ಕನ್ನಡಪ್ರಭವಾರ್ತೆ ನಾಗಮಂಗಲ
ಪಟ್ಟಣದ ನಾಲ್ಕು ವಿಭಾಗಗಳ ನ್ಯಾಯಾಲಯಗಳಲ್ಲಿ ಶನಿವಾರ ನಡೆದ ಲೋಕ ಅದಾಲತ್ನಲ್ಲಿ ಇತ್ಯರ್ಥಕ್ಕೆ ಬಾಕಿ ಇದ್ದ ವಿವಿಧ ವ್ಯಾಜ್ಯಗಳಿಗೆ ಸಂಬಂಧಿಸಿದ 1.75 ಕೋಟಿಗೂ ಹೆಚ್ಚು ಆರ್ಥಿಕ ಮೌಲ್ಯವುಳ್ಳ ಒಟ್ಟು 293 ಪ್ರಕರಣಗಳನ್ನು ನ್ಯಾಯಾಧೀಶರು ರಾಜೀಸಂಧಾನದ ಮೂಲಕ ಇತ್ಯರ್ಥಗೊಳಿಸಿದರು.ಹಿರಿಯ ಶ್ರೇಣಿಯ ನ್ಯಾಯಾಲಯದಲ್ಲಿ 2025ರ ಮಾ.1ಕ್ಕೆ ಇತ್ಯರ್ಥಕ್ಕೆ ಬಾಕಿ ಇರುವ 2261 ಪ್ರಕರಣಗಳ ಪೈಕಿ 235 ಪ್ರಕರಣಗಳನ್ನು ಲೋಕ ಅದಾಲತ್ನಲ್ಲಿ ರಾಜೀಸಂಧಾನಕ್ಕೆ ಕೈಗೆತ್ತಿಕೊಳ್ಳಲಾಗಿತ್ತು. ಈ ಪೈಕಿ 75.38 ಲಕ್ಷ ರು. ಆರ್ಥಿಕ ಮೌಲ್ಯವುಳ್ಳ 121 ಪ್ರಕರಣಗಳು ಎರಡೂ ಕಡೆಯ ಕಕ್ಷಿದಾರರು ಮತ್ತು ವಕೀಲರ ಸಮಕ್ಷಮದಲ್ಲಿ ಇತ್ಯರ್ಥಗೊಂಡವು.
ಅಪರ ಹಿರಿಯ ಶ್ರೇಣಿಯ ನ್ಯಾಯಾಲಯದಲ್ಲಿ 2025ರ ಮಾ.1ಕ್ಕೆ ಇತ್ಯರ್ಥಕ್ಕೆ ಬಾಕಿ ಇರುವ 1445 ಪ್ರಕರಣಗಳ ಪೈಕಿ 173 ಪ್ರಕರಣಗಳನ್ನು ರಾಜೀಸಂಧಾನಕ್ಕೆ ಕೈಗೆತ್ತಿಕೊಳ್ಳಲಾಗಿತ್ತು. ಈ ಪೈಕಿ 42,30,596ರು. ಆರ್ಥಿಕ ಮೌಲ್ಯವುಳ್ಳ 45 ಪ್ರಕರಣಗಳು ಇತ್ಯರ್ಥಗೊಂಡವು.ಪ್ರಧಾನ ಸಿವಿಲ್ ನ್ಯಾಯಾಲಯದಲ್ಲ್ಲಿ 2025ರ ಮಾ.1ಕ್ಕೆ ಇತ್ಯರ್ಥಕ್ಕೆ ಬಾಕಿ ಇರುವ 2431 ಪ್ರಕರಣಗಳ ಪೈಕಿ 258 ಪ್ರಕರಣಗಳನ್ನು ರಾಜೀಸಂಧಾನಕ್ಕೆ ಕೈಗೆತ್ತಿಕೊಳ್ಳಲಾಗಿತ್ತು. ಈ ಪೈಕಿ 18.27ಲಕ್ಷರು. ಆರ್ಥಿಕ ಮೌಲ್ಯವುಳ್ಳ100 ಪ್ರಕರಣಗಳು ಇತ್ಯರ್ಥಗೊಂಡವು.
