ರಾಷ್ಟ್ರದ ಹಿತಚಿಂತನೆಗೆ ಮಲೆನಾಡು ಸಮ್ಮೇಳನ ಉಪಯುಕ್ತ : ಕೋಟಾ ಶ್ರೀನಿವಾಸ ಪೂಜಾರಿ

KannadaprabhaNewsNetwork | Published : Dec 2, 2024 1:16 AM

ಸಾರಾಂಶ

ಚಿಕ್ಕಮಗಳೂರು, ದೇಶ, ವಿದೇಶಗಳ ಆಗುಹೋಗುಗಳ ಬಗ್ಗೆ ಅರಿತಿರುವ ಹಾಗೂ ರಾಷ್ಟ್ರದ ಸಮಗ್ರ ಹಿತಚಿಂತನೆ ಬಯಸುವ ಯುವ ಕಲಾವಿದರು, ಲೇಖಕರು, ಬರಹಗಾರರು ಹಾಗೂ ಕವಿಗಳಿಗೆ ಮಲೆನಾಡು ಗೋಷ್ಠಿ ಬಹಳಷ್ಟು ಶಕ್ತಿ ತುಂಬಲಿದೆ ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.

ಮಲೆನಾಡಿನ ಸಮ್ಮೇಳನ ಆಚರಣೆಯ ಪೂರ್ವಭಾವಿ ಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ದೇಶ, ವಿದೇಶಗಳ ಆಗುಹೋಗುಗಳ ಬಗ್ಗೆ ಅರಿತಿರುವ ಹಾಗೂ ರಾಷ್ಟ್ರದ ಸಮಗ್ರ ಹಿತಚಿಂತನೆ ಬಯಸುವ ಯುವ ಕಲಾವಿದರು, ಲೇಖಕರು, ಬರಹಗಾರರು ಹಾಗೂ ಕವಿಗಳಿಗೆ ಮಲೆನಾಡು ಗೋಷ್ಠಿ ಬಹಳಷ್ಟು ಶಕ್ತಿ ತುಂಬಲಿದೆ ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹಿಂದುಳಿದ ವರ್ಗಗಳ ಮೋರ್ಚಾದಿಂದ ನಡೆದ ಮಲೆನಾಡಿನ ಸಮ್ಮೇಳನ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಸಾಹಿತ್ಯಾತ್ಮಕ ಚಟುವಟಿಕೆಗಳ ಮುಖಾಂತರ ಕೆಲವರು ರಾಷ್ಟ್ರದ ಇತಿಹಾಸ ತಿರುಚಿ ಹಿಂದುತ್ವ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ದೇಶದ ಜನತೆಯಲ್ಲಿ ರಾಷ್ಟ್ರ ಪ್ರೇಮ ನಶಿಸಿ, ಉಳಿದೆಲ್ಲವನ್ನು ಬಿತ್ತುವ ಕಾರ್ಯದಲ್ಲಿ ತೊಡಗಿವೆ. ಹೀಗಾಗಿ ಸಮ್ಮೇಳನದಲ್ಲಿ ರಾಷ್ಟ್ರದ ಸಮಗ್ರ ಪರಿಚಯ, ಹಿಂದುತ್ವಕ್ಕಾಗಿ ಮಡಿದವರ ವಿಚಾರಧಾರೆಗಳನ್ನು ಲೇಖಕರು ಮಂಡಿಸಬಹುದು ಎಂದರು.

