ಶಾ ವಜಾಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

KannadaprabhaNewsNetwork |  
Published : Dec 27, 2024, 12:45 AM IST
ಪೋಟೊ-೨೬ ಎಸ್.ಎಚ್.ಟಿ. ೨ಕೆ- ಕೇಂದ್ರ ಸರ್ಕಾರದ ಗೃಹಮಂತ್ರಿ ಅಮಿತ್ ಶಾ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಿ ತಹಸೀಲ್ದಾರ ಮೂಲಕ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಕೇಂದ್ರ ಗೃಹ ಮಂತ್ರಿಗಳು ತಮ್ಮ ಈ ಅಸಂವಿಧಾನಿಕ ಹೇಳಿಕೆ ಹಿಂಪಡೆದು ದೇಶದ ಜನರ ಮುಂದೆ ಬೇಷರತ್ತಾಗಿ ಬಹಿರಂಗ ಕ್ಷಮೆಯಾಚಿಸಬೇಕು

ಶಿರಹಟ್ಟಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂಬೇಡ್ಕರ್,ಅಂಬೇಡ್ಕರ್ ಎಂದು ಹೇಳುವುದು ಈಗ ಪ್ಯಾಷನ್ ಆಗಿಬಿಟ್ಟಿದೆ. ಇಷ್ಟು ಬಾರಿ ದೇವರ ಹೆಸರನ್ನಾದರೂ ಹೇಳಿದ್ದರೆ ಏಳು ಜನ್ಮದವರೆಗೆ ಸ್ವರ್ಗದಲ್ಲಿ ಸ್ಥಾನವಾದರೂ ಸಿಗುತ್ತಿತ್ತು ಎಂಬ ಕೇಂದ್ರ ಗೃಹ ಸಚಿವರ ಹೇಳಿಕೆ ಖಂಡಿಸಿ ಗುರುವಾರ ಶಿರಹಟ್ಟಿ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗ್ಗೆ 11 ಗಂಟೆ ಸುಮಾರಿಗೆ ಫಕೀರೇಶ್ವರ ಮಠಕ್ಕೆ ತೆರಳಿ ಅಲ್ಲಿಂದ ರಾಷ್ಟ್ರೀಯ ಅಹಿಂದ ಒಕ್ಕೂಟ, ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್, ಕನ್ನಡಪರ, ಮುಸ್ಲಿಂಪರ, ದಲಿತಪರ, ಪ್ರಗತಿಪರ ಸಂಘಟನೆಗಳ ಒಕ್ಕೂಟದವರು ಅಮಿತ್ ಶಾ ಹೇಳಿಕೆ ಖಂಡಿಸಿ ಅಂಬೇಡ್ಕರ್ ಧ್ವಜ ಹಿಡಿದು ಧಿಕ್ಕಾರದ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದರು.

ತಹಸೀಲ್ದಾರ ಕಾರ್ಯಾಲಯದ ಪಕ್ಕದಲ್ಲಿ ಅಮಿತ್ ಶಾ ಭಾವಚಿತ್ರಕ್ಕೆ ಉದ್ರಿಕ್ತರು ಚಪ್ಪಲಿ ಸೇವೆ ಮಾಡಿ ಪ್ರತಿಕೃತಿ ದಹಿಸಿದರು.

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ ಮಾತನಾಡಿ, ಕೇಂದ್ರ ಗೃಹ ಮಂತ್ರಿಗಳು ತಮ್ಮ ಈ ಅಸಂವಿಧಾನಿಕ ಹೇಳಿಕೆ ಹಿಂಪಡೆದು ದೇಶದ ಜನರ ಮುಂದೆ ಬೇಷರತ್ತಾಗಿ ಬಹಿರಂಗ ಕ್ಷಮೆಯಾಚಿಸಬೇಕು. ಅಂಬೇಡ್ಕರ್ ಅವರನ್ನು ದೇಶ ಮಾತ್ರವಲ್ಲದೇ ಇಡೀ ವಿಶ್ವವೇ ಮೆಚ್ಚಿಕೊಂಡು ಅವರ ಆದರ್ಶ ಪಾಲಿಸುತ್ತಿರುವಾಗ ಮನುವಾದ ಚಿಂತನೆಯ ಅಮಿತ್ ಶಾ ಈ ರೀತಿಯ ಸಂಸ್ಕಾರ ರಹಿತವಾಗಿ ಮಾತನಾಡಿರುವುದು ನಾಗರಿಕ ಸಮುದಾಯ ತಲೆ ತಗ್ಗಿಸುವಂತಾಗಿದೆ.

