ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಸರ್ಕಾರಿ ಅಧಿಕಾರಿಯಾಗಿದ್ದ ಮೋಹನ್ ಕೇವಲ ಸಂಬಳಕ್ಕಾಗಿ ಕೆಲಸ ಮಾಡದೇ ಆದರಾಚೆಗೂ ಯೋಚಿಸಿ, ವಿದ್ಯಾರ್ಥಿಗಳ ಕಷ್ಟ- ಸುಖದಲ್ಲಿ ಭಾಗಿಯಾಗುತ್ತಿದ್ದರು. ಸಾವಿರಾರು ಮಂದಿ ಬದುಕು ಕಟ್ಟಿಕೊಳ್ಳಲು ಮಾರ್ಗದರ್ಶನ ನೀಡಿದ ಅವರ ಕಾರ್ಯ ಶ್ಲಾಘನೀಯ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೇಳಿದರು.ನಗರದ ಶತಮಾನೋತ್ಸವ ಭವನದಲ್ಲಿ ಮಾರ್ಗದಾತ ಎನ್.ಮೋಹನ್ ಬಳಗದ ಹೆಸರಿನಲ್ಲಿ ಆಯೋಜಿಸಿದ್ದ ಮೋಹನ್ ಅವರ ಅಭಿನಂದನಾ ಗ್ರಂಥ ಬಿಡುಗಡೆ ಹಾಗೂ ಅವರಿಗೆ ಗೌರವ ಸಮರ್ಪಣೆ ಸಮಾರಂಭದಲ್ಲಿ ಮಾತನಾಡಿ, ಮೋಹನ್ ವಿದ್ಯಾರ್ಥಿಗಳ ಕಷ್ಟ- ಸುಖದಲ್ಲಿ ಭಾಗಿಯಾಗಿ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಸಹಕರಿಸಿದ್ದಾರೆ. ನೂರಾರು ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಬಂದು ಇಂತಹ ಅಭೂತಪೂರ್ವ ಕಾರ್ಯಕ್ರಮ ಆಯೋಜಿಸಿದ್ದು, ಒಬ್ಬ ನಿವೃತ್ತ ಸರಕಾರಿ ಅಧಿಕಾರಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ ಎಂದರು.
ಅತ್ಯಂತ ಸರಳ ವ್ಯಕ್ತಿ ಮೋಹನ್, ಇಲಾಖೆ ಕೆಲಸದ ಜತೆಗೆ ಶಿಕ್ಷಕರಿಲ್ಲದ ಶಾಲೆಗೆ ಹೋಗಿ ಬೋಧನೆ ಮಾಡುವುದು. ಹಾಸ್ಟೆಲ್ಗಳಲ್ಲಿ ಊಟ ಬಡಿಸುವುದು, ಆರ್ಹ ವಿದ್ಯಾಥಿಗಳಿಗೆ ಸರ್ಕಾರಿ ಸವಲತ್ತುಗಳನ್ನು ತಾವೇ ನಿಂತು ಕೊಡಿಸಿದ್ದಾರೆ. ಅವರ ಗರಡಿಯಲ್ಲಿ ಪಳಗಿದ ನೂರಾರು ಮಂದಿ ಇಂದು ಉನ್ನತ ಹುದ್ದೆ ಗಳಿಸಿ ಸಮಾಜದಲ್ಲಿ ಉತ್ತಮ ಗೌರವ ಸಂಪಾದಿಸಿದ್ದಾರೆ ಎಂದರು.ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಮಾತನಾಡಿ, ಮೋಹನ್ ಅವರ ಶಿಷ್ಯವೃಂದ ಅವರನ್ನು ನೆನಪಿಸಿಕೊಂಡು ಇಂತಹ ಅರ್ಥಪೂರ್ಣ ಕಾರ್ಯಕ್ರಮ ಮಾಡುತ್ತಿರುವುದೇ ಅವರ ಸೇವೆ ಯಾವ ಮಟ್ಟಿಗೆ ಇತ್ತು ಎಂಬುದಕ್ಕೆ ಸಾಕ್ಷಿ. ಇಂತಹ ವ್ಯಕ್ತಿ ನಮ್ಮೊಡನೆ ಇದ್ದಾರೆಂಬುದೇ ನಮ್ಮೆಲ್ಲರ ಹೆಮ್ಮೆ ಎಂದು ಹೇಳಿದರು.
ವಿರಕ್ತಮಠದ ಚರಮೂರ್ತಿ ಶಿವರುದ್ರ ಮಹಾಸ್ವಾಮಿ ಆಶೀವರ್ಚನ ನೀಡಿ, ಮೋಹನ್ ಅವರ ನಿವೃತ್ತ ಜೀವನ ಸುಖಮಯವಾಗಿಲಿ ಎಂದು ಶುಭ ಹಾರೈಸಿದರು.ವಿಶ್ರಾಂತ ಪ್ರಾಂಶುಪಾಲ ಕೆ.ಎಂ.ಮಾಯಿಗೇಗೌಡ ಮೋಹನ್ ಕುರಿತು ಅಭಿನಂದನಾ ಭಾಷಣ ಮಾಡಿದರು. ವಿಶ್ರಾಂತ ಪ್ರಾದ್ಯಾಪಕಿ ಬಿ.ಟಿ.ನೇತ್ರಾವತಿ ಗೌಡ ಅಭಿನಂದನಾ ಗ್ರಂಥ ಕುರಿತು ಮಾತನಾಡಿದರು. ನಗರಸಭಾ ಸದಸ್ಯೆ ಮಂಗಳಮ್ಮ, ಎಸ್.ಸಿ.ಶೇಖರ್, ರಮೇಶ್, ಚಂದ್ರು, ರಮೇಶ್ ಗೌಡ, ತಿಮ್ಮೇಶ್ ಪ್ರಭು, ಸುರೇಶ್, ರಾಜಶೇಖರ್ ಹಾಜರಿದ್ದರು.