ದೇಶದಲ್ಲಿ ಶಾಂತಿ ನೆಲೆಸಲು ಸೌಹಾರ್ದತೆಯ ಸಹಬಾಳ್ವೆಯ ಚಿಂತನೆಗಳು ಗಟ್ಟಿಯಾಗಿ ನೆಲೆಯೂರಬೇಕಾಗಿದೆ. ಸಾಮರಸ್ಯದ ಬದುಕಿನಿಂದ ಮಾತ್ರ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಸಾಧ್ಯವಿದೆ.
ಬಳ್ಳಾರಿ: ಸೌಹಾರ್ದ ಪರಂಪರೆ ಅಭಿಯಾನ ಅಂಗವಾಗಿ ಸೌಹಾರ್ದ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ನಗರದಲ್ಲಿ ಮಂಗಳವಾರ ಸೌಹಾರ್ದ ಜಾಥಾ ನಡೆಸಿದರು.
ಜಾಥಾದಲ್ಲಿ ಭಾಗವಹಿಸಿದ್ದ ಕ್ರೈಸ್ತ ಧರ್ಮಗುರು ಐವನ್ ಪಿಂಟೋ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಹಾಗೂ ಸಿಐಟಿಯು ಕಾರ್ಮಿಕ ಸಂಘಟನೆ ಮುಖಂಡ ಜೆ. ಸತ್ಯಬಾಬು ಅವರು ಸೌಹಾರ್ದ ಜಾಥಾದ ಉದ್ದೇಶ ಕುರಿತು ಮಾತನಾಡಿದರು.
ದೇಶದಲ್ಲಿ ಶಾಂತಿ ನೆಲೆಸಲು ಸೌಹಾರ್ದತೆಯ ಸಹಬಾಳ್ವೆಯ ಚಿಂತನೆಗಳು ಗಟ್ಟಿಯಾಗಿ ನೆಲೆಯೂರಬೇಕಾಗಿದೆ. ಸಾಮರಸ್ಯದ ಬದುಕಿನಿಂದ ಮಾತ್ರ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಸಾಧ್ಯವಿದೆ. ಹೀಗಾಗಿ ಮಾನವ ಸಂಬಂಧಗಳನ್ನು ಗಟ್ಟಿಗೊಳಿಸುವ ಮತ್ತು ಭಾವೈಕ್ಯತೆ ಸಾರುವ ಚಟುವಟಿಕೆಗಳನ್ನು ನಿರಂತರಗೊಳಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಲೇಖಕಿ ಎನ್.ಡಿ. ವೆಂಕಮ್ಮ, ಪಿ.ಆರ್. ವೆಂಕಟೇಶ್ , ಹಿರಿಯ ವಕೀಲ ಕೋಟೇಶ್ವರರಾವ್, ಕಾಂಗ್ರೆಸ್ ಮುಖಂಡ ವೆಂಕಟೇಶ್ ಹೆಗಡೆ ಮಾತನಾಡಿದರು.
ಇಲ್ಲಿನ ಗಾಂಧಿ ಭವನದಿಂದ ಹೊರಟ ಸೌಹಾರ್ದ ಜಾಥಾವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ರೈಲ್ವೆ ನಿಲ್ದಾಣದ ಬಳಿಯ ಮಹಾತ್ಮ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ಸೌಹಾರ್ದ ಮಾನವ ಸರಪಳಿ ನಿರ್ಮಿಸಲಾಯಿತು. ಮೋತಿ ವೃತ್ತದಲ್ಲಿರುವ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಜಾಥಾವನ್ನು ಮುಕ್ತಾಯಗೊಳಿಸಲಾಯಿತು.
ಕರ್ನಾಟಕ ಪ್ರಾಂತ ರೈತ ಸಂಘದ ವಿ.ಎಸ್. ಶಿವಶಂಕರ್, ಸಂಗನಕಲ್ಲು ಕೃಷ್ಣ, ಕೊಳಗಲ್ಲುಎರಿಸ್ವಾಮಿ, ಬಾದಾಮಿ ಶಿವಲಿಂಗ ನಾಯಕ, ಗ್ರಾಮೀಣ ಬ್ಯಾಂಕ್ನ ನಿವೃತ್ತ ಅಧಿಕಾರಿ ಗಂಗಣ್ಣ ಪತ್ತಾರ್, ಜಮಾತೆ ಇಸ್ಲಾಂನ ಡಾ. ಜೈನುಲ್ಲಾ, ವಕ್ಫ್ ಬೋರ್ಡ್ ಅಧ್ಯಕ್ಷ ಹುಮಾಯೂನ್ ಖಾನ್, ಮಹ್ಮದ್ ರಫೀ, ನದಾಫ್, ಜೈನ ಸಮಾಜದ ಘನಿ ಹರಿಚರಣ್ ಸೇರಿದಂತೆ ಹಿಂದೂ, ಕ್ರೈಸ್ತ, ಮುಸಲ್ಮಾನ ಮತ್ತು ಜೈನ ಸಮಾಜದ ಹಾಗೂ ದಲಿತಪರ ಮತ್ತು ಕನ್ನಡಪರ ಕಾರ್ಮಿಕ ರೈತ ಸಂಘಟನೆಗಳ ಪ್ರಮುಖರು ಜಾಥಾದಲ್ಲಿ ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.