ನನ್ನ ವಿರುದ್ಧ ಮಂಜಪ್ಪ ಹೇಳಿಕೆ ಶೋಷಿತರ ದುರಾದೃಷ್ಟ: ವಿನಯ

KannadaprabhaNewsNetwork |  
Published : Aug 15, 2024, 01:47 AM IST
14ಕೆಡಿವಿಜಿ13-ದಾವಣಗೆರೆಯಲ್ಲಿ ಬುಧವಾರ ಸ್ವಾಭಿಮಾನಿ ಬಳಗದ ಜಿ.ಬಿ.ವಿನಯಕುಮಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಅಹಿಂದ ವರ್ಗಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ, ಶೋಷಿತ ವರ್ಗಗಳ ಮುಖ್ಯಮಂತ್ರಿ ಸಿದ್ದರಾಮಯ್ಯ ಪದಚ್ಯುತಿಗೆ ನಡೆದ ಕುತಂತ್ರಗಳ ವಿರುದ್ಧ ಅಹಿಂದ ವರ್ಗದವನಾಗಿ ನಾನು ಧ್ವನಿ ಎತ್ತಿದ್ದನ್ನೇ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಮಹಾಪರಾಧ ಎಂಬಂತೆ ಬಿಂಬಿಸಿದ್ದು ಸರಿಯಲ್ಲ ಎಂದು ಲೋಕಸಭೆ ಚುನಾವಣೆ ಪರಾಜಿತ ಅಭ್ಯರ್ಥಿ ಜಿ.ಬಿ. ವಿನಯಕುಮಾರ ದಾವಣಗೆರೆಯಲ್ಲಿ ತೀವ್ರವಾಗಿ ಆಕ್ಷೇಪಿಸಿದ್ದಾರೆ.

- ಏಕವಚನ ಬಳಸಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ವಿರುದ್ಧ ಲೋಕಸಭೆ ಚುನಾವಣೆ ಪರಾಚಿತ ಅಭ್ಯರ್ಥಿ ಗರಂ ।

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ ಅಹಿಂದ ವರ್ಗಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ, ಶೋಷಿತ ವರ್ಗಗಳ ಮುಖ್ಯಮಂತ್ರಿ ಸಿದ್ದರಾಮಯ್ಯ ಪದಚ್ಯುತಿಗೆ ನಡೆದ ಕುತಂತ್ರಗಳ ವಿರುದ್ಧ ಅಹಿಂದ ವರ್ಗದವನಾಗಿ ನಾನು ಧ್ವನಿ ಎತ್ತಿದ್ದನ್ನೇ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಮಹಾಪರಾಧ ಎಂಬಂತೆ ಬಿಂಬಿಸಿದ್ದು ಸರಿಯಲ್ಲ ಎಂದು ಲೋಕಸಭೆ ಚುನಾವಣೆ ಪರಾಜಿತ ಅಭ್ಯರ್ಥಿ ಜಿ.ಬಿ. ವಿನಯಕುಮಾರ ತೀವ್ರವಾಗಿ ಆಕ್ಷೇಪಿಸಿದರು.

ನಗರದಲ್ಲಿ ಬುಧ‍ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಹಿಂದ ವರ್ಗದ ಪರವಾಗಿದ್ದೇನೆಂದು ಬಿಂಬಿಸಿಕೊಳ್ಳುವ ಪಕ್ಷದ ಜಿಲ್ಲಾಧ್ಯಕ್ಷನಾಗಿ, ಅದೇ ವರ್ಗಗಳನ್ನು ಪ್ರತಿನಿಧಿಸುತ್ತಿರುವ ನನ್ನ ವಿರುದ್ಧ ಏಕವಚನದಲ್ಲಿ ಎಚ್.ಬಿ.ಮಂಜಪ್ಪ ಮಾತನಾಡಿದ್ದು ಶೋಷಿತ ವರ್ಗಗಳ ದುರಾದೃಷ್ಟ ಎಂದರು.

