ಬಸಾಪುರ ಏತ ನೀರಾವರಿ ಯೋಜನಾ ಸ್ಥಳಕ್ಕೆ ಶಾಸಕ ಮಾನೆ ಭೇಟಿ

KannadaprabhaNewsNetwork |  
Published : Jul 05, 2024, 12:59 AM ISTUpdated : Jul 05, 2024, 01:00 AM IST
ಫೋಟೊ ಶೀರ್ಷಿಕೆ: 4ಎಚ್‌ಎನ್‌ಎಲ್2ಹಾನಗಲ್ಲ ತಾಲೂಕಿನ ಬಸಾಪುರ ಏತ ನೀರಾವರಿ ಯೋಜನೆಯ ಸ್ಥಳಕ್ಕೆ ಶಾಸಕ ಶ್ರೀನಿವಾಸ ಮಾನೆ ಭೇಟಿ ನೀಡಿ ಪರಿಶೀಲಿಸಿ, ಜು. 15 ರ ಒಳಗಾಗಿ ನೀರು ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. | Kannada Prabha

ಸಾರಾಂಶ

ಹಾನಗಲ್ಲ ತಾಲೂಕಿನ ಬಸಾಪುರ ಏತ ನೀರಾವರಿ ಯೋಜನೆ ಸ್ಥಳಕ್ಕೆ ಗುರುವಾರ ಶಾಸಕ ಶ್ರೀನಿವಾಸ ಮಾನೆ ಭೇಟಿ ನೀಡಿ, ನೀರು ಹರಿಸಲು ವಿಳಂಬ ಮಾಡುತ್ತಿರುವ ಯುಟಿಪಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಹಾನಗಲ್ಲ: ಬಸಾಪುರ ಏತ ನೀರಾವರಿ ಯೋಜನೆ ಸ್ಥಳಕ್ಕೆ ಗುರುವಾರ ಭೇಟಿ ನೀಡಿದ ಶಾಸಕ ಶ್ರೀನಿವಾಸ ಮಾನೆ, ನೀರು ಹರಿಸಲು ವಿಳಂಬ ಮಾಡುತ್ತಿರುವ ಯುಟಿಪಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು, ಜು. 15ರ ಒಳಗಾಗಿ ನೀರು ಹರಿಸಿ, ಕಷ್ಟದಲ್ಲಿರುವ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ತಾಕೀತು ಮಾಡಿದರು.

ಹಗಲುರಾತ್ರಿ ಕೆಲಸ ಮಾಡಿ, ಯೋಜನೆಯ ನಾಲ್ಕೂ ಪಂಪುಗಳಿಗೂ ಚಾಲನೆ ನೀಡಿ ನೀರು ಹರಿಸಬೇಕು. ಎಲ್ಲದಕ್ಕೂ ಬರೀಕಥೆ ಹೇಳುತ್ತಾ ಕಾಲಹರಣ ಮಾಡಬೇಡಿ. ಸ್ವಲ್ಪ ಕಳಕಳಿಯಿಂದಲೂ ಕಾರ್ಯ ನಿರ್ವಹಿಸಿ. ಮಳೆ, ಬೆಳೆ ಇಲ್ಲದೇ ರೈತರು ಮೊದಲೇ ಸಂಕಷ್ಟದಲ್ಲಿದ್ದಾರೆ. ನೀರು ಹರಿಸುವುದು ವಿಳಂಬವಾದರೆ ಬತ್ತದ ನಾಟಿ ಪ್ರಕ್ರಿಯೆಗೂ ಹಿನ್ನಡೆ ಉಂಟಾಗುವ ಸಾಧ್ಯತೆ ಎಂದು ಆತಂಕ ವ್ಯಕ್ತಪಡಿಸಿದರು.

