ಕನ್ನಡಪ್ರಭ ವಾರ್ತೆ, ಬೀದರ್
ರಾಜ್ಯದಲ್ಲಿ ಸುಮಾರು 2.9 ಕೋಟಿ ಜಾನುವಾರುಗಳಿವೆ ಮತ್ತು ಮೀನುಗಾರಿಕಾ ವಲಯವು ಸುಮಾರು 1.6 ಮಿಲಿಯನ್ ಜನರಿಗೆ ಉದ್ಯೋಗವನ್ನು ಒದಗಿಸಿಕೊಟ್ಟಿದೆ. ನಮ್ಮ ರಾಜ್ಯದ ಆರ್ಥಿಕತೆಗೆ ಈ ವಲಯಗಳು ಬೆನ್ನೆಲುಬಾಗಿವೆ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಹೇಳಿದರುಅವರು ಮಂಗಳವಾರ ಕಮಠಾಣಾ ರಸ್ತೆಯ ನಂದಿನಗರ ಆವರಣದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯಗಳ ಕುಲಾಧಿತಿಗಳು ಕೂಡ ಆಗಿರುವ ರಾಜ್ಯಪಾಲರಾದ ಥಾವರ್ಚೆಂದ್ ಗೆಹ್ಲೋಟ್ ಅವರ ಅನುಪಸ್ಥಿತಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ಹಾಗೂ ಪದವಿ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಿ ಮಾತನಾಡಿದರು.ಈ ವಲಯಗಳ ಅಭಿವೃದ್ಧಿಗೆ ನುರಿತ ವೃತ್ತಿಪರರ ಅಗತ್ಯವಿದೆ. ಈ ವಿಶ್ವವಿದ್ಯಾಲಯವು ಅಂತಹ ಅಗತ್ಯವನ್ನು ಪೂರೈಸುವಲ್ಲಿ ಮಹತ್ವದ ಕೊಡುಗೆ ನೀಡುತ್ತಿದೆ, ಯುವ ಪದವೀಧರರು ತಾಂತ್ರಿಕ ಪ್ರಾವೀಣ್ಯತೆ ಹೊಂದಿ ಪಶು ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವಂತೆ ಹಾಗೂ ನಮ್ಮ ರಾಷ್ಟ್ರಕ್ಕೆ ಅಗತ್ಯವಾದ ಬದಲಾವಣೆಯನ್ನು ತರಲು ಈ ಜ್ಞಾನವನ್ನು ಬಳಸಿಕೊಳ್ಳಬೇಕೆಂದರು. ಆರ್ಥಿಕ ನಷ್ಟ, ನಿಯಂತ್ರಣಕ್ಕೆ ಸಂಶೋಧನೆಗಳು:ಜಿನೋಟಿಕ್ ರೋಗಗಳಿಂದಾಗಿ ಕರ್ನಾಟಕವು ಪ್ರತಿ ವರ್ಷ ಗಮನಾರ್ಹ ಆರ್ಥಿಕ ನಷ್ಟವನ್ನು ಅನುಭವಿಸುತ್ತದೆ ಹೀಗಾಗಿ ಜಿನೋಟಿಕ್ ರೋಗಗಳ ನಿಯಂತ್ರಣ, ಪಶುಗಳ ಆರೋಗ್ಯ ರಕ್ಷಣೆ ಮತ್ತು ಮೀನುಗಾರಿಕೆ ವಲಯದ ಸುಸ್ಥಿರ ಅಭಿವೃದ್ಧಿ ನಮ್ಮ ಆಧ್ಯತೆಗಳಾಗಿದ್ದು, ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ ಯಶಸ್ಸಿಗೆ ನಿಮ್ಮ ಪಾತ್ರ ಪ್ರಮುಖವಾಗಿದೆ ಎಂದು ಪದವೀಧರರಿಗೆ ತಿಳಿಸಿದರು.
