ಮೆಡಿಕಲ್ ಕಾಲೇಜು ಸಮಾಧಾನ; ಭದ್ರೆಗೆ ಬೇಕು ಅನುದಾನ

KannadaprabhaNewsNetwork |  
Published : Feb 15, 2024, 01:16 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್ (ಬಜೆಟ್ ನಿರೀಕ್ಷೆ)   | Kannada Prabha

ಸಾರಾಂಶ

ಕಳೆದ ಬಜೆಟ್‌ನಲ್ಲಿ ಘೋಷಣೆಯಾಗಿದ್ದ ಮೆಡಿಕಲ್ ಕಾಲೇಜು ಕಟ್ಟಡ ನಿರ್ಮಾಣದ ಕಾಮಗಾರಿ ಆರಂಭ. ಈ ಬಾರಿಯ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಬಿಟ್ರೆ ಹೊಸ ನಿರೀಕ್ಷೆಗಳೇನೂ ಇಲ್ಲ.

ಕನ್ನಡಪ್ರಭವಾರ್ತೆ, ಚಿತ್ರದುರ್ಗ

ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮತ್ತೊಂದು ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಕಳೆದ ವರ್ಷ ಮಂಡನೆಯಾದ ಎರಡು ಬಜೆಟ್ ಗಳಲ್ಲಿ (ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ) ಚಿತ್ರದುರ್ಗ ಜಿಲ್ಲೆಗೆ ಅಂತಹ ವಿಶೇಷ ಕೊಡುಗೆಗಳೇನೂ ಇರಲಿಲ್ಲ. ಹಳೆಯವು ನೋಡಿ ಜನತೆ ಕೂಡಾ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಹಿಂದೊಮ್ಮೆ ಘೋಷಿಸಿದ ಯೋಜನೆಗಳ ಮುಗಿಸಿ ಸಾಕು ಎಂಬಷ್ಟರ ಮಟ್ಟಿಗೆ ಹತಾಶೆಗೆ ಮರಳಿದ್ದರು.

ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ ನಲ್ಲಿ ಚಿತ್ರದುರ್ಗದ ಸರ್ಕಾರಿ ಮೆಡಿಕಲ್ ಕಾಲೇಜಿಗೆ 500 ಕೋಟಿ ರುಪಾಯಿ ಅನುದಾನದ ಭರವಸೆ ನೀಡಿದ್ದರು. ಮೆಡಿಕಲ್ ಕಾಲೇಜು ಕಟ್ಟಡ ನಿರ್ಮಾಣದ ಕಾಮಗಾರಿ ಅರಂಭವಾಗಿದೆ. ಮೊದಲ ವರ್ಷಕ್ಕೆ 150 ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗಿದ್ದು ಬಹುದಿನಗಳ ನಿರೀಕ್ಷೆ ಫಲ ನೀಡಿದಂತಾಗಿದೆ. ರಾಜ್ಯದಲ್ಲಿ ಹೊಸದಾಗಿ 9 ಕೈಗಾರಿಕಾ ವಸಾಹತುಗಳ ಸ್ಥಾಪನೆ ಮಾಡುವುದಾಗಿ ಬಸವರಾಜ ಬೊಮ್ಮಾಯಿ ತಿಳಿಸಿದ್ದು ಅದರಲ್ಲಿ ಚಳ್ಳಕೆರೆ ಹಾಗೂ ಮೊಳಕಾಲ್ಮುರು ಸೇರಿತ್ತು. ಈ ಘೋಷಣೆ ಹಾಗೆಯೇ ಉಳಿದಿದೆ.

ಸಿಎಂ ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾದ ನಂತರ ಮಂಡಿಸಿದ ಬಜೆಟ್ ನಲ್ಲಿ ಚಿತ್ರದುರ್ಗ ಜಿಲ್ಲೆಗೆ ಎರಡು ಪ್ರಮುಖ ವಿಷಯಗ ಪ್ರಸ್ತಾಪಿಸಲಾಗಿತ್ತು. ಕಣ್ಣು ಚಿಕಿತ್ಸೆಗೆ ಸಂಬಂಧಿಸಿದಂತೆ ಆಶಾಕಿರಣ ಎಂಬ ಹೊಸ ಯೋಜನೆ ಘೋಷಿಸಿ ಆರೇಳು ಜಿಲ್ಲೆಗಳ ವ್ಯಾಪ್ತಿ ನಿಗದಿ ಮಾಡಿ 21 ಕೋಟಿ ರುಪಾಯಿ ಅನುದಾನ ಕಾಯ್ದಿರಿಸಲಾಗಿತ್ತು. ಆಶಾಕಿರಣಯೋಜನೆ ಜಾರಿಯಾಗಿದೆ. ರಾಜ್ಯದ 9 ರೇಲ್ವೆ ಯೋಜನೆಗಳಿಗೆ 8600 ಕೋಟಿ ರುಪಾಯಿ ಅನುದಾನದ ಭರವಸೆ ನೀಡಲಾಗಿತ್ತು. ಇದು ಕೇವಲ ಭರವೆಸೆಯಾಗಿಯೇ ಉಳಿದಿದೆ. ಹಾಗಾಗಿ ಕಳೆದ ವರ್ಷದ ಬಜೆಟ್ ಘೋಷಣೆಗಳು ಅರೆಬರೆಯಾಗಿವೆ. ಘೋಷಣೆ ನೆನಪು ಮಾಡಿಕೊಳ್ಳುವಲ್ಲಿಯೂ ಸರ್ಕಾರ ಮುಂದಾಗಿಲ್ಲ.ಈ ಬಾರಿಯ ನಿರೀಕ್ಷೆ