ಅಪರ ಸಿವಿಲ್ ನ್ಯಾಯಾಲಯದಲ್ಲ್ಲಿ 2025ರ ಮಾ.1ಕ್ಕೆ ಇತ್ಯರ್ಥಕ್ಕೆ ಬಾಕಿ ಇರುವ 2271 ಪ್ರಕರಣಗಳ ಪೈಕಿ 181 ಪ್ರಕರಣಗಳನ್ನು ರಾಜೀಸಂಧಾನಕ್ಕೆ ಕೈಗೆತ್ತಿಕೊಳ್ಳಲಾಗಿತ್ತು. ಈ ಪೈಕಿ 39.30ಲಕ್ಷ ರು. ಆರ್ಥಿಕ ಮೌಲ್ಯವುಳ್ಳ 27ಪ್ರಕರಣಗಳು ಇತ್ಯರ್ಥಗೊಂಡವು.ಇನ್ನುಳಿದಂತೆ ನಾಲ್ಕೂ ನ್ಯಾಯಾಲಯಗಳಲ್ಲಿ ಹಲವು ಬ್ಯಾಂಕ್ ಸೇರಿದಂತೆ ವಿವಿಧ ಇಲಾಖೆಗೆ ಸಂಬಂಧಿಸಿದ 11806 ಪ್ರಕರಣಗಳನ್ನು ರಾಜೀಸಂಧಾನಕ್ಕೆ ಕೈಗೆತ್ತಿಕೊಂಡು 37,69,494 ರು. ಆರ್ಥಿಕ ಮೌಲ್ಯವುಳ್ಳ 11167 ಪ್ರಕರಣಗಳು ಲೋಕ ಅದಾಲತ್ನಲ್ಲಿ ಇತ್ಯರ್ಥಗೊಂಡವು.
ವಿಶೇಷ ಪ್ರಕರಣ:ಕಳೆದ 2006ರಲ್ಲಿ ಮಂಡ್ಯದ ನ್ಯಾಯಾಲಯದಲ್ಲಿ ದಾಖಲಾಗಿದ್ದ ಪ್ರಕರಣವೊಂದು ಇಲ್ಲಿನ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಲಯಕ್ಕೆ ವರ್ಗಾವಣೆಯಾಗಿತ್ತು. 23 ವರ್ಷಗಳ ಹಿಂದಿನ ಈ ಪ್ರಕರಣವನ್ನು ಎರಡೂ ಕಡೆಯ ಕಕ್ಷಿದಾರರು ಮತ್ತು ವಕೀಲರ ಸಮಕ್ಷಮದಲ್ಲಿ ನ್ಯಾಯಾಧೀಶ ಎಂ.ನರಸಿಂಹಮೂರ್ತಿ ಅವರು ಇತ್ಯರ್ಥ ಪಡಿಸಿದರೆ, 12 ವರ್ಷಗಳಿಂದ ಇತ್ಯರ್ಥಕ್ಕೆ ಬಾಕಿ ಜಮೀನು ವಿವಾದ ಪ್ರಕರಣವೊಂದನ್ನು ನ್ಯಾಯಾಧೀಶ ಕೆ.ಪಿ.ಸಿದ್ದಪ್ಪಾಜಿ ಇತ್ಯರ್ಥಪಡಿಸಿದರು.
ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶ ಯೋಗೇಶ್ ಕಕ್ಷಿದಾರರ ವ್ಯಾಜ್ಯಗಳನ್ನು ಇತ್ಯರ್ಥ ಪಡಿಸಿದರೆ, ಅಪರ ಹಿರಿಯ ಶ್ರೇಣಿಯ ನ್ಯಾಯಾಲಯದಲ್ಲಿ ನ್ಯಾಯಾಧೀಶ ಎಂ.ನರಸಿಂಹಮೂರ್ತಿ, ಪ್ರಧಾನ ಸಿವಿಲ್ ನ್ಯಾಯಾಲಯದಲ್ಲ್ಲಿ ನ್ಯಾಯಾಧೀಶ ಎಚ್.ಎಸ್.ಶಿವರಾಜು ಹಾಗೂ ಅಪರ ಸಿವಿಲ್ ನ್ಯಾಯಾಲಯದಲ್ಲ್ಲಿ ನ್ಯಾಯಾಧೀಶ ಕೆ.ಪಿ.