ಜಾತಿ ಜಾತಿಗಳ ಮಧ್ಯೆ ದ್ವೇಷ ಹರಡುತ್ತಿರುವುದಾಗಿ ಎಚ್.ಬಿ.ಮಂಜಪ್ಪ ಮಿಥ್ಯಾರೋಪ ಮಾಡಿದ್ದಾರೆ. ಲೋಕಸಭೆ ಚುನಾವಣೆಗೆ 2 ದಿನ ಮುಂಚೆ ಕ್ಷೇತ್ರದ ಕುರುಬ ಸಮಾಜದ ಸಭೆಯನ್ನು ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ನಡೆಸಿ, ಪಕ್ಷೇತರ ಅಭ್ಯರ್ಥಿ ವಿನಯಕುಮಾರಗೆ ಒಂದೇ ಒಂದು ಓಟು ಸಹ ಹಾಕಬಾರದೆಂದು ಮುಖ್ಯಮಂತ್ರಿ ಅವರಿಂದ ಹೇಳಿಸಿದ್ದು ಯಾರು? ಹೊನ್ನಾಳಿ ಸಭೆಯಲ್ಲಿ ಒಬ್ಬ ಕುರುಬ ಜಾತಿಯ ವ್ಯಕ್ತಿ ಸ್ಪರ್ಧಿಸಿದ್ದಾನೆ ಅಂತಾ ಓಟು ಹಾಕುತ್ತೀರಾ ಅಂತಾ ಹೇಳಿಸಿದ್ದು ಯಾರು ಎಂದು ಪ್ರಶ್ನಿಸಿದರು.

ಹೊನ್ನಾಳಿ ವಿಧಾನಸಭೆ ಟಿಕೆಟ್, ದಾವಣಗೆರೆ ಲೋಕಸಭೆ ಟಿಕೆಟ್ ಅಹಿಂದ ವರ್ಗದ ಮಂಜಪ್ಪನವರಿಗೇ ಕೊಡಬೇಕಿತ್ತು. ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಇಲ್ಲದಿದ್ದಾಗ ಗೆಲ್ಲುವ ವಾತಾವರಣ ಇಲ್ಲದಿದ್ದಾಗ ಅಹಿಂದ ವರ್ಗಕ್ಕೆ ಟಿಕೆಟ್ ನೀಡಲಾಗಿದೆ. ಈಚೆಗೆ ಗೆಲ್ಲುವ ಅವಕಾಶ ಹೆಚ್ಚಾಗಿದ್ದರೂ ಅಹಿಂದ ವರ್ಗಕ್ಕೆ ಟಿಕೆಟ್ ತಪ್ಪಿಸಲಾಗಿದೆ. ಅಹಿಂದ ವರ್ಗದ ಸಿಎಂಗೆ ಅನ್ಯಾಯ ಆಗುತ್ತದೆಂದು ನಾನು ಧ್ವನಿ ಎತ್ತಿದ್ದೇನೆ. ಜಿಲ್ಲೆಯಲ್ಲೂ ಅಹಿಂದ ವರ್ಗದ ನಾಯಕರು ಅವಕಾಶ ವಂಚಿತರಾಗುತ್ತಿದ್ದಾರೆ ಎನ್ನುವಾಗಲೂ ಧ್ವನಿ ಎತ್ತುತ್ತೇನೆ. ಧ್ವನಿ ಇಲ್ಲದವರ ಧ್ವನಿಯಾಗಿ, ಆ ಜನರ ಹಕ್ಕು ಪಡೆಯಲು ಸದಾ ಜೊತೆಗಿರುತ್ತೇನೆ ಎಂದು ಅವರು ಹೇಳಿದರು.

ಮುಖಂಡರಾದ ಸೊಸೈಟ್ ಮೊಹಮ್ಮದ್ ಅಲ್ತಾಫ್‌, ಜಗಳೂರುಪ್ರಸನ್ನಕುಮಾರ ಇತರರು ಇದ್ದರು.

- - -

ಬಾಕ್ಸ್‌-1* ವಲಸಿಗನಲ್ಲ, ನನ್ನೂರು ಕಕ್ಕರಗೊಳ್ಳ - ಕಾಂಗ್ರೆಸ್ಸಿನಿಂದ ಉಚ್ಚಾಟಿಸಲಿ, ವಿಧಾನಸಭೆಗೆ ಸ್ಪರ್ಧಿಸುವೆ ಎಂದ ವಿನಯಕುಮಾರ