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಅನುದಾನದ ಕೊರತೆ ಎದುರಿಸುತ್ತಿದೆ. ಇದು ಹಳೇ ಯೋಜನೆಯಾದ್ದರಿಂದ ಬಜೆಟ್ ಘೋಷಣೆ ವ್ಯಾಪ್ತಿಗೆ ಬಾರದು. ಆದರೆ ಜಲ ಸಂಪನ್ಮೂಲ ಇಲಾಖೆಗೆ ಕಾಯ್ದಿರಿಸುವ ಅನುದಾದನಲ್ಲಿ ಹೆಚ್ಚಿನ ಪ್ರಮಾಣವ ಭದ್ರಾ ಮೇಲ್ದಂಡೆಗೆ ವಿನಿಯೋಗಿಸುವ, ಕಾಲಮಿತಿಯಲ್ಲಿ ಮುಗಿಸುವ ಭರವಸೆ ವ್ಯಕ್ತವಾಗಬೇಕಾಗಿದೆ.

ಭದ್ರಾ ಮೇಲ್ದಂಡೆಗೆ ಕೇಂದ್ರ ಸರ್ಕಾರ 5300 ಕೋಟಿ ರುಪಾಯಿ ನೆರವನ್ನು ಕಳೆದ ಬಜೆಟ್ ನಲ್ಲಿ ಘೋಷಿಸಿದ್ದು ಇದುವರೆಗೂ ಬಿಡುಗಡೆ ಮಾಡಿಲ್ಲ. ಕೇಂದ್ರದ ಅನುದಾನದ ನಿರೀಕ್ಷೆಯಲ್ಲಿ ರಾಜ್ಯ ಸರ್ಕಾರ ಇದ್ದು ಈ ಬಾರಿಯೂ ಭದ್ರಾ ಮೇಲ್ದಂಡೆಯ ನಿರ್ಲಕ್ಷಿಸುವ ಸಾಧ್ಯತೆಗಳಿವೆ. ಹಾಗಾಗಿ ವಿಶೇಶ್ವರಯ್ಯ ನೀರಾವರಿ ನಿಗಮಕ್ಕೆ ಮೀಸಲಾದ ಅನುದಾನದಲ್ಲಿ ಸಿಂಹಪಾಲು ಭದ್ರೆಗೆ ಇರಲಿ ಎಂದು ಜನತೆ ನಿರೀಕ್ಷಿಸುತ್ತಿದ್ದಾರೆ.

ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗಕ್ಕೆ ರಾಜ್ಯ ಸರ್ಕಾರ ಶೇ.50 ರಷ್ಟು ಅನುದಾನ ನೀಡುವುದಾಗಿ ಘೋಷಿಸಿರುವುದಿಂದ ರಾಜ್ಯ ತನ್ನ ಪಾಲಿನ ಅನುದಾನವ ಕಾಯ್ದಿರಿಸಬೇಕು. ಕಳೆದ ಬಾರಿ 9 ರೇಲ್ವೆ ಯೋಜನೆಗಳಿಗೆ ಕಾಯ್ದಿರಿಸಲಾದ ಅನುದಾನ ಏನಾಯಿತೆಂಬ ಬಗ್ಗೆ ಸುಳಿವುಗಳಿಲ್ಲ.

ಚಳ್ಳಕೆರೆ ತಾಲೂಕಿನ ಜನತೆ ಪ್ರತಿ ವರ್ಷ ಬರ ಎದುರಿಸಿ ಶೇಗಾ ಬೆಳೆ ನಷ್ಟ ಮಾಡಿಕೊಳ್ಳುತ್ತಿದ್ದಾರೆ. ತಾಲೂಕಿನ ರೈತರ ಪುನಶ್ಚೇತನಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂಬುದು ಹಲವು ದಿನಗಳ ಬೇಡಿಕೆ. ಇದುವರೆಗೂ ಸರ್ಕಾರ ಈ ಮನವಿ ಕೇಳಿಸಿಕೊಂಡಿಲ್ಲ. ಈ ಬಾರಿಯಾದರೂ ಬಜೆಟ್ ಘೋಷಣೆಯಾದೀತೆ ಎಂಬ ನಿರೀಕ್ಷೆಯಲ್ಲಿದ್ದಾರೆ ರೈತರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಟೋ ಚಾಲಕರಿಗೆ 20000 ಪರಿಹಾರಕ್ಕೆ ಆಗ್ರಹ
ನಿರ್ಲಕ್ಷ್ಯ ಚಾಲನೆಯಿಂದ ಬೈಕ್‌ಗೆಡಿಕ್ಕಿ: ಟೆಕ್ಕಿಗೆ ಹೈಕೋರ್ಟ್‌ ತರಾಟೆ