷಕ ಸಿದ್ದಪ್ಪ ಗುಡಿ ಗೌರವ ರಕ್ಷೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ ಸ್ವಾಗತಿಸಿದರು. ಶಿಕ್ಷಕರಾದ ಚಂದ್ರಹಾಸ ನಾಯ್ಕ ಮತ್ತು ದಿಲೀಪ ದೊಡ್ಮನಿ ಕಾರ್ಯಕ್ರಮ ನಿರ್ವಹಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ತಾರೀಕೊಪ್ಪ ವಂದಿಸಿದರು.