ಹೊಸ ವಿಚಾರದಡಿ ರೂಪಿಸಿರುವ ಗೋಷ್ಠಿಯನ್ನು ಕಾರ್ಯಕರ್ತರಲ್ಲದೇ, ವಿರೋಧಿಸುವ ಬಣವು ಚರ್ಚಿಸಬೇಕು. ಪಕ್ಷದಿಂದ ಹಮ್ಮಿಕೊಂಡಿರುವ ಗೋಷ್ಠಿಗೆ ಶಕ್ತಿ ಕೇಂದ್ರದ ಪ್ರಮುಖರು ಗಮನಹರಿಸಬೇಕು. ಗ್ರಾಮಗಳಲ್ಲಿ ರಾಷ್ಟ್ರದ ಹಿತಾಸಕ್ತಿಯಡಿ ಎಲೆ ಮರೆಕಾಯಂತಿರುವ ಲೇಖಕರನ್ನು ಗುರುತಿಸಿ ಕರೆತರಬೇಕು ಎಂದು ಸೂಚಿಸಿದರು.ಜನತೆ ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಸಾಹಿತ್ಯವನ್ನು ಕೆಲವರು ಕೈವಶಪಡಿಸಿ ರಾಷ್ಟ್ರದ ಸತ್ಯಾಂಶ ಮರೆಮಾಚುತ್ತಿದ್ದಾರೆ. ಅಲ್ಲದೇ ಬಿಜೆಪಿ ವಿರುದ್ಧ ತಂಡೋಪಾದಿಯಲ್ಲಿ ಷಡ್ಯಂತ್ರ ರೂಪಿಸುವವರಿಗೆ ಈ ಸಮ್ಮೇಳನ ಗೋಷ್ಠಿ ಬಿಸಿ ಮುಟ್ಟಿಸಲಿದೆ. ಹೀಗಾಗಿ ಆಸಕ್ತಿ ಹೊಂದಿರುವ ಲೇಖಕರು, ಸಂಘ ಸಂಸ್ಥೆ ಮುಖಂಡರು ಹಾಗೂ ಸರ್ಕಾರಿ ನೌಕರರು ಒಂದೆಡೆ ಸೇರಿಸುವ ಕಾರ್ಯವಾದರೆ ಗೋಷ್ಠಿ ಪ್ರಭಾವ ಬೀರಲಿದೆ ಎಂದರು.ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ನೇರವಾಗಿ ಪಕ್ಷದಲ್ಲಿ ಗುರುತಿಸಿ ಕೊಳ್ಳದೇ, ವೈಯಕ್ತಿಕವಾಗಿ ಸಣ್ಣಪುಟ್ಟ ಲೇಖನದ ಮುಖಾಂತರ ಬೆಂಬಲಿಸುವವರು ಕಾಣಸಿಗಲಿದ್ದು ರಾಷ್ಟ್ರಹಿತದ ಪರಿಕಲ್ಪನೆ ಹೊಂದಿರುವ ಬರಹಗಾರರನ್ನು ಮಹಾಶಕ್ತಿ ಕೇಂದ್ರ ಪದಾಧಿಕಾರಿಗಳು ಗೋಷ್ಠಿಗೆ ಆಹ್ವಾನಿಸುವ ಮುಖಾಂತರ ರಾಷ್ಟ್ರಹಿತಾಸಕ್ತಿಗೆ ಕೈ ಜೋಡಿಸಬೇಕು ಎಂದರು.

ಕಾಂಗ್ರೆಸ್ ಪಕ್ಷದ ಹಣೆಪಟ್ಟಿ ಕಟ್ಟಿಕೊಳ್ಳದ ಕೆಲವು ಎಡಪಂಥೀಯ ಸಾಹಿತಿಗಳು ನಿರಂತರವಾಗಿ ದೇಶದ ಸಂಸ್ಕೃತಿಗೆ ಧಕ್ಕೆ ತರುತ್ತಿದ್ದಾರೆ. ದೇಶವನ್ನಾಳಿದ ಬಿಜೆಪಿ ತುಳಿಯುವುದೇ ನಿತ್ಯದ ಕಾಯಕ ಮಾಡಿಕೊಂಡಿರುವ ಎಡಪಂಥೀಯ ಮುಖವಾಡ ಕಳಚಿ ಹೊರ ತೆಗೆಯಲು ಮಲೆನಾಡು ಸಮ್ಮೇಳನ ಗೋಷ್ಠಿಗಳು ಪ್ರೇರಣೆ ನೀಡಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್. ದೇವರಾಜ್‌ ಶೆಟ್ಟಿ ಮಾತನಾಡಿ, ಆರ್‌ಎಸ್‌ಎಸ್‌ ಸಂಘಟನೆ ಎಂದಿಗೂ ಜಾತಿ ಆಧಾರದಲ್ಲಿಲ್ಲ. ರಾಷ್ಟ್ರ ಚಿಂತನೆಗೆ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ. ಬಿಜೆಪಿ ರಾಜಕಾರಣದಲ್ಲಿ ನಾವೆಲ್ಲರೂ ಒಂದೇ ಎಂಬ ಮನೋಭಾವನೆಯಿದೆ. ಹೀಗಾಗಿ ಯುವಕರನ್ನು ಎಚ್ಚರಿಸುವ ನಿಟ್ಟಿನಲ್ಲಿ ಉಡುಪಿಯಲ್ಲಿ ಪ್ರಾಯೋಗಿಕವಾಗಿ ಸಮ್ಮೇಳನ ಆಯೋಜಿಸಿ ಇದೀಗ ಚಿಕ್ಕಮಗಳೂರಿನಲ್ಲಿ ಹಮ್ಮಿಕೊಳ್ಳಲು ನಿರ್ಧರಿಸ ಲಾಗಿದೆ, ಸದ್ಯದಲ್ಲೇ ದಿನಾಂಕವನ್ನು ನಿಗಧಿಗೊಳಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು ಭಾಗವಹಿಸಿದ್ದರು.

ಪೋಟೋ ಫೈಲ್‌ ನೇಮ್‌ 1 ಕೆಸಿಕೆಎಂ 3ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಮಲೆನಾಡಿನ ಸಮ್ಮೇಳನ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಸಂಸದ ಕೋಟಾ ಶ್ರೀನಿವಾಸ್‌ ಪೂಜಾರಿ ಮಾತನಾಡಿದರು. ವಿಧಾನಪರಿಷತ್ ಸದಸ್ಯ ಕೇಶವಪ್ರಸಾದ್, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್‌ ಶೆಟ್ಟಿ ಇದ್ದರು.

Share this article