ಹೆಬ್ಬಾಳದಲ್ಲಿ ಸರ್ಕಾರಿ ಜಾಗ ಬೇಕು ಎಂದ ಮೆಟ್ರೋ : ಖಾಸಗಿ ಕಂಪನಿ ಬಳಿ ಕೇಳಿ ಅನ್ನುತ್ತಿದೆ ಸರ್ಕಾರ

KannadaprabhaNewsNetwork |  
Published : Oct 27, 2024, 02:45 AM ISTUpdated : Oct 27, 2024, 08:19 AM IST
ಮೆಟ್ರೋ | Kannada Prabha

ಸಾರಾಂಶ

ಹೆಬ್ಬಾಳದಲ್ಲಿ ಕೆಐಎಡಿಬಿ ವಶದಲ್ಲಿರುವ ಜಾಗ ನೀಡುವಂತೆ ಮೆಟ್ರೋ ಕೇಳಿದೆ. ಆದರೆ ಈ ಜಾಗ ಪಡೆಯಲು ಖಾಸಗಿ ಕಂಪನಿಯನ್ನು ಕೇಳಿ ಎಂದು ಸರ್ಕಾರ ಹೇಳಿರುವುದು ರಿಯಲ್‌ ಎಸ್ಟೇಲ್‌ ದಂಧೆಯ ಶಂಕೆ ಸೃಷ್ಟಿಸಿದೆ.

 ಬೆಂಗಳೂರು : ನಮ್ಮ ಮೆಟ್ರೋ 3ನೇ ಹಂತದ ಯೋಜನೆಗಾಗಿ ಬೆಂಗಳೂರು ಮೆಟ್ರೋ ರೈಲು ನಿಗಮವು ಕೇಳಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವಶದಲ್ಲಿರುವ 45 ಎಕರೆಯನ್ನು ವರ್ಗಾಯಿಸಲು ಸರ್ಕಾರ ಹಿಂದೇಟು ಹಾಕುತ್ತಿದೆಯೇ? ಇದರ ಹಿಂದೆ ರಿಯಲ್‌ ಎಸ್ಟೇಟ್ ಲಾಬಿಯಿದೆಯೆ?

ಇಂಥದ್ದೊಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಹೆಬ್ಬಾಳದ ಭೂಮಿಯನ್ನು ಎರಡು ದಶಕಗಳ ಹಿಂದೆ ಕೆಐಎಡಿಬಿ ಭೂಸ್ವಾದೀನ ಮಾಡಿಕೊಂಡಿದ್ದು ಖಾಸಗಿ ಕಂಪನಿಯ ಸಲುವಾಗಿ. ಆದರೆ, ಇಲ್ಲಿನ್ನೂ ಕಂಪನಿ ಯಾವುದೇ ಚಟುವಟಿಕೆ ನಡೆಸುತ್ತಿಲ್ಲ. ಹೀಗಾಗಿ ಬಿಎಂಆರ್‌ಸಿಎಲ್‌ ತನಗೆ ಈ ಭೂಮಿ ಹಸ್ತಾಂತರ ಮಾಡುವಂತೆ ಕೋರಿದೆ. ಇದಕ್ಕಾಗಿ ಎಕರೆಗೆ ತಲಾ ₹12.10 ಕೋಟಿಯಂತೆ ಒಟ್ಟು ₹551.15 ಕೋಟಿ ಪಾವತಿಸುವುದಾಗಿ ಹೇಳಿತ್ತು.

