ಚನ್ನಪಟ್ಟಣ: ಹದಿಹರೆಯದ ಹೆಣ್ಣು ಮಕ್ಕಳು ಹಾಗೂ ಪೋಷಕರಿಗೆ ಮಾಸಿಕ ಋತುಚಕ್ರದ ಅರಿವು ಮೂಡಿಸಬೇಕು ಎಂದು ಮುಖ್ಯ ಶಿಕ್ಷಕಿ ಪ್ರತಿಮಾ ತಿಳಿಸಿದರು.
ತಾಲೂಕಿನ ತಗಚಗೆರೆ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ, ಸಿಎಂಸಿಎ ಸಂಸ್ಥೆ, ಎಚ್ಡಿಎಫ್ಸಿ ಬ್ಯಾಂಕ್ ಪರಿವರ್ತನ್ ಹಾಗೂ ಭಾರತ್ ಕೇರ್ಸ್ ಸಹಯೋಗದಲ್ಲಿ ೪ರಿಂದ ೮ನೇ ತರಗತಿಯ ಹೆಣ್ಣು ಮಕ್ಕಳು ಹಾಗೂ ಪೋಷಕರಿಗೆ ಮಾಸಿಕ ಋತುಚಕ್ರದ ಅರಿವು, ಸ್ವಚ್ಛತೆ, ಅಪೌಷ್ಟಿಕತೆ ಕುರಿತು ಆಯೋಜಿಸಿದ್ದ ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಇಂತಹ ಕಾರ್ಯಾಗಾರಗಳನ್ನು ಆಯೋಜಿಸುತ್ತಿರುವ ಸಿಎಂಸಿಎ ಸಂಸ್ಥೆಯ ಕಾರ್ಯ ಶ್ಲಾಘನೀಯ. ಗೌಪ್ಯತೆ, ಮುಜುಗರ, ನಾಚಿಕೆ, ಸಂಕೋಚದ ಸ್ವಭಾವದಿಂದ ಸ್ವಯಂಕಷ್ಟಕ್ಕೆ ಸಿಲುಕಿ ನಲುಗುವ ಹೆಣ್ಣು ಮಕ್ಕಳು ಈ ಕಾರ್ಯಕ್ರಮದ ಪ್ರಯೋಜನ ಪಡೆಯಬೇಕು ಎಂದರು.
ಇದು ಹೆಣ್ಣಿನ ಬದುಕಿಗೆ ಅಗತ್ಯವಾದ ವಿಷಯವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಋತು ಸಂಬಂಧಿತ ವಿಷಯದಲ್ಲಿ ಮುಚ್ಚು ಮರೆ ಅಥವಾ ಗೌಪ್ಯತೆ ಕಾಪಾಡಿಕೊಂಡು ಸಂಕಷ್ಟಕ್ಕೆ ಸಿಲುಕದೆ ಈ ಬಗ್ಗೆ ಅರಿವು ಹೊಂದಬೇಕು ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.ಸಿಎಂಸಿಎ ಸಂಪನ್ಮೂಲ ವ್ಯಕ್ತಿ ಸವಿತಾ ಮಾಸಿಕ ಋತುಚಕ್ರದ ಕುರಿತು ಪೂರ್ಣ ಮಾಹಿತಿ ನೀಡಿದರು. ಮೆನ್ಸ್ಟೋಪೀಡಿಯಾ ಸಂಸ್ಥೆ ತರಬೇತಿ ಮತ್ತು ಅಗತ್ಯ ಬೋಧನಾ ಸಲಕರಣೆಗಳನ್ನು ನೀಡಿದೆ. ಈ ರೀತಿಯ ಕಾರ್ಯಾಗಾರಗಳು ಜಿಲ್ಲೆಯ ೨೫ ಶಾಲೆಗಳು ಹಾಗೂ ಗ್ರಾಪಂ ಗ್ರಂಥಾಲಯಗಳಲ್ಲಿ ನಡೆಯಲಿವೆ ಎಂದರು.
ಈ ಸಂದರ್ಭದಲ್ಲಿ ಗ್ರಂಥಾಲಯ ಮೇಲ್ವಿಚಾರಕ ನಾಗೇಶ್, ಸಿಎಂಸಿಎ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ವಿಜಯ್ ರಾಂಪುರ, ಅಬ್ಬೂರು ಶ್ರೀನಿವಾಸ್, ಶಿಕ್ಷಕಿಯರು ಹಾಜರಿದ್ದರು.ಪೊಟೋ೨ಸಿಪಿಟಿ೩:
ಚನ್ನಪಟ್ಟಣ ತಾಲೂಕಿನ ತಗಚಗೆರೆ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೪ರಿಂದ ೮ನೇ ತರಗತಿಯ ಹೆಣ್ಣು ಮಕ್ಕಳು ಹಾಗೂ ಪೋಷಕರಿಗೆ ಮಾಸಿಕ ಋತು ಚಕ್ರದ ಅರಿವು, ಸ್ವಚ್ಛತೆ ಕುರಿತು ಅರಿವು ಕಾರ್ಯಾಗಾರ ನಡೆಯಿತು.