ಕನ್ನಡಪ್ರಭ ವಾರ್ತೆ, ಶಿಕಾರಿಪುರ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಆಪರೇಷನ್ ಹಸ್ತದ ಮೂಲಕ ತರಲಘಟ್ಟ ಗ್ರಾ.ಪಂ. ಆಡಳಿತವನ್ನು ಕೈವಶಪಡಿಸಿಕೊಂಡು, ಸತತ 3 ದಶಕದ ಬಿಜೆಪಿ ಆಡಳಿತಕ್ಕೆ ಕಾಂಗ್ರೆಸ್ ಅಂತ್ಯ ಹಾಡಿದೆ.ಪಟ್ಟಣಕ್ಕೆ ಸಮೀಪದಲ್ಲಿರುವ ತರಲಘಟ್ಟ ಗ್ರಾಪಂ 3 ದಶಕದಿಂದ ಬಿಜೆಪಿ ವಶದಲ್ಲಿದ್ದು, ಶನಿವಾರ ನಡೆದ ಅಧ್ಯಕ್ಷ ಹಾಗೂ ಉಪಾದ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಮಂಜಮ್ಮ ಜ್ಞಾನೇಶ್ ಅಧ್ಯಕ್ಷರಾಗಿ ಹಾಗೂ ಕುಮಾರನಾಯ್ಕ ತಿಮ್ಲಾಪುರ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಕಾರ್ಯನಿರ್ವಹಿಸಿದರು.
16 ಸದಸ್ಯ ಬಲದ ಗ್ರಾ.ಪಂ.ಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ತಲಾ 8 ಸದಸ್ಯರಿದ್ದು, 14 ಮತ ಗಳಿಸಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾದರು. ಆ ಮೂಲಕ ಎಲ್ಲರ ಹುಬ್ಬೇರಿಸುವ ಜತೆಗೆ ಕಮಲ ಪಾಳಯದಲ್ಲಿ ತಳಮಳ ಹುಟ್ಟಿಹಾಕಿ, ಕಾಂಗ್ರೆಸ್ ಪಾಳಯದಲ್ಲಿ ಆತ್ಮಶಕ್ತಿ ವೃದ್ಧಿಸಿದೆ.ಕ್ಷೇತ್ರದ ಶಾಸಕ ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ ಕೆಲವೇ ಸಮಯದಲ್ಲಿಯೇ ನಡೆದ ಈ ಅನಿರೀಕ್ಷಿತ ಬೆಳವಣಿಗೆ ತಾಲೂಕಿನಲ್ಲಿ ಪಕ್ಷದ ಸಂಘಟನೆಗೆ ಭವಿಷ್ಯದಲ್ಲಿ ಸವಾಲಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಈ ಪರಂಪರೆ ಇತರೆ ಗ್ರಾ.ಪಂ.ಗಳಲ್ಲಿ ಪುನರಾವರ್ತನೆ ಆಗದಂತೆ ಎಲ್ಲ ರೀತಿಯ ಎಚ್ಚರಿಕೆ ಬಿಜೆಪಿ ವಹಿಸುವುದೋ ಅಥವಾ ಕಾಂಗ್ರೆಸ್ ಆತ್ಮವಿಶ್ವಾಸ ಇಮ್ಮಡಿಯಾಗಿ ಆಪರೇಷನ್ ಹಸ್ತದ ಪ್ರಭಾವ ಹೆಚ್ಚಾಗುವುದೋ ಕಾದುನೋಡಬೇಕು.
- - - ಆಪರೇಷನ್ ಹಸ್ತ ಕಾರ್ಯಾಚರಣೆ ನೇತೃತ್ವ ವಹಿಸಿದ್ದ ವಿಧಾನಸಭೆ ಪರಾಜಿತ ಅಭ್ಯರ್ಥಿ ನಾಗರಾಜಗೌಡ, ಕಾಂಗ್ರೆಸ್ ಮುಖಂಡ ಉಮೇಶ್ ಮಾರವಳ್ಳಿ, ಗೊಗ್ಗದ ರಾಜಣ್ಣ, ರಾಘವೇಂದ್ರ ನಾಯ್ಕ,ಶಿವ್ಯಾ ನಾಯ್ಕ, ಮಲ್ಲಿಕ ನಾಯ್ಕ, ಸುರೇಶ ಧಾರವಾಡ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.- - - -22ಕೆ.ಎಸ್.ಕೆ.ಪಿ2:
ಶಿಕಾರಿಪುರ ತಾಲೂಕು ತರಲಘಟ್ಟ ಗ್ರಾಪಂ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಮಂಜಮ್ಮ ಹಾಗೂ ಕುಮಾರನಾಯ್ಕ ಅವರನ್ನು ಕಾಂಗ್ರೆಸ್ ಮುಖಂಡರು ಅಭಿನಂದಿಸಿದರು.