ಮಹಿಳಾ ದಿನಾಚರಣೆ । ಹಳೇಬೀಡು ಕೆಪಿಎಸ್ ಶಾಲೆಯಲ್ಲಿ ಆಯೋಜನೆ । ಮಹಿಳಾ ಶಿಕ್ಷಕರಿಗೆ ಸನ್ಮಾನಕನ್ನಡಪ್ರಭ ವಾರ್ತೆ ಹಳೇಬೀಡು
ಭಾರತ ದೇಶದ ಮಾತೆ ಭಾರತ ಮಾತೆ, ಕರ್ನಾಟಕ ರಾಜ್ಯದ ಮಾತೆ ಕನ್ನಡ ರಾಜೇಶ್ವರಿ, ಭಾರತ ದೇಶದ ಮೊದಲನೇ ಪ್ರಜೆ ರಾಷ್ಟ್ರಪತಿಯು ಮಹಿಳೆ. ಆದ್ದರಿಂದ ನಾವು ಮಹಿಳೆಯರಿಗೆ ಅತ್ಯಂತ ಗೌರವ ನೀಡಬೇಕು ಎಂದು ಸರ್ಕಾರಿ ಕೆಪಿಎಸ್ ಶಾಲೆಯ ಉಪ ಪ್ರಾಂಶುಪಾಲ ಮುಳ್ಳಯ್ಯ ತಿಳಿಸಿದರು.ಹಳೇಬೀಡಿನ ಸರ್ಕಾರಿ ಕೆಪಿಎಸ್ ಶಾಲೆಯ ಹಿರಿಯ ಪ್ರಾಥಮಿಕ ಪಾಠಶಾಲೆಯ ವಿಭಾಗದಿಂದ ಮಹಿಳಾ ದಿನಾಚರಣೆ ಅಂಗವಾಗಿ ನಿತ್ಯ ದಾಸೋಹ ನೀಡುವ ಮಹಿಳೆಯರಿಗೆ ಹಾಗೂ ಶಾಲೆಯ ಮಹಿಳಾ ಶಿಕ್ಷಕರಿಗೆ ಸನ್ಮಾನ ಹಾಗೂ ೭ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರವೇಶಪತ್ರ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಾಸನ ಜಿಲ್ಲೆಯಲ್ಲಿ ಹಳೇಬೀಡು ಸರ್ಕಾರಿ ಕೆಪಿಎಸ್ ಶಾಲೆಯಲ್ಲಿ ೧೬೦೦ ಮಕ್ಕಳು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅದರಲ್ಲಿ ಪ್ರತಿ ವರ್ಷವೂ ಒಳ್ಳೆಯ ಫಲಿತಾಂಶ ನೀಡುತ್ತ ಬರುತ್ತಿದ್ದಾರೆ. ಈ ಶಾಲೆಯು ಯಾವ ಖಾಸಗಿ ಶಾಲೆಗಿಂತ ಕಡಿಮೆ ಇಲ್ಲದೆ ಅತ್ಯುತ್ತಮ ಕೊಠಡಿ ಹೊಂದಿದೆ. ಸರ್ಕಾರವು ಒಂದು ಮಗುವಿಗೆ ಎರಡು ಲಕ್ಷ ರು. ಖರ್ಚು ಮಾಡುತ್ತದೆ. ಹಾಗಾಗಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಸರ್ಕಾರಿ ಶಾಲೆಯನ್ನು ಉಳಿಸಬೇಕು ಎಂದು ತಿಳಿಸಿದರು.ಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷ ಪೂರ್ಣೇಶ್ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸದ ಜತೆಗೆ ಪ್ರತಿದಿನವೂ ಊಟ, ಬಟ್ಟೆ, ಪುಸ್ತಕಗಳ ಸೌಲಭ್ಯಗಳನ್ನು ಹೊಂದಿರುತ್ತದೆ. ಶಿಕ್ಷಕರಿಗೆ ಹೆಚ್ಚಿನ ರೀತಿಯಲ್ಲಿ ತರಬೇತಿ ನೀಡಿ ಮಕ್ಕಳನ್ನು ವಿದ್ಯಾವಂತರಾಗಿ ಮಾಡಲು ಸರ್ಕಾರ ಮುಂದಾಗಿದೆ ಎಂದರು.
