ಸಿರಿಗೆರೆ: ಗಣರಾಜ್ಯೋತ್ಸವ ಭಾರತಕ್ಕೆ 75 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ಸಂವಿಧಾನದ ಆಶಯವನ್ನು ಎಲ್ಲರಿಗೂ ತಲುಪಿಸುವ ಉದ್ದೇಶದಿಂದ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಚಿತ್ರದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಹೇಳಿದರು.
ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆಯಲ್ಲಿ ಸಂವಿಧಾನ ಜಾಗೃತಿ ಜಾಥಾ ಸ್ತಬ್ಧಚಿತ್ರಗಳು, ಭಾರತದ ಸಂವಿಧಾನ ಪೀಠಿಕೆ, ವಾಚನ, ನ್ಯಾಯ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕುರಿತು ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿಕಲ್ಪನೆ, ಬಸವಣ್ಣ ಅವರ ವಚನಗಳು ಮತ್ತು ಭಾರತ ಸಂವಿಧಾನದಲ್ಲಿ ವಚನಗಳ ಪ್ರಸ್ತುತತೆ, ಜಿಲ್ಲೆಯ ಐತಿಹಾಸಿಕ ಸ್ಥಳ, ಕಲೆ, ಸಂಸ್ಕೃತಿ ಬಿಂಬಿಸುವುದರ ಜೊತೆಗೆ ಸಾಹಿತ್ಯ ದಿಗ್ಗಜರ ಪರಿಚಯ ಮಾಡಿಕೊಡಲಾಗಿದೆ ಎಂದರು.
ಸಿರಿಗೆರೆ ಪಿಡಿಓ ಹನ್ಸಿರಾ ಬಾನು ಮಾತನಾಡಿ, ಸಂವಿಧಾನದ ಮಹತ್ವ ಹಾಗೂ ಮೌಲ್ಯಗಳ ಕುರಿತು ಜಾಗೃತಿ ಮೂಡಿಸುವುದು ಮತ್ತು ರಾಷ್ಟ್ರೀಯ ಏಕತೆಯನ್ನು ಎತ್ತಿಹಿಡಿಯುವ ಉದ್ದೇಶದಿಂದ ಜಾಗೃತಿ ಜಾಥ ನಡೆಯಲಿದೆ ಎಂದರು.ಸಂವಿಧಾನ ಜಾಗೃತಿ ಜಾಥ ರಥಯಾತ್ರೆ ಜ.28ರ ಭಾನುವಾರ ಬೊಮ್ಮೇನಹಳ್ಳಿ, ಆಲಘಟ್ಟ, ಸಿರಿಗೆರೆ, ಅಳಗವಾಡಿ ಕೊಳಹಾಳ್, ಭರಮ ಸಾಗರ ಹಾಗೂ ಕೋಗುಂಡೆ ಗ್ರಾಪಂಗಳಲ್ಲಿ ಸಂಚಾರ ನಡೆಸಿತು. ವಕೀಲ ರಮೇಶ್ ಉಪನ್ಯಾಸ ನೀಡಿ ಸಂವಿಧಾನ ಪ್ರತಿಜ್ಞಾವಿಧಿ ಬೋಧಿಸಿದರು.