ಕರ್ನಾಟಕ ಸರ್ಕಾರವು ‘ಪಶು ಭಾಗ್ಯ’, ‘ಕ್ಷೀರ ಭಾಗ್ಯ’, ‘ಮೀನು ಸಿರಿ’ಮುಂತಾದ ಯೋಜನೆಗಳನ್ನು ಜಾರಿಗೆ ತಂದಿರುತ್ತದೆ. ಈ ಯೋಜನೆಗಳ ಯಶಸ್ಸಿಗೆ ನಿಮ್ಮಂತಹ ಯುವ ವೃತ್ತಿಪರರ ಸಹಕಾರ ಅತ್ಯಗತ್ಯ ಕರ್ನಾಟಕದ ಪಶುಸಂಗೋಪನಾ ವಲಯವು ವಿಶಾಲವಾಗಿದೆ, ಯೋಜನೆಗಳ ಯಶಸ್ಸಿಗೆ ನಿಮ್ಮಂತಹ ಯುವ ವೃತ್ತಿಪರರ ಸಹಕಾರ ಅತ್ಯಗತ್ಯವಿದೆ ಎಂದರು.ಪುಣೆ ಐಸಿಎಂಆರ್- ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ನಿರ್ದೇಶಕರಾದ ಡಾ. ನವೀನಕುಮಾರ ಮಾತನಾಡಿ, ಪಶು ವೈದ್ಯರು ಸಾರ್ವಜನಿಕ ಹಾಗೂ ಪಶುವೈದ್ಯಕೀಯ ಎರಡೂ ಆರೋಗ್ಯ ಕಾಪಾಡುವಲ್ಲಿ ಮಹತ್ವ ಪಾತ್ರ ವಹಿಸುತ್ತಾರೆ. ದೇಶದ ಹಾಲು ಹಾಗೂ ಮಾಂಸ ಉತ್ಪಾದನೆಯಲ್ಲಿ ಸಾಮಥ್ಯ ತೋರಿಸಿದ್ದಾರೆ. ಅದಲ್ಲದೇ ಸಂಶೋಧನೆ ಮಾಡುವ ಮೂಲಕ ಹಲವಾರು ರೋಗಗಳನ್ನು ನಿರ್ಮೂಲನೆ ಮಾಡಿದ್ದಾರೆ ಇನ್ನಷ್ಟು ಸೋಂಕು ನಿವಾರಣಾ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿದ್ದು ಸೋಂಕು ವೈರಾಣು ವಿರುದ್ಧದ ಲಸಿಕಾ ತಯಾರಿಕಾ ಹೊಸ ಕೇಂದ್ರಗಳನ್ನು ಬೆಂಗಳೂರು ಮತ್ತು ಜಮ್ಮು-ಕಾಶ್ಮೀರ ಸೇರಿದಂತೆ ರಾಷ್ಟ್ರದ ನಾಲ್ಕು ಕಡೆಗಳಲ್ಲಿ ಆರಂಭಿಸುವುದು ಅಗತ್ಯವಾಗಿದೆ ಎಂದರು.ಚಿನ್ನದ ಪದಕ ಪಡೆದವರ ವಿವರ:2022-23ನೇ ಸಾಲಿನ ಬಿವಿಎಸ್ಸಿ ಆಂಡ್ ಎ.ಎಚ್. ಸ್ನಾತಕ ಪದವಿಯಲ್ಲಿ ಬೆಂಗಳೂರಿನ ಪಶು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ, ಜೆ.ಪಿ. ನಗರದ ನಿವಾಸಿ ಆದಿತ್ಯ ಚಿದಾನಂದ ಈಶ್ವರಲ ಅವರು 9 ಚಿನ್ನದ ಪದಕಗಳಿಗೆ ಭಾಜನರಾದರು. ಆದಿತ್ಯ ಅವರ ಸಹಪಾಠಿ ಚಿತ್ರದುರ್ಗದ ರವೀನಾ ಅವರು 15 ಚಿನ್ನದ ಪದಕಗಳ ಸಾಧನೆ ಮಾಡಿದ್ದರಾದರೂ ಘಟಿಕೋತ್ಸವದಲ್ಲಿ ಗೈರು ಹಾಜರಾಗಿದ್ದರು.ಚಿತ್ರದರ್ಗದ ಚಳ್ಳಕೆರೆಯ ಚಿಕ್ಕೇನಹಳ್ಳಿ ಗ್ರಾಮದರಾದ ದಕ್ಷೀತ ಪಿಎಲ್ ಅವರು ಎಂವಿಎಸ್ಸಿ ಸ್ನಾತಕೋತ್ತರ ಪದವಿಯಲ್ಲಿ 6 ಚಿನ್ನದ ಪದಕಗಳನ್ನು ಗಳಿಸಿದರು. ಇವರು ಬೆಂಗಳೂರಿನ ಪಶು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯಾಗಿದ್ದು, 2022-23ನೇ ಸಾಲಿನಲ್ಲಿ ಈ ಸಾಧನೆ ಮಾಡಿದರು.
