ಜಾತಿ ವೈಷಮ್ಯ ಹುಟ್ಟು ಹಾಕಲು ಸಂಘ ಪರಿವಾರ ತನ್ನ ಹಿಡೆನ್ ಅಜೆಂಡಾ ಮುಂದೊಡ್ಡಿದೆ. ಆದರೆ, ಮಂಡ್ಯದ ನೆಲದಲ್ಲಿ ಇದಕ್ಕೆಲ್ಲಾ ಅವಕಾಶವಿಲ್ಲ. ಇಡೀ ಘಟನೆಗೆ ಮೂಲ ಕಾರಣಕರ್ತರು ಹೊರಗಿನಿಂದ ಬಂದು ಮಂಡ್ಯದಲ್ಲಿ ಗಲಭೆ ಎಬ್ಬಿಸುತ್ತಿರುವ ದುಷ್ಟರು ಹಾಗೂ ಅಧಿಕಾರಕ್ಕೆ ಕಾಯುತ್ತಿರುವ ಒಳಗಿನ ವ್ಯಕ್ತಿಗಳು. ಕಳೆದ ಮೂರು ದಶಕಗಳಿಂದ ಮಂಡ್ಯದಲ್ಲಿ ಎಲ್ಲಿಯೂ ನೆಲೆ ನಿಲ್ಲದ ಸಂಘ ಪರಿವಾರ ಕೆರಗೋಡನ್ನು ತನ್ನ ಹಿಂದುತ್ವದ ಪ್ರಯೋಗ ಶಾಲೆಯನ್ನಾಗಿ ಆಯ್ಕೆ ಮಾಡಿಕೊಂಡಿದೆ ಎಂದು ಅವರು ಆರೋಪಿಸಿದರು.
- ಕಿಡಿಗೇಡಿಗಳ ಬಂಧನಕ್ಕೆ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಆಗ್ರಹ
----
ಕನ್ನಡಪ್ರಭ ವಾರ್ತೆ ಮೈಸೂರು
ಮಂಡ್ಯದಲ್ಲಿ ಕನಕದಾಸರ ಭಾವಚಿತ್ರಕ್ಕೆ ಅಪಮಾನ ಮಾಡಿ, ಕುರುಬರ ಸಂಘದ ವಿದ್ಯಾರ್ಥಿನಿಲಯದ ಮೇಲೆ ಕಲ್ಲು ತೂರಾಟ ಖಂಡಿಸಿ ಹಾಗೂ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಶೋಷಿತ ಸಮುದಾಯಗಳ ಮಹಾ ಒಕ್ಕೂಟದವರು ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ಪ್ರತಿಭಟಿಸಿದರು.
ಮಂಡ್ಯದ ಕೆರಗೋಡಿನಲ್ಲಿ ಉದ್ಭವಿಸಿರುವ ಕೇಸರಿ ಬಾವುಟ ವಿವಾದ ಅನಿರೀಕ್ಷಿತವಲ್ಲದಿದ್ದರೂ ಅದರ ಟಾರ್ಗೆಟ್ ಶೋಷಿತ ಸಮುದಾಯಗಳನ್ನು ಹಳಿಯುವ ಉದ್ದೇಶ ಹೊಂದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಘಟನೆ ನೆಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರ ಭಾವಚಿತ್ರವಿದ್ದ ಫ್ಲೆಕ್ ಹರಿದು ಹಾಕಿದ್ದಾರೆ. ಮಂಡ್ಯದ ಕುರುಬರ ಸಂಘದ ಕಟ್ಟಡ ಹಾಗೂ ಹಾಸ್ಟೆಲ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಅವರು ಆರೋಪಿಸಿದರು.
ಜಾತಿ ವೈಷಮ್ಯ ಹುಟ್ಟು ಹಾಕಲು ಸಂಘ ಪರಿವಾರ ತನ್ನ ಹಿಡೆನ್ ಅಜೆಂಡಾ ಮುಂದೊಡ್ಡಿದೆ. ಆದರೆ, ಮಂಡ್ಯದ ನೆಲದಲ್ಲಿ ಇದಕ್ಕೆಲ್ಲಾ ಅವಕಾಶವಿಲ್ಲ. ಇಡೀ ಘಟನೆಗೆ ಮೂಲ ಕಾರಣಕರ್ತರು ಹೊರಗಿನಿಂದ ಬಂದು ಮಂಡ್ಯದಲ್ಲಿ ಗಲಭೆ ಎಬ್ಬಿಸುತ್ತಿರುವ ದುಷ್ಟರು ಹಾಗೂ ಅಧಿಕಾರಕ್ಕೆ ಕಾಯುತ್ತಿರುವ ಒಳಗಿನ ವ್ಯಕ್ತಿಗಳು. ಕಳೆದ ಮೂರು ದಶಕಗಳಿಂದ ಮಂಡ್ಯದಲ್ಲಿ ಎಲ್ಲಿಯೂ ನೆಲೆ ನಿಲ್ಲದ ಸಂಘ ಪರಿವಾರ ಕೆರಗೋಡನ್ನು ತನ್ನ ಹಿಂದುತ್ವದ ಪ್ರಯೋಗ ಶಾಲೆಯನ್ನಾಗಿ ಆಯ್ಕೆ ಮಾಡಿಕೊಂಡಿದೆ ಎಂದು ಅವರು ಆರೋಪಿಸಿದರು.
ಸಾಮರಸ್ಯದ ಸಕ್ಕರೆ ನಾಡಲ್ಲಿ ವಿಷ ಬೀಜ ಬಿತ್ತಲಾಗುತ್ತಿದೆ. ಈ ಮೂಲಕ ರಾಜಕೀಯವಾಗಿ ನೆಲೆಯೂರಲು ಅವಣಿಸುತ್ತಿದೆ. ಆದರೆ, ಇಲ್ಲಿನ ಜನ ಅದಕ್ಕೆಲ್ಲಾ ಆಸ್ಪದ ನೀಡುವುದಿಲ್ಲ. ಸರ್ಕಾರ ಕೂಡಲೇ ಘಟನೆಗೆ ಕಾರಣರಾದವರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು. ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ಒತ್ತಾಯಿಸಿದರು.
ವಿಧಾನಪರಿಷತ್ತು ಸದಸ್ಯ ಡಾ.ಡಿ. ತಿಮ್ಮಯ್ಯ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ರಾಜ್ಯಾಧ್ಯಕ್ಷ ಸುಬ್ರಹ್ಮಣ್ಯ, ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಮು, ಮಾಜಿ ಮೇಯರ್ ಅನಂತ, ಜಿಪಂ ಮಾಜಿ ಸದಸ್ಯ ಅಮಿತ್ ದೇವರಹಟ್ಟಿ, ತಾಪಂ ಮಾಜಿ ಅಧ್ಯಕ್ಷೆ ಮಂಜುಳಾ ಮಂಜುನಾಥ್, ಮುಖಂಡರಾದ ಸೋಮಶೇಖರ್, ವೆಂಕಟೇಶ್, ದ್ಯಾವಪ್ಪನಾಯಕ, ಎಂ. ಶಿವಣ್ಣ, ಯೋಗೇಶ್, ಗುಣಶೇಖರ್, ವಿಶ್ವನಾಥ್, ಉದಯ್ ಹಿನಕಲ್ ಮೊದಲಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.