ಮತದಾನ ಹಕ್ಕು ಕಲ್ಪಿಸಿದ ಮಹಾತ್ಮ ಡಾ.ಅಂಬೇಡ್ಕರ್

KannadaprabhaNewsNetwork | Published : Apr 15, 2024 1:22 AM

ಸಾರಾಂಶ

ಜಾತಿ, ಜನಾಂಗ, ಸಮುದಾಯ ಹಾಗೂ ಅಂತಸ್ತು ಭೇದವಿಲ್ಲದೆ ದೇಶದ ಎಲ್ಲಾ ನಾಗರಿಕರಿಗೂ ಸಂವಿಧಾನದ ಮೂಲಕ ಮತದಾನದ ಹಕ್ಕು ಕಲ್ಪಿಸಿದ ಮಹಾತ್ಮ ಡಾ.ಬಿ.ಆರ್.ಅಂಬೇಡ್ಕರ್ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ ಜಾತಿ, ಜನಾಂಗ, ಸಮುದಾಯ ಹಾಗೂ ಅಂತಸ್ತು ಭೇದವಿಲ್ಲದೆ ದೇಶದ ಎಲ್ಲಾ ನಾಗರಿಕರಿಗೂ ಸಂವಿಧಾನದ ಮೂಲಕ ಮತದಾನದ ಹಕ್ಕು ಕಲ್ಪಿಸಿದ ಮಹಾತ್ಮ ಡಾ.ಬಿ.ಆರ್.ಅಂಬೇಡ್ಕರ್ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಡಾ.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ಜ್ಞಾನದ ಸಂಕೇತ, ಅಂಬೇಡ್ಕರ್ ಎನ್ನುವ ಜ್ಞಾನ ದೀವಿಗೆಯಿಂದ ಬಹಳಷ್ಟು ಜನರ ಜೀವನ ಬೆಳಕು ಕಂಡಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಮುಂದೆ ಸಾಗಬೇಕು. ಪ್ರಜಾಪ್ರಭುತ್ವದ ಮೇಲೆ ಅಪಾರ ನಂಬಿಕೆ ಹೊಂದಿದ್ದ ಅಂಬೇಡ್ಕರ್ ದೇಶದ ಎಲ್ಲ ಅರ್ಹ ವಯಸ್ಸಿನ ನಾಗರಿಕರಿಗೆ ಮತದಾನದ ಹಕ್ಕು ಕಲ್ಪಿಸಿದ್ದಾರೆ. ಇದರ ಮಹತ್ವ ಅರಿತು ಏ.26ರಂದು ನಡೆಯುವ ಲೋಕಸಭೆ ಚುನಾವಣೆ ಮತದಾನದಲ್ಲಿ ಪ್ರತಿಯೊಬ್ಬರು ಕಡ್ಡಾಯ ಮತ ಚಲಾಯಿಸಬೇಕು. ಹಾಗೆಯೇ ತಮ್ಮ ಸುತ್ತ ಮುತ್ತಲಿನ ಜನರನ್ನು ಮತದಾನ ಮಾಡಲು ಪ್ರೇರೇಪಿಸಬೇಕು.

