ಬ್ಯಾಡಗಿ ರಸ್ತೆ ಅಗಲೀಕರಣ ಹೋರಾಟಕ್ಕೆ ಮತ್ತಷ್ಟು ಸಂಘಟನೆ ಬಲ

KannadaprabhaNewsNetwork | Published : Jun 8, 2025 2:59 AM
ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ-136 (ಮುಖ್ಯರಸ್ತೆ) ಅಗಲೀಕರಣಕ್ಕಾಗಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮೂರನೇ ದಿನವೂ ಯಾವುದೇ ಫಲಪ್ರದ ಕಾಣದೇ ನಾಲ್ಕನೇ ದಿನಕ್ಕೆ ಮುಂದುವರಿದಿದೆ. ಇವುಗಳ ಮಧ್ಯೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಅಗಲೀಕರಣ ಹೋರಾಟಕ್ಕೆ ಮತ್ತಷ್ಟು ಹುಮ್ಮಸ್ಸು ನೀಡಿತು.

ಬ್ಯಾಡಗಿ: ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ-136 (ಮುಖ್ಯರಸ್ತೆ) ಅಗಲೀಕರಣಕ್ಕಾಗಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮೂರನೇ ದಿನವೂ ಯಾವುದೇ ಫಲಪ್ರದ ಕಾಣದೇ ನಾಲ್ಕನೇ ದಿನಕ್ಕೆ ಮುಂದುವರಿದಿದೆ.

ಇವುಗಳ ಮಧ್ಯೆ ಶ್ರೀ ಸಿದ್ಧೇಶ್ವರ ಟಾಟಾ ಏಸ್ ಮಾಲೀಕರ ಸಂಘ, ಅಂಜುಮನ್-ಎ-ಇಸ್ಲಾಂ ಸಂಸ್ಥೆ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ, ತಾಲೂಕು ಕರವೇ ಕನ್ನಡ ಒಕ್ಕೂಟಗಳು ಬೆಂಬಲ ಸೂಚಿಸಿದ್ದು, ಅಗಲೀಕರಣ ಹೋರಾಟಕ್ಕೆ ಮತ್ತಷ್ಟು ಹುಮ್ಮಸ್ಸು ನೀಡಿತು.

ನೂರಾರು ಟಾಟಾ ಏಸ್ ವಾಹನಗಳೊಂದಿಗೆ ರಸ್ತೆಗಿಳಿದ ಪ್ರತಿಭಟನಾಕಾರರು, ಪಟ್ಟಣದ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಪ್ರತಿಭಟನಾ ಸ್ಥಳಕ್ಕೆ ಬಂದು ತಲುಪಿದರು. ಈ ವೇಳೆ ವಿಳಂಬ ಧೋರಣೆ ಅನುಸರಿಸುತ್ತಿರುವ ಸರ್ಕಾರಿ ಅಧಿಕಾರಿಗಳು, ಕೋರ್ಟ್‌ ಮೆಟ್ಟಿಲೇರುವ ಮೂಲಕ ಅನಗತ್ಯವಾಗಿ ಅಗಲೀಕರಣ ಕಾಮಗಾರಿಗೆ ತೊಂದರೆ ನೀಡುತ್ತಿರುವ ಮುಖ್ಯರಸ್ತೆ ನಿವಾಸಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ರಸ್ತೆ ನಿಮ್ಮ ಪೂರ್ವಜರ ಆಸ್ತಿಯೇ?: ಟಾಟಾ ಏಸ್ ಮಾಲೀಕರ ಸಂಘದ ಅಧ್ಯಕ್ಷ ಸಿದ್ಧಪ್ಪ ಸಂಕಣ್ಣನವರ (ದೇಸಾಯಿ) ಮಾತನಾಡಿ, ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಅಭಿವೃದ್ಧಿಗೆ ಮುಖ್ಯರಸ್ತೆ ಅಗಲೀಕರಣ ಬಹಳಷ್ಟು ಅವಶ್ಯವಿದೆ. ಕಿಷ್ಕಿಂಧೆಯಾಗಿರುವ ಮುಖ್ಯರಸ್ತೆಯಲ್ಲಿ ನಿತ್ಯವೂ ನಮ್ಮ ಸಾವಿರಾರು ವಾಹನಗಳು ಸಂಕಷ್ಟದಿಂದ ಸಂಚರಿಸುತ್ತಿವೆ. ಅದಾಗ್ಯೂ ಸರ್ಕಾರ ಮುಖ್ಯರಸ್ತೆ ಅಕ್ಕಪಕ್ಕದ ಜನರಿಗೆ ಬಿಟ್ಟು ಕೊಡುವ ಜಾಗಕ್ಕೆ ಲಕ್ಷಗಟ್ಟಲೇ ಹಣ ನೀಡುತ್ತಿದೆ ಎಂಬ ವಿಷಯ ತಿಳಿದು ಬಂದಿದ್ದು, ದುಡ್ಡು ಕೊಟ್ಟರೂ ಜಾಗ ಕೊಡುವುದಿಲ್ಲ ಎನ್ನಲು ಮುಖ್ಯರಸ್ತೆ ನಿಮ್ಮ ಪೂರ್ವಜರು ಮಾಡಿಟ್ಟ ಆಸ್ತಿಯೇ ಎಂದು ಪ್ರಶ್ನಿಸಿದರು.

