ಕನ್ನಡಪ್ರಭ ವಾರ್ತೆ ವಿಜಯಪುರ
ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದ್ದು, ಇಂಡಿ ಭಾಗದಲ್ಲಿ ಅತೀ ಹೆಚ್ಚು ಲಿಂಬೆ ಬೆಳೆಗಾರರಿದ್ದಾರೆ. ರೈತರ ಲಿಂಬೆ ಗಿಡಗಳನ್ನು ರಕ್ಷಿಸಲು ₹೫೦ ಲಕ್ಷಗಳ ಅನುದಾನ ಬಿಡುಗಡೆಗೆ ಕ್ರಮವಹಿಸುತ್ತೇನೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಲಿಂಬೆ ಅಭಿವೃದ್ಧಿ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂಡಿ ಭಾಗದಲ್ಲಿ ನೀರಿನ ಮಟ್ಟ ಕುಸಿದಿದ್ದು ರೈತರು ನೀರಿನ ಅಭಾವದಿಂದ ಲಿಂಬೆ ಬೆಳೆಗಳನ್ನು ರಕ್ಷಿಸಲು ತುಂಬಾ ತೊಂದರೆ ಅನುಭವಿಸುತ್ತಿದ್ದು, ಅಧಿಕಾರಿಗಳು ರೈತರ ಜಮೀನುಗಳಿಗೆ ಖುದ್ದಾಗಿ ಭೇಟಿ ನೀಡಿ ರೈತರ ನಿಜ ಸ್ಥಿತಿ ಅರಿಯಬೇಕು. ನಿಖರ ಮಾಹಿತಿ ಪಡೆದು ಲಿಂಬೆ ಬೆಳೆ ರಕ್ಷಣೆ ಮುಂದಾಗಬೇಕು. ಅಧಿಕಾರಿಗಳು ಪಡೆದ ಮಾಹಿತಿಯನ್ನು ಲಿಂಬೆ ಅಭಿವೃದ್ಧಿ ಮಂಡಳಿ ವತಿಯಿಂದ ಸರ್ಕಾರಕ್ಕೆ ವರದಿಯನ್ನು ಕಳುಹಿಸಿ ತಕ್ಷಣ ಕ್ರಮ ವಹಿಸುವಂತೆ ಜಿಲ್ಲಾಡಳಿತ ಹಾಗೂ ನಾವುಗಳು ಕೂಡಿ ₹೫೦ ಲಕ್ಷ ಅನುದಾನ ಬಿಡುಗಡೆಗೆ ಕ್ರಮ ವಹಿಸೋಣ ಎಂದರು.ಏಪ್ರಿಲ್ ಹಾಗೂ ಮೇ ಮಾಹೆಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗುವುದು. ಕಾರಣ ಈಗಿನಿಂದಲೇ ರೈತರ ಸಹಾಯಕ್ಕೆ ಮುಂದಾಗಬೇಕು. ರೈತರು ಬೆಳೆದ ಲಿಂಬೆ ಬೆಳೆಗಳನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳೋಣ. ಒಮ್ಮೆ ಗಿಡ ಒಣಗಿದರೆ ಮತ್ತೆ ಲಿಂಬೆ ಬೆಳೆಯಬೇಕಾದರೆ ಸುಮಾರು ೫ರಿಂದ ೬ ವರ್ಷಗಳ ಕಾಲ ಕಾಯಬೇಕು. ಲಿಂಬೆ ಈ ಭಾಗದ ರೈತರ ಜೀವನಾಡಿಯಾಗಿದೆ. ಈ ಭಾಗದ ಲಿಂಬೆಗೆ ವಿಶೇಷ ಗುಣಮಟ್ಟದ ಹೊಂದಿದ್ದು, ಲಿಂಬೆ ಬೆಳೆಗಾರರಿಗೆ ಒಳ್ಳೆಯ ಮಾರುಕಟ್ಟೆ ಸೌಲಭ್ಯ ಉತ್ತಮ ದರವನ್ನು ಒದಗಿಸಲು ಕ್ರಮ ವಹಿಸಬೇಕು. ಇಂಡಿ ಕಚೇರಿಯಲ್ಲಿ ಸಿಬ್ಬಂದಿಗಳ ಕೊರತೆ ಇದ್ದು, ಆದಷ್ಟು ಬೇಗ ಬೇರೆ ಬೇರೆ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ನಿಯೋಜಿಸಬೇಕು ಎಂದರು.
ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ನಾಗಠಾಣ ಹಾಗೂ ಜಂಬಗಿ ಕೆರೆಗಳಿಗೆ ನೀರು ಹರಿಸಿದರೆ ಈ ಭಾಗದ ಜನ- ಜಾನುವಾರಗಳಿಗೆ ನೀರಿನ ತೊಂದರೆ ನೀಗಿಸಬಹುದಾಗಿದೆ. ಅಧಿಕಾರಿಗಳು ಕ್ರಮ ವಹಿಸುವಂತೆ ಕೋರಿದರು.ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾತನಾಡಿ, ಈಗಾಗಲೇ ಕುಡಿಯುವ ನೀರಿನ ಕುರಿತು ಸಾಕಷ್ಟು ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅತೀ ತೊಂದರೆಗೊಳಗಾದ ಗ್ರಾಮಗಳಿಗೆ ಟ್ಯಾಂಕರ್ಗಳ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಜನ-ಜಾನುವಾರುಗಳಿಗೆ ನೀರಿನ ತೊಂದರೆಯಾಗದಂತೆ ಹೆಚ್ಚಿನ ನಿಗಾ ವಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ, ಇಂಡಿ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ ಮುಂತಾದವರು ಇದ್ದರು.--
ಬಾಕ್ಸ್ನೀರಿನ ಸೌಲಭ್ಯ ಒದಗಿಸಲು ಪ್ರಥಮಾದ್ಯತೆ ನೀಡಿ
ಜಿಲ್ಲೆಯಲ್ಲಿ ಅತೀ ನೀರಿನ ತೊಂದರೆ ಅನುಭವಿಸುತ್ತಿರುವ ಗ್ರಾಮಗಳಿಗೆ, ಜನ ಜಾನುವಾರುಗಳಿಗೆ ನೀರಿನ ಸೌಲಭ್ಯ ಒದಗಿಸಲು ಪ್ರಥಮ ಆದ್ಯತೆ ನೀಡಬೇಕು ಎಂಡು ಶಾಸಕರ ಯಶವಂತರಾಯಗೌಡ ಪಾಟೀಲ ಸೂಚಿಸಿದರು.ಕುಡಿಯುವ ನೀರಿನ ವಿಷಯದಲ್ಲಿ ಜಿಲ್ಲಾಡಳಿತವು ತಮ್ಮದೇ ಆದ ನಿರ್ಣಯಗಳನ್ನು ಪಾಲಿಸಬೇಕು. ತಾರತಮ್ಯ ಆಗದಂತೆ ನೋಡಿಕೊಳ್ಳಬೇಕು. ಕಟ್ಟಕಡೆಯ ವ್ಯಕ್ತಿಗೂ ನೀರು ದೊರಕಿಸಿ ಕೊಡುವಂತೆ ಕ್ರಮ ವಹಿಸಬೇಕು. ತಡವಲಗ, ಅಥರ್ಗಾ ಹಾಗೂ ನಿಂಬಾಳ ಕೆರೆಗಳಿಗೆ ನೀರು ಹರಿಸಿದಲ್ಲಿ ಈ ಭಾಗದ ಜನ- ಜಾನುವರುಗಳಿಗೆ ಕುಡಿಯುವ ನೀರಿನ ಅನುಕೂಲವಾಗಲಿದೆ ಎಂದು ಹೇಳಿದರು.