ಸಿದ್ದಪ್ಪಾಜಿ ಅವರು ರಾಜೀ ಸಂಧಾನ ನಡೆಸಿ ಹಲವು ದಿನಗಳಿಂದ ಬಾಕಿ ಉಳಿದಿದ್ದ ಪ್ರಕರಣಗಳಿಗೆ ಮುಕ್ತಿ ನೀಡಿದರು.ಈ ವೇಳೆ ಹಿರಿಯ ಶ್ರೇಣಿಯ ನ್ಯಾಯಾಧೀಶ ಯೋಗೇಶ್ ಮಾತನಾಡಿ, ಕಾನೂನಿನ ಅರಿವಿನ ಕೊರತೆಯಿಂದಾಗಿ ಗ್ರಾಮೀಣ ಪ್ರದೇಶದ ಜನರು ಕ್ಷುಲ್ಲಕ ಕಾರಣವನ್ನೇ ನೆಪ ಮಾಡಿಕೊಂಡು ನ್ಯಾಯಾಲಯದ ಮೊರೆಹೋಗುತ್ತಾರೆ. ಇದರಿಂದ ದ್ವೇಷ, ವೈಶಮ್ಯದ ಜೊತೆಗೆ ಹಣ ಹಾಗೂ ಸಮಯ ವ್ಯರ್ಥವಾಗುವುದೇ ಹೊರತು ಯಾವುದೇ ಸಾಧನೆ ಮಾಡಿದಂತಾಗುವುದಿಲ್ಲ. ಹಣ ಮತ್ತು ಸಮಯ ವ್ಯರ್ಥವಿಲ್ಲದೆ ನ್ಯಾಯಾಲಯದಲ್ಲಿರುವ ತಮ್ಮ ವ್ಯಾಜ್ಯಗಳನ್ನು ರಾಜೀಸಂಧಾನದ ಮೂಲಕ ಇತ್ಯರ್ಥಪಡಿಸಿಕೊಂಡಿರುವ ಕಕ್ಷಿದಾರರು ಸಹೋದರತ್ವ ಭಾವನೆಯಿಂದ ಸೌಹಾರ್ದಯುತ ಬದುಕು ನಡೆಸಬೇಕು. ಸಣ್ಣ ಪುಟ್ಟ ಜಗಳವನ್ನೇ ದೊಡ್ಡದು ಮಾಡಿಕೊಂಡು ವ್ಯಕ್ತಿ ಪ್ರತಿಷ್ಟೆಗಾಗಿ ನ್ಯಾಯಾಲಯದ ಮೆಟ್ಟಿಲೇರಬಾರದು ಎಂದರು.
ನ್ಯಾಯಾಲಯದಲ್ಲಿ ನಡೆಯುವ ಲೋಕ ಅದಾಲತ್ನಲ್ಲಿ ಒಬ್ಬರಿಗೆ ಸೋಲು ಮತ್ತೊಬ್ಬರಿಗೆ ಗೆಲುವು ಎನ್ನುವ ಪ್ರಶ್ನೆಯೇ ಬರುವುದಿಲ್ಲ. ಎರಡೂ ಕಡೆಯ ಕಕ್ಷಿದಾರರಿಗೂ ಸಮಾನ ನ್ಯಾಯ ದೊರೆಯುತ್ತದೆ. ಸರ್ವೋಚ್ಛ ನ್ಯಾಯಾಲಯದ ಈ ಮಹಾತ್ವಾಕಾಂಕ್ಷೆ ಕಾರ್ಯಕ್ರಮದಿಂದ ಅನೇಕ ಜನರಿಗೆ ಅನುಕೂಲವಾಗುತ್ತಿದೆ ಎಂದು ತಿಳಿಸಿದರು.ಈ ವೇಳೆ ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಹದೇವು, ಸಹಾಯಕ ಸರ್ಕಾರಿ ಅಭಿಯೋಜಕರಾದ ಅರುಣಾಬಾಯಿ, ಟಿ.ಆರ್.ಶ್ರೀದೇವಿ, ವಕೀಲರಾದ ಸುಬ್ರಹ್ಮಣ್ಯ, ಹರ್ಷ, ಕೆ.ಬಿ.ಶಿವಮೂರ್ತಿ, ಎಂ.ಎಸ್.ರವಿಕುಮಾರ್, ಹೇಮ, ಎಂ.ಪಿ.ಪ್ರಭುಸ್ವಾಮಿ, ಕಾನೂನು ಸೇವಾ ಸಮಿತಿಯ ಸೋನುಮೂರ್ತಿ, ರಮೇಶ್ ಸೇರಿದಂತೆ ಹಲವು ವಕೀಲರು ಇದ್ದರು.