ಈ ಸಂಬಂಧ ಈಚೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ನೇತೃತ್ವದಲ್ಲಿ ಸಭೆ ನಡೆಯಿತು. ಈ ವೇಳೆ ಬಿಎಂಆರ್‌ಸಿಎಲ್‌ಗೆ ನೇರವಾಗಿ ಕಂಪನಿಯ ಜೊತೆ ಸಮಾಲೋಚಿಸಿ ಭೂಮಿಯನ್ನು ಪಡೆದುಕೊಳ್ಳುವ ಪ್ರಯತ್ನ ಮಾಡಲು ಹೇಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಸರ್ಕಾರದ ವಶದಲ್ಲಿ ಭೂಮಿ ಇದ್ದರೂ ಕೂಡ ನೇರವಾಗಿ ಭೂಮಿ ವರ್ಗಾಯಿಸುವ ತೀರ್ಮಾನಕ್ಕೆ ಬರುವ ಬದಲು ಬಿಎಂಆರ್‌ಸಿಎಲ್‌ ಹೆಗಲಿಗೆ ಹೊಣೆ ಹೊರಿಸಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳು ಹುಟ್ಟುವಂತೆ ಮಾಡಿದೆ.

ಹೆಬ್ಬಾಳ ಮತ್ತು ಹೆಬ್ಬಾಳ ಅಮಣಿಕೆರೆ ಗ್ರಾಮದ 55 ಎಕರೆಯನ್ನು ಕೆಐಎಡಿಬಿ ವಶಪಡಿಸಿಕೊಂಡಿತ್ತು. 2000 ಇಸವಿಯಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಲೇಕ್‌ವ್ಯೂ ಟೂರಿಸಂ ಕಾರ್ಪೋರೇಷನ್‌ ಇಲ್ಲಿ ಪ್ರವಾಸೋದ್ಯಮ ಪ್ರಾಜೆಕ್ಟ್‌ ಸ್ಥಾಪಿಸುವುದಾಗಿ ಹೇಳಿತ್ತು. ಆದರೆ ಆ ಯೋಜನೆ ಸಾಧ್ಯವಾಗಿಲ್ಲ. ಅಲ್ಲದೆ, ವಶಪಡಿಸಿಕೊಂಡ ಭೂಮಿಗಾಗಿ ಭೂಮಾಲೀಕರಿಗೆ ಪರಿಹಾರ ಪಾವತಿಸಿಲ್ಲ.

ಹೀಗಾಗಿ ಬಿಎಂಆರ್‌ಸಿಎಲ್‌ ಈ ಮೊದಲು 6712.97 ಚ.ಮೀ. ವಿಸ್ತೀರ್ಣ ಜಾಗವನ್ನು ಕೇಳಿತ್ತು. ಅದರಂತೆ ಕೆಐಎಡಿಬಿ ನಿಗದಿಸಿದ್ದ ಎಕರೆಗೆ ₹12.10 ಕೋಟಿಯಂತೆ ಮೊತ್ತ ಪಾವತಿಸಿತ್ತು. ಅಗತ್ಯ ಭೂಮಿಯನ್ನು ಬಿಎಂಆರ್‌ಸಿಎಲ್‌ಗೆ ಕೆಐಎಡಿಬಿ ಹಸ್ತಾಂತರಿಸಿದೆ. ಮುಂದುವರಿದು ಇಲ್ಲಿ ಮೆಟ್ರೋ 3ನೇ ಹಂತದ ಯೋಜನೆಗಾಗಿ 45 ಎಕರೆಯನ್ನು ತನಗೆ ನೀಡುವಂತೆ ಕಳೆದ ಮಾರ್ಚ್‌ನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿತ್ತು.ಸರ್ಕಾರ ಹೇಳೊದೇನು?

ತಾಂತ್ರಿಕವಾಗಿ ಭೂಮಿ ಕೆಐಎಡಿಬಿ ಬಳಿಯಿದೆ. ಆದರೆ, ಭೂಮಿಯನ್ನು ಸ್ವಾಧೀನ ಮಾಡಿಕೊಂಡಿದ್ದು, ಕೈಗಾರಿಕಾ ವಸಾಹತು ನಿರ್ಮಾಣಕ್ಕಲ್ಲ, ಬದಲಾಗಿ ಲೇಕ್‌ವ್ಯೂ ಕಂಪನಿಗಾಗಿ. ಈಗ ಸರ್ಕಾರವೇ ನೇರವಾಗಿ ಭೂಮಿ ಹಸ್ತಾಂತರಕ್ಕೆ ಮುಂದಾದರೆ ವಿಚಾರ ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆಯಿದೆ. ಆಗ 10-20 ವರ್ಷ ಯಾವುದೇ ಬೆಳವಣಿಗೆ ಆಗದೇ ಮೆಟ್ರೋ ಯೋಜನೆಗೆ ಹಿನ್ನಡೆ ಆಗಬಹುದು. ಹೀಗಾಗಿ ಬಿಎಂಆರ್‌ಸಿಎಲ್‌ ಕಂಪನಿ ಜೊತೆ ಸಮಾಲೋಚಿಸಿ ಭೂಮಿ ಪಡೆದು ಹಣ ಪಾವತಿಸಬಹುದು ಎಂಬ ಸಲಹೆ ನೀಡಲಾಗಿದೆ.

