ಮನ್‌ಮುಲ್‌: ಪ್ರಬಲರ ಪ್ರವೇಶದಿಂದ ಬಿರುಸುಗೊಂಡ ಚುನಾವಣಾ ಅಖಾಡ

KannadaprabhaNewsNetwork | Published : Jan 25, 2025 1:00 AM

ಸಾರಾಂಶ

ಮಂಡ್ಯ ತಾಲೂಕಿನಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕೆಬ್ಬಳ್ಳಿ ರಾಜು ಉಮೇದುವಾರಿಕೆ ಸಲ್ಲಿಸಿದರು. ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ , ಹಂಚಹಳ್ಳಿ ಲೋಕೇಶ್ ಜೊತೆಗಿದ್ದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮನ್‌ಮುಲ್ ಆಡಳಿತ ಮಂಡಳಿ ಚುನಾವಣೆಗೆ ಶುಕ್ರವಾರ ನಾಮಪತ್ರ ಸಲ್ಲಿಕೆ ಭರಾಟೆ ತೀವ್ರ ಬಿರುಸಿನಿಂದ ನಡೆಯಿತು. ಉಮೇದುವಾರಿಕೆ ಸಲ್ಲಿಕೆಯೊಂದಿಗೆ ಪ್ರಬಲರು ಅಖಾಡ ಪ್ರವೇಶಿಸಿದರು. ಜಿಲ್ಲಾಧಿಕಾರಿ ಕಚೇರಿ ಬಳಿ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು, ಬೆಂಬಲಿಗರು ನೆರೆದಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಕಾರುಗಳು ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ಕಂಡುಬಂದವು.

ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳಾಗಿ ಕೆ.ಆರ್‌.ಪೇಟೆ ಕ್ಷೇತ್ರದ ಶಾಸಕ ಎಚ್‌.ಟಿ.ಮಂಜು, ಮನ್‌ಮುಲ್‌ ಮಾಜಿ ಅಧ್ಯಕ್ಷ ಬಿ.ಆರ್‌.ರಾಮಚಂದ್ರು, ಉಪಾಧ್ಯಕ್ಷ ಎಂ.ಎಸ್‌.ರಘುನಂದನ್‌ ಮರು ಆಯ್ಕೆ ಬಯಸಿ ನಿರ್ದೇಶಕ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದರೆ, ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಕೆಬ್ಬಳ್ಳಿ ರಾಜು ಉಮೇದುವಾರಿಕೆ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೆ ಶನಿವಾರ (ಜ.25) ಕೊನೆಯ ದಿನ. ಶುಭ ಶುಕ್ರವಾರದಂದು ಪ್ರಬಲ ಆಕಾಂಕ್ಷಿಗಳು ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಶಕ್ತಿ ಪ್ರದರ್ಶಿಸುತ್ತಾ ಅಖಾಡ ಪ್ರವೇಶಿಸಿದರು. ಶಾಸಕ ರವಿಕುಮಾರ್‌ ಕೂಡ ನಾಮಪತ್ರ ಸಲ್ಲಿಕೆ ವೇಳೆ ಪಕ್ಷದ ಬೆಂಬಲಿತ ಅಭ್ಯರ್ಥಿಗೆ ಸಾಥ್‌ ನೀಡಿದ್ದರು.

ಮಂಡ್ಯ ತಾಲೂಕಿನಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಮನ್‌ಮುಲ್‌ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು ಅವರು ಚುನಾವಣಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರಿಗೆ ನಾಮಪತ್ರ ಸಲ್ಲಿಸಿದರು. ನಗರಸಭೆ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷ ಅರುಣ್ ಕುಮಾರ್, ಸದಸ್ಯ ರಾಮಲಿಂಗಯ್ಯ ಇದ್ದರು.

ಅದೇ ರೀತಿ ಮನ್‌ಮುಲ್ ಉಪಾಧ್ಯಕ್ಷ ಎಂ.ಎಸ್.ರಘುನಂದನ್ ಅವರು ಮಂಡ್ಯ ತಾಲೂಕಿನಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದರು. ಈ ಸಮಯದಲ್ಲಿ ಬಿ.ಆರ್. ರಾಮಚಂದ್ರು, ಬೂದನೂರು ಸ್ವಾಮಿ, ಮೀನಾಕ್ಷಿ ಪುಟ್ಟಸ್ವಾಮಿ ಜೊತೆಗಿದ್ದು ಸಾಥ್ ನೀಡಿದರು.

ಕೆ. ಆರ್.ಪೇಟೆ ತಾಲೂಕಿನಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಶಾಸಕ ಎಚ್.ಟಿ. ಮಂಜು ನಾಮಪತ್ರ ಸಲ್ಲಿಸಿದರು. ಶಾಸಕರಾಗಿ ಆಯ್ಕೆಯಾಗಿದ್ದರೂ ಮನ್‌ಮುಲ್‌ ಆಡಳಿತ ಮಂಡಳಿಗೆ ಮರು ಆಯ್ಕೆ ಬಯಸಿ ಸ್ಪರ್ಧೆಗಿಳಿದಿರುವುದು ಒಂದು ವಿಶೇಷವಾಗಿದೆ.

ಮಂಡ್ಯ ತಾಲೂಕಿನಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕೆಬ್ಬಳ್ಳಿ ರಾಜು ಉಮೇದುವಾರಿಕೆ ಸಲ್ಲಿಸಿದರು. ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ , ಹಂಚಹಳ್ಳಿ ಲೋಕೇಶ್ ಜೊತೆಗಿದ್ದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಜನಜಂಗುಳಿ:

ಮನ್‌ಮುಲ್‌ ಆಡಳಿತ ಮಂಡಳಿ ಚುನಾವಣೆಗೆ ಪ್ರಭಾವಿ ಮುಖಂಡರು ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಅಭಿಮಾನಿಗಳು, ಬೆಂಬಲಿಗರು ಭಾರೀ ಸಂಖ್ಯೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ನೆರೆದಿದ್ದರು. ಸುಮಾರು ಎರಡು- ಮೂರು ತಾಸು ಜಿಲ್ಲಾಧಿಕಾರಿ ಕಚೇರಿ ಬಳಿ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು.

ನೂರಾರು ಕಾರುಗಳಲ್ಲಿ ಆಗಮಿಸಿದ್ದ ಬೆಂಬಲಿಗರು ರಸ್ತೆಯ ಎರಡೂ ಬದಿಗಳಲ್ಲಿ ಕಾರುಗಳನ್ನು ನಿಲ್ಲಿಸಿದ್ದರು. ಅತಿ ಹೆಚ್ಚು ಸಂಖ್ಯೆಯಲ್ಲಿ ಅಭಿಮಾನಿಗಳು, ಬೆಂಬಲಿಗರು ರಸ್ತೆಯಲ್ಲಿ ನಿಂತಿದ್ದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಯಿತು. ಬೆಂಬಲಿತ ಅಭ್ಯರ್ಥಿ ಪರವಾಗಿ ಜಯಘೋಷಗಳನ್ನು ಮೊಳಗಿಸಿದರು. ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷದ ಪ್ರಭಾವಿ ಮುಖಂಡರು ಆಗಮಿಸಿ ಅಭ್ಯರ್ಥಿಗಳಿಗೆ ಶುಭ ಕೋರಿದರು.

Share this article