ಶಾ ಸದನದಲ್ಲಿ ಆಡಿರುವ ಮಾತು ಇಡೀ ದೇಶದ ಜನರೇ ಕೇಳಿದ್ದಾರೆ.ಸಂವಿಧಾನದಿಂದ ಸಮಾನತೆ ಭಾತೃತ್ವ ಮತ್ತಿತರ ಹಕ್ಕು ನೀಡಿರುವ ಅಂಬೇಡ್ಕರ್ ಅವರನ್ನು ಬಿಜೆಪಿಗರು, ಸಂಘ ಪರಿವಾರಗಳು ದ್ವೇಷಿಸುತ್ತಿವೆ. ದೇಶದ ಮಹಿಳೆಯರಿಗೆ, ದೀನ, ದಲಿತರಿಗೆ, ಹಿಂದುಳಿದ ಸಮುದಾಯಗಳಿಗೆ ನ್ಯಾಯ ಸಿಕ್ಕಿರುವುದು ಸಂವಿಧಾನ ಶಿಲ್ಪ ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ. ಅಂತಹ ನಾಯಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನಾರ್ಹ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತ ದೊಡ್ಡಮನಿ ಮಾತನಾಡಿ, ಅಮಿತ್ ಶಾ ಅವರೇ ನೀವು ಆಡಿದ ನಿಮ್ಮ ಮಾತಿನಿಂದ ಇಡೀ ದೇಶಕ್ಕೆ ನಿಮ್ಮ ಅಂತರಂಗದ ಅರಿವಾಗಿದೆ. ಅಂಬೇಡ್ಕರ್ ನಮಗೆ ವ್ಯಸನ ಅಲ್ಲ ನಿತ್ಯ ಸ್ಮರಣೆ. ನಮ್ಮ ಉಸಿರು ಇರುವವರೆಗೆ ಹಾಗೂ ಈ ಭೂಮಿ ಮೇಲೆ ಸೂರ್ಯ-ಚಂದ್ರ ಇರುವವರೆಗೆ ಅಂಬೇಡ್ಕರ್ ಸ್ಮರಣೆ ಇರಲಿದೆ. ನಿಮ್ಮ ದುರಹಂಕಾರದ ಮಾತಿಗೆ ನಿಮ್ಮ ಬೆನ್ನ ಹಿಂದೆ ಇರುವ ಚೇಲಾಗಳು ಮೇಜು ಕುಟ್ಟಿ ಸಂಭ್ರಮಿಸಿರಬಹುದು. ಆದರೆ ದೇಶದ ಕೋಟ್ಯಂತರ ಜನ ನಿಮಗೆ ಛೀಮಾರಿ ಹಾಕುತ್ತಿದ್ದಾರೆ ಎನ್ನುವುದು ತಿಳಿದಿರಲಿ ಎಂದು ತರಾಟೆಗೆ ತೆಗೆದುಕೊಂಡರು.

ಮುಖಂಡ ಡಿ.ಕೆ. ಹೊನ್ನಪ್ಪನವರ, ಎಚ್.ಡಿ. ಮಾಗಡಿ, ಮುತ್ತುರಾಜ ಭಾವಿಮನಿ, ಭಾಗ್ಯಶ್ರೀ ಬಾಬಣ್ಣ, ಮಂಜುನಾಥ ಘಂಟಿ, ಬುಡನಶ್ಯಾ ಮಕಾನದಾರ, ಹನಮಂತ ಗೊಜನೂರ ಮಾತನಾಡಿದರು. ಪಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ, ಹೊನ್ನಪ್ಪ ಶಿರಹಟ್ಟಿ, ಸುರೇಶ ಬೀರಣ್ಣವರ, ಗೀತಾ ಬೀರಣ್ಣವರ, ಹಮಿದ ಸನದಿ, ನಜೀರ ಡಂಬಳ, ಮಹಾಂತೇಶ ದಶಮನಿ, ಈರಣ್ಣ ಚವ್ಹಾಣ, ಮಹೇಂದ್ರ ಉಡಚಣ್ಣವರ, ದೇವಪ್ಪ ಲಮಾಣಿ ಸೇರಿದಂತೆ ಅನೇಕರು ಇದ್ದರು.

೧ ಡಿಎಸ್‌ಪಿ, ೩ಸಿಪಿಐ, ೭ ಪಿಎಸ್‌ಐ, ೨ ಡಿಆರ್‌ವ್ಯಾನ್, ೧೧ ಎಎಸ್‌ಐ ಹಾಗೂ ೪೭ ಜನ ಪೊಲೀಸ್ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು. ಬಂದ್ ಕರೆಯಿಂದ ಮಧ್ಯಾಹ್ನ ೨ಗಂಟೆವರೆಗೆ ವ್ಯಾಪಾರಸ್ಥರು ತಮ್ಮ ಅಂಗಡಿ, ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಮುಚ್ಚಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಕ್ಷ ಸಂಘಟನೆಗೆ ಪ್ರಶಿಕ್ಷಣ ಮಹಾಭಿಯಾನ ಪೂರಕ: ರೂಪಾಲಿ ನಾಯ್ಕ
ಯುವ ಪೀಳಿಗೆಗೆ ಸಂಸ್ಕಾರ ಸಂಸ್ಕೃತಿ ಬಗ್ಗೆ ಮಾಹಿತಿ ನೀಡಿ