ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಸರ್.ಎಂ. ವಿಶ್ವೇಶ್ವರಯ್ಯ ಪ್ರತಿಮೆ ಎದುರು ಧರಣಿ ನಡೆಸಿ ಕಾರ್ಯಕರ್ತರು ಕಾರ್ಮಿಕ ಅಧಿಕಾರಿಗೆ ಮನವಿ ಸಲ್ಲಿಸಿ ಸರ್ಕಾರದ ಗಮನಕ್ಕೆ ತಂದು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಗೃಹ ಕಾರ್ಮಿಕರು ಲೈವ್ ಇನ್ ಕೆಲಸಗಾರರು ಪೂರ್ಣ ಪ್ರಮಾಣದ ಕೆಲಸಗಾರರು ಹಾಗೂ ಅರೆಕಾಲಿಕ ಕೆಲಸಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಭದ್ರತಾ ನಿವ್ವಳ ಮತ್ತು ಕೆಲಸದ ಸ್ಥಳದ ಪ್ರಯೋಜನಗಳನ್ನು ಒದಗಿಸುವುದು ಸರ್ಕಾರಕ್ಕೆ ಇದುವರೆಗೂ ಸಾಧ್ಯವಾಗಿಲ್ಲ ಎಂದು ದೂರಿದರು.ಗೃಹ ಕಾರ್ಮಿಕರು ವಿವಿಧ ರೀತಿಗಳಲ್ಲಿ ತಾರತಮ್ಯ, ಶೋಷಣೆ, ಕಿರುಕುಳವನ್ನು ಎದುರಿಸುತ್ತಿದ್ದಾರೆ. ದೂರು ದಾಖಲಿಸಲು ಯಾವುದೇ ಮಾರ್ಗಗಳಿಲ್ಲ. ಉದ್ಯೋಗ ಭದ್ರತೆಯೂ ಇಲ್ಲ. ಮಾಲೀಕರು ಅವರ ಇಚ್ಛೆಯಂತೆ ಗೃಹ ಕಾರ್ಮಿಕರನ್ನು ಏಕಾಏಕಿ ವಜಾ ಮಾಡಬಹುದು. ಹೀಗಾಗಿ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಗೃಹ ಕಾರ್ಮಿಕರಿಗೆ ಸೂಕ್ತವಾದ ಕಾನೂನುಗಳೇ ಇಲ್ಲ ಎಂದು ಸಂಘಟನೆ ಜಿಲ್ಲಾಧ್ಯಕ್ಷೆ ಲಲಿತಮ್ಮ ದೂರಿದರು.
ಪ್ರತಿ ವರ್ಷ ಬಜೆಟ್ನಲ್ಲಿ ಗೃಹ ಕಾರ್ಮಿಕರಿಗೆ ಅನುದಾನ ಒದಗಿಸಬೇಕು. ಮುಖ್ಯವಾಗಿ ಪ್ಲೇಸ್ಮೆಂಟ್ ಏಜೆನ್ಸಿ ನಿಯಂತ್ರಣ ಕಾನೂನು ಜಾರಿಗೊಳಿಸಬೇಕಿದೆ. ಇದರಿಂದ ಮನೆ ಗೆಲಸಗಾರರಾಗಿ ಕೆಲಸ ಮಾಡಲು ಹುಡುಗಿಯರ ರಾಜ್ಯ, ಅಂತರಾಜ್ಯ, ಅಂತರಾಷ್ಟ್ರೀಯ ಕಳ್ಳಸಾಗಾಣೆಯನ್ನು ತಡೆಯಬಹುದು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಸಂಘಟನೆ ರಾಜ್ಯಾಧ್ಯಕ್ಷೆ ಜಯಮ್ಮ, ಪದಾಧಿಕಾರಿಗಳಾದ ನಾಗಮ್ಮ, ಆಶಾ, ಶೋಭಾ, ಮಮತಾ ಸೇರಿದಂತೆ ಹಲವರು ಭಾಗವಹಿಸಿದ್ದರು.