ರಾಮು ಬಾಣಾಪುರ ಮಾತನಾಡಿ, ತಗ್ಗು-ಗುಂಡಿಗಳಿಂದ ತುಂಬಿರುವ ಮುಖ್ಯರಸ್ತೆಯಲ್ಲಿ ಜೀವಗಳನ್ನು ಪಣಕ್ಕಿಟ್ಟು ಚಾಲಕರು, ಹಮಾಲರು ಸಂಚರಿಸಬೇಕಾಗಿದೆ. ಹೀಗಾಗಿ ಅಗಲೀಕರಣ ಆಗುವವರೆ ನಮ್ಮ ಕೆಲಸಗಳನ್ನು ಬದಿಗಿಟ್ಟು ಹೋರಾಟದಲ್ಲಿ ಭಾಗವಹಿಸಲಿದ್ದೇವೆ ಎಂದರು.

ಮನೆ ಮುಂದೆ ಶವ: ಬಸವರಾಜ ಸೊಟ್ಟೇರ ಮಾತನಾಡಿ, ಹಮಾಲರು ಸಾರ್ವಜನಿಕರು ಸೇರಿದಂತೆ ಈ ವರೆಗೂ 4 ಜನರು ಈ ರಸ್ತೆಯಲ್ಲಿ ಮೃತಪಟ್ಟಿದ್ದಾರೆ. ಇನ್ನು ಮುಂದೆ ಟಾಟಾ ಏಸ್ ವಾಹನಗಳು ಸಂಚಾರ ವೇಳೆ ನಮ್ಮ ಹಮಾಲರಿಗೆ, ಚಾಲಕರಿಗೆ ಏನಾದರೂ ತೊಂದರೆಯಾದಲ್ಲಿ ಅಥವಾ ನಿಧನರಾದಲ್ಲಿ ಅದಕ್ಕೆ ಅಗಲೀಕರಣ ವಿರೋಧಿಗಳೇ ಹೊಣೆಯಾಗಲಿದ್ದು, ಅವರ ಅಂಗಡಿ ಹಾಗೂ ಮನೆಗಳ ಮುಂದೆ ಮೃತ ದೇಹವಿಟ್ಟು ಪರಿಹಾರ ಪಡೆದುಕೊಳ್ಳುವುದಾಗಿ ಎಚ್ಚರಿಸಿದರು.

ಕರವೇ ಕನ್ನಡ ಒಕ್ಕೂಟದ ತಾಲೂಕಾಧ್ಯಕ್ಷ ಮಹೇಶ ಉಜನಿ ಮಾತನಾಡಿ, ಪಟ್ಟಣದ ಮುಖ್ಯರಸ್ತೆಯಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿದ ವ್ಯಾಪಾರಸ್ಥರು ಆಕ್ರಮಿಸಿಕೊಂಡಿದ್ದಾರೆ. ಇಲ್ಲಿನ ಜನರಿಗೆ ಅಗಲೀಕರಣಕ್ಕೆ ತೊಂದರೆ ಕೊಡುತ್ತಿದ್ದಾರೆ. ಅಗಲೀಕರಣಕ್ಕೆ ಸಹಕರಿಸಿ, ಇಲ್ಲವೇ ನಮ್ಮ ಹೋರಾಟ ಎದುರಿಸಲು ಸಿದ್ಧರಾಗಿ ಎಂದರು.

