ಮನಮೋಹನ ಸಿಂಗ್ ವಿಶ್ವ ಕಂಡ ಶ್ರೇಷ್ಠ ಆರ್ಥಿಕ ತಜ್ಞ : ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಮಾಯೂನ್

KannadaprabhaNewsNetwork | Updated : Dec 28 2024, 12:25 PM IST

ಸಾರಾಂಶ

ಗಾಂಧಿ ಕುಟುಂಬ ಹೊರತು ಪಡಿಸಿ ಕಾಂಗ್ರೆಸ್‌ನಲ್ಲಿ ಹೆಚ್ಚು ಅವಧಿಯ ಪ್ರಧಾನಿ ಆಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದ್ದು. ಇವರ ಅಗಲಿಕೆ ದೇಶಕ್ಕೆ ನಷ್ಟವಾಗಿದೆ

ಶಿರಹಟ್ಟಿ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಖ್ಯಾತ ಅರ್ಥಶಾಸ್ತ್ರಜ್ಞರಾಗಿ ಅರ್ಥಿಕತೆ ಪರಿವರ್ತಿಸುವ ವ್ಯಾಪಕ ಸುಧಾರಣೆ ತಂದರು ಎಂದು ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಮಾಯೂನ್ ಮಾಗಡಿ ಹೇಳಿದರು.

ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್ ಕಮಿಟಿ ವತಿಯಿಂದ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಮನಮೋಹನ್ ಸಿಂಗ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.

ಗಾಂಧಿ ಕುಟುಂಬ ಹೊರತು ಪಡಿಸಿ ಕಾಂಗ್ರೆಸ್‌ನಲ್ಲಿ ಹೆಚ್ಚು ಅವಧಿಯ ಪ್ರಧಾನಿ ಆಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದ್ದು. ಇವರ ಅಗಲಿಕೆ ದೇಶಕ್ಕೆ ನಷ್ಟವಾಗಿದೆ ಎಂದರು.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗುರುವಾರ ದೆಹಲಿಯಲ್ಲಿ ನಿಧನರಾಗಿದ್ದು, ಅವರು ದೇಶದ ಆರ್ಥಿಕ ಸುಧಾರಣೆ ಶಿಲ್ಪಿ ಎಂದು ಗುರುತಿಸಲ್ಪಟ್ಟಿದ್ದರು. ತ್ವರಿತ ಬೆಳವಣಿಗೆ ಮತ್ತು ಜಾಗತೀಕರಣಕ್ಕೆ ದಾರಿ ಮಾಡಿಕೊಟ್ಟರು. ಇವರು ವಿಶ್ವ ಕಂಡ ಶ್ರೇಷ್ಟ ಆರ್ಥಿಕ ತಜ್ಞರಾಗಿದ್ದರು ಎಂದು ತಿಳಿಸಿದರು.

ಶ್ರೇಷ್ಟ ಆರ್ಥಿಕ ತಜ್ಞರು, ಮುಕ್ತ ಆರ್ಥಿಕ ನೀತಿಯ ಮೂಲಕ ಭಾರತದ ಆರ್ಥಿಕತೆಗೆ ನವ ಚೈತನ್ಯ ನೀಡಿದ ಐಟಿ- ಬಿಟಿ ಕ್ರಾಂತಿಗೆ ನಾಂದಿ ಹಾಡಿ ವಿಶ್ವವೇ ಭಾರತದತ್ತ ತಿರುಗುವಂತೆ ಮಾಡಿದರು. ಹಲವಾರು ಜನಪರ ಹಾಗೂ ಜನಪ್ರೀಯ ಯೋಜನೆ ನೀಡಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾದ ಡಾ. ಮನಮೋಹನ್ ಸಿಂಗ್ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ಯುವ ಮುಖಂಡ ಮಹಾಂತೇಶ ದಶಮನಿ ಮಾತನಾಡಿ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅಗಲಿಕೆಯಿಂದ ದೇಶವು ಅಪಾರ ದುಃಖದಲ್ಲಿದೆ. ಸರಳತೆ, ಪಾಂಡಿತ್ಯ, ಮತ್ತು ನಿಷ್ಠೆಯ ಮೂಲಕ ದೇಶದ ಆರ್ಥಿಕ ಸ್ಥಿತಿ ಬದಲಿಸಿದ ಅವರ ಮಾರ್ಗದರ್ಶಕ ತತ್ವಗಳು ಎಲ್ಲರಿಗೂ ಪ್ರೇರಣೆಯಾಗಿ ಉಳಿಯುತ್ತವೆ ಎಂದು ಹೇಳಿದರು.

ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಶಿರಹಟ್ಟಿ, ಪಪಂ ಮಾಜಿ ಅಧ್ಯಕ್ಷ ಬುಡನಶ್ಯಾ ಮಕಾನದಾರ, ಮಾಜಿ ಉಪಾಧ್ಯಕ್ಷ ಇಸಾಕ ಆದ್ರಳ್ಳಿ, ಅಜ್ಜು ಪಾಟೀಲ, ಹಸರತ ಢಾಲಾಯತ, ಮುಸ್ತಾಕ ಚೋರಗಸ್ತಿ, ಅಲ್ಲಾಭಕ್ಷಿ ನಗಾರಿ, ರವಿ ಗುಡಿಮನಿ, ದೇವಪ್ಪ ಲಮಾಣಿ, ಮಾಬೂಸಾಬ್‌, ಶವಕತ ಮನಿಯಾರ, ಆನಂದ ಕೋಳಿ, ಸುಧೀಶ ಜಮಖಂಡಿ, ರಾಮಚಂದ್ರ ಗಡಾದ, ನಾಗರಾಜ ಡಂಬಳ ಸೇರಿದಂತೆ ಅನೇಕರು ಇದ್ದರು.

Share this article