ಮಾಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ₹6 ಲಕ್ಷ ಲಾಭ

KannadaprabhaNewsNetwork | Published : Sep 25, 2024 1:06 AM

ಸಾರಾಂಶ

ತಾಲೂಕಿನ ಅಗಲಕೋಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 2023 - 24ನೇ ಸಾಲಿನಲ್ಲಿ ₹6,78,000 ಲಾಭ ಗಳಿಸಿದೆ ಎಂದು ಸಂಘದ ಸಿಇಒ ಎನ್. ನರಸಿಂಹಯ್ಯ ಹೇಳಿದರು. ಮಾಗಡಿಯಲ್ಲಿ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.

ಸಂಘದ ಸಿಇಒ ಎನ್.ನರಸಿಂಹಯ್ಯ ಮಾಹಿತಿ । ವಾರ್ಷಿಕ ಸಭೆ

ಕನ್ನಡಪ್ರಭ ವಾರ್ತೆ ಮಾಗಡಿ

ತಾಲೂಕಿನ ಅಗಲಕೋಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 2023 - 24ನೇ ಸಾಲಿನಲ್ಲಿ ₹6,78,000 ಲಾಭ ಗಳಿಸಿದೆ ಎಂದು ಸಂಘದ ಸಿಇಒ ಎನ್. ನರಸಿಂಹಯ್ಯ ಹೇಳಿದರು.

ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ 920 ಜನ ರೈತ ಸದಸ್ಯರಿಗೆ 7 ಕೋಟಿ 27 ಲಕ್ಷ ರು. ಕೆಸಿಸಿ ಸಾಲ ನೀಡಲಾಗಿದ್ದು, 18 ಜನ ರೈತ ಸದಸ್ಯರಿಗೆ ಬಾಕಿ 8 ಲಕ್ಷದ 78 ಸಾವಿರ ರು. ಸರ್ಕಾರದಿಂದ ಸಾಲ ಮನ್ನಾ ಬರಬೇಕಾಗಿದ್ದು 1532 ಜನ ಸದಸ್ಯರುಗಳಿಂದ ಷೇರು ಹಣ 84 ಲಕ್ಷದ 34 ಸಾವಿರ ರು. ಪಡೆಯಲಾಗಿದೆ ಎಂದರು. ಬಿಡಿಸಿಸಿ ಬ್ಯಾಂಕ್ ನಲ್ಲಿ 47 ಲಕ್ಷದ 32 ಸಾವಿರ ರು. ಷೇರು ಹೊಂದಿದ್ದು, 20 ಜನ ಸದಸ್ಯರುಗಳಿಗೆ 10 ಲಕ್ಷದ 50 ಸಾವಿರ ರು. ಎನ್‌ಎಸ್‌ಎಫ್ ಸಾಲವನ್ನಾಗಿ ನೀಡಲಾಗಿದೆ. ಎರಡು ಸದಸ್ಯರಿಗೆ ವೇತನ ಆಧಾರಿತ ಸಾಲ 3 ಲಕ್ಷ ರು. ನೀಡಲಾಗಿದ್ದು, ಆರು ಸದಸ್ಯರಿಗೆ 3 ಲಕ್ಷ 45 ಸಾವಿರ ಚಿನ್ನಾಭರಣ ಸಾಲ ನೀಡಲಾಗಿದ್ದು ಮಧ್ಯಮಾವತಿ ಡೈರಿ ಸಾಲ ಮೂರು ಜನ ರೈತರಿಗೆ 27 ಲಕ್ಷ ರು. ನೀಡಲಾಗಿದ್ದು ಸರ್ಕಾರದಿಂದ 12 ಲಕ್ಷದ 53 ಸಾವಿರ ರು. ಬಡ್ಡಿ ಬರಬೇಕಾಗಿದ್ದು ಒಟ್ಟು ಸ್ವಂತ ಬಂಡವಾಳ 35 ಲಕ್ಷ ರು.ಗಳಲ್ಲಿ ವ್ಯವಹಾರ ನಡೆಸಿಕೊಂಡು ಹೋಗಲಾಗುತ್ತಿದ್ದು ಸಂಘವು ಲಾಭದಾಯಕವಾಗಿ ನಡೆಯುತ್ತಿದೆ ಎಂದು ತಿಳಿಸಿದರು.

ಬಮೂಲ್ ನಿರ್ದೇಶಕ ನರಸಿಂಹಮೂರ್ತಿ ಮಾತನಾಡಿ, ಸಹಕಾರಿ ಬ್ಯಾಂಕ್ ಮೂಲಕ ಗ್ರಾಮೀಣ ಭಾಗದಲ್ಲಿ ರೈತರು ಆರ್ಥಿಕವಾಗಿ ಮುಂದೆ ಬರಲು ಸಹಕಾರಿ ಸಂಘವು ಸಾಕಷ್ಟು ಅನುಕೂಲ ಮಾಡಿಕೊಡುತ್ತಿದ್ದು, ವಿಎಸ್‌ಎಸ್‌ಎನ್ ಹಾಗೂ ಹಾಲು ಉತ್ಪಾದಕರ ಸಂಘದ ಮೂಲಕ ರೈತರು ಸ್ವಾವಲಂಬಿಗಳಾಗಿ ಬದುಕನ್ನು ಕಟ್ಟಿಕೊಳ್ಳಲು ಸಾಕಷ್ಟು ನೆರವಾಗಿದ್ದು, ಬಡ್ಡಿ ರಹಿತ ಸಾಲ ಪಡೆಯುವ ಮೂಲಕ ರೈತರು ಕೃಷಿ ಚಟುವಟಿಕೆಯಲ್ಲಿ ಹೆಚ್ಚಿನದಾಗಿ ತೊಡಗಿಕೊಳ್ಳಲು ಅನುಕೂಲವಾಗುತ್ತಿದ್ದು ರೈತರು ಸಹಕಾರಿ ಸಂಘಗಳ ಲಾಭವನ್ನು ಪಡೆಯಬೇಕು ಎಂದು ಮನವಿ ಮಾಡಿದರು.

ಸಂಘದ ಅಧ್ಯಕ್ಷ ಪಿ.ಎನ್.ಸತೀಶ್, ಸಂಘದ ಉಪಾಧ್ಯಕ್ಷ ಚಿಕ್ಕಮದಯ್ಯ, ರಾಮಯ್ಯ, ಎಂ.ಸಿದ್ದಯ್ಯ, ಬೋರೇಗೌಡ, ಗಂಗಯ್ಯ, ಚಿಕ್ಕ ಸ್ವಾಮಿಯ್ಯ, ಗಂಗಬೋರಯ್ಯ, ಲಿಂಗಮ್ಮ, ಭಾಗ್ಯಮ್ಮ ಇದ್ದರು.

Share this article