ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯಾಗಿಸಬೇಕು: ಅಪ್ಪಚ್ಚು ರಂಜನ್

KannadaprabhaNewsNetwork | Updated : Mar 14 2024, 02:02 AM IST

ಈ ಬಾರಿ ತಾನು ಕೂಡ ಸ್ಪರ್ಧೆಗೆ ಆಕಾಂಕ್ಷಿಯಾಗಿದ್ದೆ. ದೆಹಲಿಗೆ ಕೂಡ ತನ್ನ ಬೇಡಿಕೆ ತಲುಪಿತ್ತು. ಕೊಡಗಿಗೆ ಈ ಬಾರಿ ಸಂಸದ ಸ್ಥಾನದ ಅವಕಾಶ ನೀಡುವ ಮೂಲಕ ಕೊಡಗಿಗೆ ನ್ಯಾಯ ಒದಗಿಸಿ ಎಂದು ಕೋರಿದ್ದೆ. ಈಗ ಮೈಸೂರು ರಾಜ ವಂಶಸ್ಥ ಯದುವೀರ್ ಅವರನ್ನು ಅಭ್ಯರ್ಥಿಯಾಗಿ ಮಾಡುವ ಮೂಲಕ ಅವರನ್ನು ರಾಜಕೀಯ ಪ್ರವೇಶಕ್ಕೆ ಸಜ್ಜುಗೊಳಿಸಲಾಗಿದೆ ಎಂದು ಮಾಜಿ ಶಾಸಕ ಅಪ್ಪಚ್ಚು ರಂಜನ್ ಪ್ರತಿಕ್ರಿಯೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ಜನತೆ ಮುಂದಾಗಬೇಕು. ಇದಕ್ಕಾಗಿ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರನ್ನು ಬೆಂಬಲಿಸಬೇಕು ಎಂದು ಮಾಜಿ ಶಾಸಕ ಎಂ. ಪಿ. ಅಪ್ಪಚ್ಚು ರಂಜನ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ತಾನು ಕೂಡ ಸ್ಪರ್ಧೆಗೆ ಆಕಾಂಕ್ಷಿಯಾಗಿದ್ದೆ. ದೆಹಲಿಗೆ ಕೂಡ ತನ್ನ ಬೇಡಿಕೆ ತಲುಪಿತ್ತು. ಕೊಡಗಿಗೆ ಈ ಬಾರಿ ಸಂಸದ ಸ್ಥಾನದ ಅವಕಾಶ ನೀಡುವ ಮೂಲಕ ಕೊಡಗಿಗೆ ನ್ಯಾಯ ಒದಗಿಸಿ ಎಂದು ಕೋರಿದ್ದೆ. ಈಗ ಮೈಸೂರು ರಾಜ ವಂಶಸ್ಥ ಯದುವೀರ್ ಅವರನ್ನು ಅಭ್ಯರ್ಥಿಯಾಗಿ ಮಾಡುವ ಮೂಲಕ ಅವರನ್ನು ರಾಜಕೀಯ ಪ್ರವೇಶಕ್ಕೆ ಸಜ್ಜುಗೊಳಿಸಲಾಗಿದೆ ಎಂದರು. ವೈಯಕ್ತಿಕವಾಗಿ ತನಗೆ ಸ್ಪರ್ಧಾ ಅವಕಾಶ ತಪ್ಪಿದ ಬಗ್ಗೆ ಬೇಸರ ಇದ್ದರೂ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲೇಬೇಕು ಎಂಬ ಛಲದಿಂದ ತಾನು ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿ ಇರುವ ಯದುವೀರ್ ಅವರನ್ನು ಬೆಂಬಲಿಸಿ, ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲು ಕಾರ್ಯಕರ್ತರ ಜೊತೆ ಸೇರಿ ಶ್ರಮಿಸುವುದಾಗಿ ಅಪ್ಪಚ್ಚು ರಂಜನ್ ತಿಳಿಸಿದರು.

ಜನಸಾಮಾನ್ಯರಿಗೆ ಕೈ ತಲುಪುವ ರೀತಿಯಲ್ಲಿ ಉತ್ತಮ ಯೋಜನೆ:

ಮೋದಿಜಿ ಅವರ ಸರ್ಕಾರವು ಬಡವರ ಪರವಾಗಿ ಮತ್ತು ಭಾರತದ ಎಲ್ಲಾ ಜನಸಾಮಾನ್ಯರಿಗೆ ಕೈ ತಲುಪುವ ರೀತಿಯಲ್ಲಿ ಉತ್ತಮ ಯೋಜನೆಗಳನ್ನು ರೂಪಿಸಿದೆ ಎಂದು ಬಿಜೆಪಿ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್ ಎನ್ ರಘು ಹೇಳಿದರು.

ಅವರು ಇತೀಚಿಗೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಕೇಂದ್ರ ಸರ್ಕಾರದ ಯೋಜನೆಯ ಭಾರತ್ ಅಕ್ಕಿ ವಿತರಣೆಯ ಕಾರ್ಯಕ್ರಮದ ವೇಳೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದರು.ಭಾರತದ ಎಲ್ಲಾ ಜನರು ಏಕತಾಭಾವದಿಂದ ಜೀವನ ನಡೆಸಲು ಆಹಾರ, ಆರೋಗ್ಯ ಮತ್ತು ಔಷಧಿ, ಮನೆ ನಿರ್ಮಾಣ ಮತ್ತು ಇನ್ನಿತರ ಅವಶ್ಯಕತೆ ಇರುವ ವಸ್ತುಗಳ ಬಗ್ಗೆ ಆದ್ಯತೆಯನ್ನು ನೀಡಿದೆ. ಕೇಂದ್ರ ಸರ್ಕಾರದಿಂದ ಬಿಪಿಎಲ್ ಪಡಿತರ ಚೀಟಿ ಹೊಂದಿದವರಿಗೆ 5 ಕೆಜಿ ಅಕ್ಕಿಯನ್ನು ವಿತರಿಸಲಾಗುತ್ತಿದೆ. ಬಿಪಿಎಲ್ ಕಾರ್ಡ್ ವಂಚಿತ ಸಾಮಾನ್ಯ ವರ್ಗದವರಿಗೆ ಕೈಗೆಟಕುವ ದರದಲ್ಲಿ 29 ರು. ಗೆ ಭಾರತದಾದ್ಯಂತ ಅಕ್ಕಿಯನ್ನು ವಿತರಿಸಲಾಗುತ್ತಿದೆ. ಭಾರತದ ಎಲ್ಲಾ ಜನರು ಹಸಿವು ಮುಕ್ತವಾಗಿ ಜೀವನ ನಡೆಸಬೇಕು ಎಂಬುದು ನರೇಂದ್ರ ಮೋದಿಯವರ ಗುರಿ. ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಲ್ಲಿ ಮುಂಚೂಣಿ ಬರಲು ಮೋದಿ ಸರ್ಕಾರದ ಆಡಳಿತ ವ್ಯವಸ್ಥೆ ಸಹಕಾರಿಯಾಗಲಿದೆ. ಭಾರತ ದೇಶವು ಆರ್ಥಿಕ ಅಭಿವೃದ್ಧಿ ಸಾಧಿಸುತ್ತಾ ಮುನ್ನಡೆಯುತ್ತಿದೆ. ದೇಶದ ಎಲ್ಲಾ ಪ್ರತಿಯೊಬ್ಬ ವ್ಯಕ್ತಿಯು ಆರ್ಥಿಕವಾಗಿ ಸ್ವಾವಲಂಬಿ ಜೀವನ ನಡೆಸುವಂತೆ ಬಿಜೆಪಿ ಸರ್ಕಾರ ಪ್ರೇರೇಪಿಸುತ್ತಿದೆ ಎಂದರು.ಭಾರತ್ ಅಕ್ಕಿ ಖರೀದಿಸಲು ಕೆ.ಆರ್‌.ಸಿ ವೃತ್ತದಲ್ಲಿ ಜನರ ಉತ್ಸಾಹ ಹೆಚ್ಚಾಗಿತ್ತು. ಈ ವೇಳೆ ಶಕ್ತಿ ಕೇಂದ್ರ ಅಧ್ಯಕ್ಷ ಯತೀಶ್ ಕುಮಾರ್, ಬಿಜೆಪಿ ಮುಖಂಡರಾದ ಕೆ ಟಿ ಹರೀಶ್, ದುಂಡಳ್ಳಿ ಗ್ರಾ.ಪಂ. ಸದಸ್ಯ ನಿತಿನ್, ಪ್ರಮುಖರಾದ ಕುಮಾರ್, ರಾಜು, ವರ್ತಕ ಪ್ರವೀಣ್, ಹೆಗ್ಗುಳ ನವೀನ್ ಇದ್ದರು.