ಸರ್ಕಾರಿ ಕೆಪಿಎಸ್ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ರಘುನಾಥ್ ಮಾತನಾಡಿ, ಈ ಶಾಲೆಯ ಮಕ್ಕಳಿಗೆ ನಿತ್ಯ ಊಟ ನೀಡುವ (ಮಹಿಳಾ) ತಾಯಂದಿರಿಗೆ ಎಷ್ಟು ಧನ್ಯವಾದ ಅರ್ಪಿಸಿದರೂ ಸಾಲದು. ಇಂದಿನ ಸಮಾಜದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಗೌರವ ಸ್ಥಾನ ಇದೆ. ಅದೇ ರೀತಿ ತಂದೆ ತಾಯಿಗಳ ಹೆಚ್ಚು ಗೌರವ ನೀಡಬೇಕು. ಇಂದಿನ ಮಕ್ಕಳು ಈ ಇಬ್ಬರ ಋಣವನ್ನು ಯಾವ ಕಾರಣಕ್ಕೂ ತೀರಿಸಲು ಆಗುವುದಿಲ್ಲ. ಮಕ್ಕಳು ಶಾಲೆಯಲ್ಲಿ ಓದಿ ಒಳ್ಳೆ ಫಲಿತಾಂಶ ನೀಡಿ ಶಿಕ್ಷಕರಿಗೆ ಗೌರವ ನೀಡಬೇಕು. ಇದರ ಜತೆಗೆ ಸಂಸ್ಕಾರವನ್ನು ಬೆಳೆಸಬೇಕು ಎಂದು ತಿಳಿಸಿದರು.ಮುಖ್ಯ ಶಿಕ್ಷಕ ನಾಗರಾಜು ಮಾತನಾಡಿ, ‘ನಾನು ಈ ಶಾಲೆಯಲ್ಲಿ ಒಂದನೇ ತರಗತಿಯಿಂದ ೧೦ನೇ ತರಗತಿಯ ವಿದ್ಯಾರ್ಥಿಯಾಗಿದ್ದೆ. ಈ ಶಾಲೆ ನನ್ನ ಕುಟುಂಬ ಇದ್ದ ಹಾಗೆ. ಈ ಶಾಲೆಯ ಮಕ್ಕಳು ಸಹ ನನ್ನ ಮಕ್ಕಳು ಇದ್ದ ಹಾಗೆ. ಅತಿ ವಿಶ್ವಾಸ ಪ್ರೀತಿಯಿಂದ ಮಕ್ಕಳನ್ನು ಪಾಠ ಪ್ರವಚನ ನೀಡುತ್ತ ಬಂದಿದ್ದೇವೆ. ಇಲ್ಲಿ ಒಳ್ಳೆಯ ಕೊಠಡಿ, ಸಮವಸ್ತ್ರ, ಮಕ್ಕಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಂಡು ಬಂದಿದ್ದೇವೆ. ಹಾಗಾಗಿ ಈ ಶಾಲೆಗೆ ಹೆಚ್ಚಿನ ಬೇಡಿಕೆ ಇದೆ. ಇದಕ್ಕೆ ಪೋಷಕರ ಸಹಕಾರ ಮತ್ತು ಶಾಲಾ ಅಭಿವೃದ್ಧಿಯ ಸದಸ್ಯರ ಸಹಕಾರ ಹೆಚ್ಚಿದೆ ಎಂದು ತಿಳಿಸಿದರು.
ದೈಹಿಕ ಶಿಕ್ಷಕರಾದ ಮಹೇಶ್ ಹಾಗೂ ಧರ್ಮೇಗೌಡ, ಸುರೇಶ್, ಕಲಾ ಶಿಕ್ಷಕರಾದ ಶಂಕರೇಗೌಡ, ಹೆಚ್ಚಿನ ಶಾಲಾ ಶಿಕ್ಷಕರು, ಮಕ್ಕಳು, ನಿತ್ಯ ಅಡುಗೆ ಮಾಡುವ ಮಹಿಳೆಯರು ಇದ್ದರು.ಹಳೇಬೀಡಿನ ಸರ್ಕಾರಿ ಕೆಪಿಎಸ್ ಶಾಲೆಯ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ನಿತ್ಯ ದಾಸೋಹ ನೀಡುವ ಮಹಿಳೆಯರಿಗೆ ಶಾಲೆಯ ಪರವಾಗಿ ಸನ್ಮಾನ ಮಾಡಲಾಯಿತು.