ಅಂಜುಮನ್ ಇಸ್ಲಾಂ ಸಮಿತಿ ಮಾಜಿ ಸದಸ್ಯ ಹಾಗೂ ನದಾಫ್ ಪಿಂಜಾರ ಸಮಾಜದ ಮುಖಂಡ ರಾಜಣ್ಣ ಕಳ್ಯಾಳ ಮಾತನಾಡಿ, ಅಭಿವೃದ್ಧಿ ವಿರೋಧಿಗಳೇ ಇನ್ನೆಷ್ಟು ದಿವಸ ಜನರ ಪಾಲಿಗೆ ಕಂಟಕವಾಗುತ್ತೀರಿ? ನಿಮ್ಮ ಯಾವುದೇ ಆಟಗಳು ಇನ್ಮುಂದೆ ನಡೆಯುವುದಿಲ್ಲ. ಅಗಲೀಕರಣಕ್ಕೆ ಸಹಕಾರ ನೀಡಿ ಜನರ ಆಕ್ರೋಶದಿಂದ ಪಾರಾಗಿ ಎಂದು ಸಲಹೆ ನೀಡಿದರು.

ನಗರ ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ ಮುನಾಫ್ ಏರೇಶೀಮಿ ಮಾತನಾಡಿ, ಕಳೆದೊಂದು ದಶಕದಿಂದ ನಿಮ್ಮ ಸ್ವಾರ್ಥಕ್ಕೆ ಲಕ್ಷಾಂತರ ಜನರಿಗೆ ತೊಂದರೆ ಕೊಡುತ್ತಿದ್ದೀರಿ, ನಿಮ್ಮೆಲ್ಲ ತಂತ್ರ ಕುತಂತ್ರಗಳಿಗೆ ತೆರೆ ಬೀಳುವವರೆಗೂ ಹೋರಾಟದಿಂದ ಸರಿಯುವ ಪ್ರಶ್ನೆ ಇಲ್ಲ ಎಂದು ಹೇಳಿದರು.

ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಯಲ್ಲಪ್ಪ, ಗಣೇಶ ಆಲೂರ, ಫಕ್ಕೀರೇಶ ಕೋಡಿಹಳ್ಳಿ, ಬಸಪ್ಪ ಹುಚ್ಚೇರ, ಹುಚ್ಚಪ್ಪ ಬಾಣಾಪುರ, ಶೇಖಣ್ಣ ಉಪ್ಪಾರ, ವಂಡ್ರಾಳಪ್ಪ ಕಾಡಸಾಲಿ, ಹನುಮಂತಪ್ಪ ಕರ್ಚಡ, ರಿಯಾಜ ಅಹಮ್ಮದ ಉಕ್ಕುಂದ, ಮಂಜು ಬಾಣಾಪುರ, ನಿಂಗಪ್ಪ ಬಿರಾದರ, ಶೇಖಪ್ಪ ಮಾನ್ವಿ, ಹುಚ್ಚಪ್ಪ ಬಾಣಾಪುರ, ಕರವೇಯ ಬಸವರಾಜ ಹಾವನೂರ, ಜಿತೇಂದ್ರ ಸುಣಗಾರ, ಸುನೀಲ ಉಜನಿ, ಶಿವು ಉಜನಿ, ಕೃಷ್ಣ ಕರ್ಚಡ, ಲಿಂಗರಾಜ, ಅಭಿಷೇಕ ಉಜನಿ ಭಾಗವಹಿಸಿದ್ದರು.

ಜನಮನ ಸೆಳೆದ ಭಜನಾ ಸೇವೆ: ಮುಖ್ಯರಸ್ತೆ ಅಗಲೀಕರಣ ಬೆಂಬಲಿಸಿ ಮಲ್ಲನಗೌಡ ಮರಿಗೌಡರ ನೇತೃತ್ವದ ಗುಡ್ದದ ಚೆನ್ನಾಪುರ ಗ್ರಾಮದ ಕಲ್ಮೇಶ್ವರ ಭಜನಾ ಸಂಘದ ಕಲಾವಿದರು ದಿನವೀಡೀ ನಡೆಸಿಕೊಟ್ಟ ಭಜನೆ ಗಮನ ಸೆಳೆಯಿತು. ತಮ್ಮ ಹಾಡುಗಳ ಮೂಲಕವೇ ಅಗಲೀಕರಣ ವಿರೋಧಿಗಳಿಗೆ ಎಚ್ಚರಿಕೆ ನೀಡಿದರು.