ಜನರೇಟರ್, ಜೆಸಿಬಿ ಕೆಲಸಕ್ಕೆ ಹಣ ಇಲ್ಲ ಎಂದು ಕೈಚೆಲ್ಲದಿರಿ. ನೀರು ಹಾಯಿಸುವ ಮೊದಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಿ. ಹಣದ ಅವಶ್ಯಕತೆ ಇದ್ದರೆ ಗಮನಕ್ಕೆ ತನ್ನಿ. ಅನುದಾನಕ್ಕೆ ಕಾಯೋದು ಬೇಡ. ಸದ್ಯಕ್ಕೆ ತಾತ್ಕಾಲಿಕವಾಗಿ ಅಭಿಯಂತರು, ಸಿಬ್ಬಂದಿ ನೇಮಕ ಮಾಡಿಕೊಳ್ಳಿ. ಅವರಿಗೂ ಬೇಕಿದ್ದರೆ ನಾನೇ ವೇತನ ಕೊಡುತ್ತೇನೆ. ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆ ಆಗಬಾರದು ಎಂದು ಸೂಚಿಸಿದರು.

ಸಿಬ್ಬಂದಿ ಕೊರತೆ ಇದೆ ಎನ್ನುವುದನ್ನು ಯುಟಿಪಿ ಕಾರ್ಯನಿರ್ವಾಹಕ ಅಭಿಯಂತರ ಬಸವರಾಜ ಗಮನಕ್ಕೆ ತಂದಾಗ ಗರಂ ಆದ ಶಾಸಕ ಶ್ರೀನಿವಾಸ ಮಾನೆ, ಮೊನ್ನೆ ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ನಡೆಸಿದ ಸಭೆಯಲ್ಲಿ, ಹಾವೇರಿಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಈ ವಿಷಯ ಏಕೆ ಗಮನಕ್ಕೆ ತರಲಿಲ್ಲ? ಸಚಿವರು ಇದ್ದಾಗ ಎಲ್ಲದಕ್ಕೂ ತಲೆಯಾಡಿಸುತ್ತೀರಿ. ಈಗ ಸಮಸ್ಯೆ ಹೇಳುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು. ಮಂಗಳವಾರ ಉಪ ಮುಖ್ಯಮಂತ್ರಿ ಮತ್ತು ಎಂಡಿ ಭೇಟಿ ಮಾಡಿಸುವುದಾಗಿ ಭರವಸೆ ನೀಡಿದರು.

ಕಾಲುವೆ ಎಲ್ಲೆಲ್ಲಿ ಬ್ಲಾಕೇಜ್ ಇದೆ ಗಮನಿಸಿ ಈಗಲೇ ಸರಿಪಡಿಸಿ. ನೀರು ಹಾಯಿಸುವ ಸಮಯದಲ್ಲಿ ಯಾವುದೇ ತೊಂದರೆ ಆಗದೇ ಸರಳವಾಗಿ ನೀರು ಹಾಯಬೇಕು. ಕೆಲವೆಡೆ ನೀರು ಬಹಳ ಸುತ್ತಿ ಸುತ್ತಿ ಹರಿಯುತ್ತಿರುವ ಬಗ್ಗೆ ದೂರುಗಳಿವೆ. ಯೋಜನೆಯ ಅಕ್ಕಪಕ್ಕದ ಗ್ರಾಮಗಳ ಕೆಲವು ಕೆರೆಗಳನ್ನು ತುಂಬಿಸಲು ಗಮನ ಹರಿಸಿ ಎಂದು ಶಾಸಕ ಮಾನೆ ಸೂಚಿಸಿದರು.

ಯುಟಿಪಿ ಎಇಇ ದೇವರಾಜ ಸೇರಿದಂತೆ ಹಲವು ರೈತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವ ಪೀಳಿಗೆ ಪೋಷಕಾಂಶಗಳ ಕೊರತೆ
ಪುಟ 2ಕ್ಕೆ ಬಾಟಮ್....ಗುರುವಂದನಾ, ಸ್ನೇಹ ಸಮ್ಮಿಲನ ಕಾರ್ಯಕ್ರಮ