ಚಿನ್ನದ ಪದಕ ಪ್ರದಾನ :ಸ್ನಾತಕ ಪದವಿಯಲ್ಲಿ 16 ವಿದ್ಯಾರ್ಥಿಗಳಿಗೆ 53 ಚಿನ್ನದ ಪದಕಗಳು, ಸ್ನಾತಕೋತ್ತರ ಪದವಿಯಲ್ಲಿ 21 ವಿದ್ಯಾರ್ಥಿಗಳಿಗೆ 34 ಚಿನ್ನದ ಪದಕಗಳು, ಡಾಕ್ಟರೇಟ್ ಪದವಿ ಪೂರೈಸಿದ 7 ವಿದ್ಯಾರ್ಥಿಗಳಿಗೆ ತಲಾ ಒಂದು ಚಿನ್ನದ ಪದಕ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ 2 ಚಿನ್ನದ ಪದಕ ಸೇರಿದಂತೆ ಒಟ್ಟು 96 ಚಿನ್ನದ ಪದಕಗಳನ್ನು ನೀಡಲಾಯಿತು. ಒಟ್ಟು 634 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿದರು. 419 ಸ್ನಾತಕ ಪದವೀಧರರು, 187 ಸ್ನಾತಕೋತ್ತರ ಹಾಗೂ 28 ಡಾಕ್ಟರೇಟ್ ಪದವೀಧರರು ಸೇರಿದ್ದಾರೆ.ಕಾರ್ಯಕ್ರಮದಲ್ಲಿ ಕರ್ನಾಟಕ ಪಶುವೈದ್ಯಕೀಯ ಹಾಗೂ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿಳಾದ ಪ್ರೊ .ಕೆ.ಸಿ ವೀರಣ್ಣ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಮುಖ್ಯ ಅಥಿತಿಗಳಾಗಿ ವಿಶ್ವವಿದ್ಯಾಲಯ ಆಡಳಿತ ಮಂಡಳಿಯ ಸದಸ್ಯರಾದ ಬಸವರಾಜ ಭತಮುರ್ಗೆ ಹಾಗೂ ಇತರೆ ಅಧಿಕಾರಿಗಳು, ಬೋಧಕರು, ಸಿಬ್ಬಂದಿಗಳು ಸೇರಿದಂತೆ ಡಾಕ್ಟರೇಟ್, ಸ್ನಾತಕೋತ್ತರ ಮತ್ತು ಪದವಿಗಳನ್ನು ಸ್ವೀಕರಿಸುವ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇನ್ಮುಂದೆ ವಿವಿ ನಡುವಳಿಯಲ್ಲಿ ‘ಕನ್ನಡ’ವಿಶ್ವವಿದ್ಯಾಲಯದ ಘಟಿಕೋತ್ಸವದ ನಡವಳಿಕೆಗಳಲ್ಲಿ ಆಂಗ್ಲ ಭಾಷೆಯೇ ಮೇರು ಸ್ಥಾನದಲ್ಲಿರುವದನ್ನು ಗಮನಿಸಿದ ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ಅವರು ತಮ್ಮ ಭಾಷಣೆದಲ್ಲಿ ಇದನ್ನು ಪ್ರಸ್ತಾಪಿಸಿ ನಡುವಳಿಗಳಲ್ಲಿ ಕನ್ನಡ ಭಾಷೆ ಬಳಸಬೇಕು ವಿವಿಯ ಕುಲಪತಿಗಳಿಗೆ ಸಲಹೆ ನೀಡಿದ್ದು ಅದನ್ನು ಅವರು ಒಪ್ಪಿದ್ದಾರೆ ಎಂದುತಿಳಿಸಿದರು.