ಚುನಾವಣೆ ಕಾರಣಕ್ಕೆ ಇಲ್ಲಿಗೆ ವಲಸೆ ಬಂದವನು ನಾನಲ್ಲ. ನನ್ನ ಊರು, ನಾನು ಹುಟ್ಟಿದ ಊರು ಕಕ್ಕರಗೊಳ್ಳ. ಸಾಧನೆ ಮಾಡಲೆಂದೇ ರಾಜಕೀಯ ಕ್ಷೇತ್ರಕ್ಕೂ ಕಾಲಿಟ್ಟಿದ್ದೇನೆ ಎಂದು ಜಿ.ಬಿ.ವಿನಯಕುಮಾರ ಹೇಳಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಒಂದು ಕುಟುಂಬದ ಪರ ಮಾತನಾಡುತ್ತಿದ್ದಾರೆ. ಆದರೆ, ವಿನಯಕುಮಾರ ಸಮಸ್ತ ಶೋಷಿತ ವರ್ಗಗಳ ಪರವಾಗಿ ಮಾತನಾಡುತ್ತಿದ್ದಾನೆ. ಈ ಸತ್ಯವನ್ನು ಜನರು ಸಹ ಅರಿತಿದ್ದಾರೆ. ಕಾಂಗ್ರೆಸ್ ಪಕ್ಷದ ಜಿಲ್ಲಾ ಮುಖಂಡರಿಗೆ ಸದ್ಯ ಅಭದ್ರತೆ ಕಾಡುತ್ತಿದೆ ಎಂದರು.

ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ವೈಯಕ್ತಿಕವಾಗಿ ತೀರ್ಮಾನ ಮಾಡಿದ್ದೇನೆ. ಯಾವುದಾದರೂ ಒಂದು ಕ್ಷೇತ್ರಕ್ಕೆ ಪಕ್ಷೇತರನಾಗಿ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಗುರಿ ಹೊಂದಿದ್ದೇನೆ. ಸ್ಥಾನಮಾನ ಕೇಂದ್ರಿತ ರಾಜಕಾರಣ ಸದ್ಯ ನಡೆಯುತ್ತಿದೆ. ಆದರೆ, ನನಗೆ ಸ್ವಾಭಿಮಾನ ಮುಖ್ಯ. ಮುಂದಿನ ದಿನಗಳಲ್ಲೂ ಸ್ವಾಭಿಮಾನದಿಂದಲೂ ಸ್ಪರ್ಧಿಸುವೆ. ಕಾಂಗ್ರೆಸ್ ಸದಸ್ಯತ್ವಕ್ಕೆ ನಾನು ರಾಜೀನಾಮೆ ಕೊಡುವುದಿಲ್ಲ. ನನ್ನನ್ನು ಪಕ್ಷದಿಂದ ಉಚ್ಚಾಟಿಸಿದರೂ ತೊಂದರೆ ಇಲ್ಲ ಎಂದು ಹೇಳಿದರು.

- - -

ಟಾಪ್‌ ಕೋಟ್‌ ಯಾರ ಹಂಗಿನಲ್ಲೂ ನಾನು ಇಲ್ಲ. ಸ್ವಾಭಿಮಾನಿಯಾಗಿ, ಸ್ವತಂತ್ರವಾಗಿಯೇ ಇದ್ದೇನೆ. ಬಡ, ಮಧ್ಯಮ ವರ್ಗಗಳ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲೆಂದು ತರಬೇತಿ ಕೇಂದ್ರಗಳನ್ನು ಇಲ್ಲಿ ಆರಂಭಿಸಲಿದ್ದೇನೆ. ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ, ಸರ್ಕಾರಿ ಶಾಲೆಗಳನ್ನು ಉಳಿಸಿ, ಅಭಿಯಾನ ಪ್ರಾರಂಭಿಸುತ್ತಿದ್ದೇನೆ - ಜಿ.ಬಿ.ವಿನಯಕುಮಾರ, ಸ್ವಾಭಿಮಾನಿ ಬಳಗ

- - - -14ಕೆಡಿವಿಜಿ13:

ದಾವಣಗೆರೆಯಲ್ಲಿ ಬುಧವಾರ ಸ್ವಾಭಿಮಾನಿ ಬಳಗದ ಜಿ.ಬಿ.ವಿನಯಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV

Recommended Stories

ಮಗುವಿಗೆ ಗಂಟೆಯೊಳಗಾಗಿ ತಾಯಿಯ ಎದೆ ಹಾಲು ನೀಡಿ
ಸರ್ಕಾರಿ ಶಾಲೆಗಳ ಉಳಿವು, ಪರಿಸರ ಬಗ್ಗೆ ಜಾಗೃತಿ ಮೂಡಿಸಲು ಸೈಕಲ್​ ಮೂಲಕ ರಾಜ್ಯ ಪರ್ಯಟನೆ