ಮತದಾನ ಮೂಲಕ ಪ್ರಜಾಪ್ರಭುತ್ವದ ಬೇರು ಗಟ್ಟಿಗೊಳಿಸಬೇಕು. ಜವಾಬ್ದಾರಿಯುತ ಸರ್ಕಾರನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು.ಚಿತ್ರದುರ್ಗ ನಗರದ ಬಾಲಕರ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕ ಡಾ.ಬಿ.ಎಂ.ಗುರುನಾಥ್ ಮಾತನಾಡಿ, ಬಡವರ ನಿಜವಾದ ಭಾಗ್ಯವಿಧಾತ ಡಾ.ಬಿ.ಆರ್.ಅಂಬೇಡ್ಕರ್. ಇವರು ನಮ್ಮೆಲ್ಲರ ಬದುಕಿನ ಶಾಸನ ಬರೆದು, ಬಡವರ ನಗುವಿನ ಹಿಂದಿರುವ ಶಕ್ತಿಯಾಗಿದ್ದಾರೆ. ಇಂದಿಗೂ ಅನೇಕ ಸಮುದಾಯಗಳು ಜಾತಿ ವ್ಯವಸ್ಥೆ ಬೇಗುದಿಯಲ್ಲಿ ಬೆಂದು ನಿಟ್ಟುಸಿರು ಬಿಡುತ್ತಿವೆ. ಅಂಬೇಡ್ಕರ್ ನಂತರ ಅವರಷ್ಠೆ ಕಾಳಜಿಯಿಂದ ದೀನ ದಲಿತರ ಬಗ್ಗೆ ಯೋಚಿಸುವ ನಾಯಕ ದೇಶದಲ್ಲಿ ಹುಟ್ಟಿ ಬಂದಿಲ್ಲ ಎಂದರು.ಬುದ್ದ, ಬಸವ, ಶಾಹು ಮಹಾರಾಜ್, ಅಂಬೇಡ್ಕರ್, ಪೆರಿಯಾರ್, ಪುಲೆ, ಕುದ್ಮಲ್ ರಂಗರಾವ್ ಅವರಂತಹ ಮಹನೀಯರ ಚಿಂತನೆ ಫಲವಾಗಿ ಜಾತಿ ವ್ಯವಸ್ಥೆ ಅಸಮಾನತೆ ಪ್ರಮಾಣ ಕಡಿಮೆಯಾಗಿ. ಸಮಾಜದಲ್ಲಿ ಸಮಾನತೆ ಮೂಡುತ್ತಿದೆ. ಡಾ.ಅಂಬೇಡ್ಕರ್ ಜಾತಿ ಎಂಬ ರಾಕ್ಷಸನನ್ನು ಹೊಡೆದುಹಾಕುವ ಪ್ರಯತ್ನ ಮಾಡಿದರು. ಪುಣೆ ಪ್ಯಾಕ್ಟ್ ಮೂಲಕ ದೇಶದ ದಲಿತರನ್ನು ಶತಮಾನಗಳ ಕೂಪದಿಂದ ವಿಮೋಚನೆಗೊಳಿಸಿದರು. ಕಲಾರಾಮ್ ಮಂದಿರ ಪ್ರವೇಶ, ಮಹಾಡ್ ಕೆರೆ ಸತ್ಯಾಗ್ರಹ, ದುಂಡು ಮೇಜಿನ ಸಮ್ಮೇಳದಲ್ಲಿ ಭಾಗವಹಿಸುವ ಮೂಲಕ ಅಂಬೇಡ್ಕರ್ ದಲಿತರ ಹಕ್ಕುಗಳಿಗೆ ಸತತವಾಗಿ ಹೋರಾಟ ನಡೆಸಿದರು. ಪುತ್ರ ರಾಜರತ್ನ ಮರಣದ ಶೋಕದ ಸಂದರ್ಭದಲ್ಲಿ ಸಹ ಅಂಬೇಡ್ಕರ್ ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗವಹಿಸಿ ದೀನ ದಲಿತರ ಪರವಾಗಿ ವಾದ ಮಂಡಿಸಿದರು ಎಂದರು. ಲೋಕಸಭೆ ಚುನಾವಣೆ ಮಾದರಿ ನೀತಿ ಸಂಹಿತೆಯಲ್ಲಿ ಅಂಬೇಡ್ಕರ್ ಜಯಂತಿಯನ್ನು ಈ ಬಾರಿ ಅತ್ಯಂತ ಸರಳವಾಗಿ ಆಚರಿಸಲಾಗುತ್ತಿದೆ. ಮುಂದಿನ ವರ್ಷ ಅದ್ಧೂರಿ ಹಾಗೂ ವಿಜೃಂಭಣೆಯಿಂದ ಅಂಬೇಡ್ಕರ್ ಜಯಂತಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಚುನಾವಣೆ ಕಾರ್ಯನಿಮಿತ್ತ ವೇದಿಕೆಯಿಂದ ಬೇಗನೆ ನಿರ್ಗಮಿಸುವ ವೇಳೆ ನೆರೆದವರಿಗೆ ಅಂಬೇಡ್ಕರ್ ಜಯಂತಿ ಶುಭಾಶಯ ಕೋರಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪೋಲೀಸ್‌ ವರಿಷ್ಠಾಧಿಕಾರಿ ಧಮೇರ್ಂದ್ರ ಕುಮಾರ್ ಮೀನಾ, ಜಿಪಂ ಉಪ ಕಾರ್ಯದರ್ಶಿ ತಿಮ್ಮಪ್ಪ, ಆಹಾರ ಇಲಾಖೆ ಜಂಟಿ ನಿರ್ದೇಶಕ ಮಧುಸೂಧನ್, ನಗರಸಭೆ ಆಯುಕ್ತೆ ಎಂ. ರೇಣುಕಾ, ಜಿಪಂ ಯೋಜನಾ ನಿರ್ದೇಶಕ ಸತೀಶ್ ರೆಡ್ಡಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ ಸೇರಿ ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಸ್ವಾಗತಿಸಿದರು. ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ವಂದನಾರ್ಪಣೆ ಮಾಡಿದರು. ವಿದ್ಯಾರ್ಥಿನಿ ಬಿ.ಜಿ.ಸವಿನಯ ಡಾ.ಅಂಬೇಡ್ಕರ್ ಕುರಿತಾದ ಪ್ರಾರ್ಥನೆ ಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ಸಂವಿಧಾನ ಪ್ರಸ್ತಾವನೆಯನ್ನು ಬೋಧಿಸಲಾಯಿತು.

Share this article