ಈ ಬಗ್ಗೆ ‘ಕನ್ನಡಪ್ರಭ’ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕರನ್ನು ಸಂಪರ್ಕಿಸಿದಾಗ ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಮೆಟ್ರೋದ ಯಾವ್ಯಾವ ಯೋಜನೆಗೆ ಜಾಗ ಬಳಕೆ?

ಹೆಬ್ಬಾಳದಲ್ಲಿ ಜೆ.ಪಿ.ನಗರದ 4ನೇ ಹಂತದಿಂದ ಕೆಂಪಾಪುರ ಸಂಪರ್ಕಿಸುವ ಮೆಟ್ರೋ 3ನೇ ಹಂತದ (ಕಿತ್ತಳೆ ಮಾರ್ಗ) ಹೆಬ್ಬಾಳ ನಿಲ್ದಾಣ ನಿರ್ಮಾಣ ಮಾಡಲು ಬಿಎಂಆರ್‌ಸಿಎಲ್‌ ನಿರ್ಧರಿಸಿದೆ. ಇದಲ್ಲದೆ, ಕೆ.ಆರ್‌.ಪುರಂ - ಕೆಐಎ ಸಂಪರ್ಕಿಸುವ 2ನೇ ಹಂತದ (ನೀಲಿ ಮಾರ್ಗ) ನಿಲ್ದಾಣ ಹಾಗೂ ಈಚೆಗಷ್ಟೇ ಕೇಂದ್ರದ ನಗರಾಭಿವೃದ್ಧಿ ಇಲಾಖೆ ಒಪ್ಪಿಗೆ ಪಡೆದ ಸರ್ಜಾಪುರ- ಹೆಬ್ಬಾಳ ಸಂಪರ್ಕಿಸುವ (ಕೆಂಪು ಮಾರ್ಗ) ಮಾರ್ಗದ ನಿಲ್ದಾಣ ನಿರ್ಮಿಸುವ ಉದ್ದೇಶ ಹೊಂದಿದೆ. ಜತೆಗೆ ಇಲ್ಲಿ ಉಪನಗರ ರೈಲು ಯೋಜನೆಯ ನಿಲ್ದಾಣವನ್ನೂ ನಿರ್ಮಿಸುವ ಪ್ರಸ್ತಾಪವಿದೆ. ಜೊತೆಗೆ ಮಲ್ಟಿಲೇವಲ್‌ ಕಾರ್‌ ಪಾರ್ಕಿಂಗ್‌, ಮಲ್ಟಿ ಮಾಡಲ್‌ ಹಬ್, ಬಸ್ ನಿಲ್ದಾಣ, ಮೆಟ್ರೋದ ಚಿಕ್ಕ ಡಿಪೋವನ್ನು ಕೂಡ ನಿರ್ಮಿಸುವ ಪ್ರಸ್ತಾಪವಿದೆ. ಇವೆಲ್ಲದರಿಂದ ಹೆಬ್ಬಾಳ ಪ್ರಮುಖ ಟ್ರಾನ್ಸ್‌ಪೋರ್ಟ್‌ ಹಬ್‌ ಆಗಲಿದೆ ಎಂದು ಸಾರಿಗೆ ತಜ್ಞರು ಹೇಳುತ್ತಾರೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